ಕಾರವಾರದ ತೋಡೂರಿನ ಸಣ್ಣು ಗೌಡಾ ಅವರು ಬೆಳೆಸಿದ್ದ ತೆಂಗಿನ ಮರವನ್ನು ಭಜನಕೇರಿಯ ಜಗ್ಗು ಗುನಗಿ, ಪ್ರೇಮಾನಂದ ಗುನಗಿ ಹಾಗೂ ಅಮೀನ ಸಾಬ್ ಸೇರಿ ಕಡಿದಿದ್ದಾರೆ. ಸಣ್ಣು ಗೌಡ ಅವರ ಮಗ ಸುರೇಶ ಗೌಡ ಅವರು ಜನರ ಓಡಾಟಕ್ಕೆ ದಾರಿ ಬಿಡಿದ ಸಿಟ್ಟಿಗೆ ಕಲ್ಪವೃಕ್ಷ ಬಲಿಯಾಗಿದೆ.
ಕಾರವಾರದ ತೋಡೂರು ಕಾಲೋನಿಯಲ್ಲಿ ಸುರೇಶ ಜಂಗಾ ಗೌಡ ಅವರು ವಾಸವಾಗಿದ್ದಾರೆ. ಅಲ್ಲಿ ಸುರೇಶ ಗೌಡ ಅವರ ಹೆಸರಿನಲ್ಲಿ 11 ಗುಂಟೆ ಭೂಮಿಯಿದ್ದು, ಅದೇ ಭೂಮಿಯಲ್ಲಿ ಭಜನಕೇರಿಯ ಜನರ ಓಡಾಟಕ್ಕೆ ಅನುಕೂಲವಾಗುವ ಕಾಲು ದಾರಿಯಿದೆ. ಆ ದಾರಿಯಿಂದ ಜನ ಓಡಾಟ ನಡೆಸಲು ಸುರೇಶ ಗೌಡ ಅವರು ಅಡ್ಡಿಪಡಿಸಿದ್ದು, ಈ ವಿಷಯವಾಗಿ 2023ರಲ್ಲಿಯೇ ಜಗಳ ನಡೆದಿದೆ. ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆಯುತ್ತಿದೆ.
ಹೀಗಿರುವಾಗ, ಊರಿನ ಕೆಲವರ ಜೊತೆ ಚರ್ಚಿಸಿದ ಸುರೇಶ ಗೌಡ ಅವರು ಆ ದಾರಿಯಲ್ಲಿ ಕಪೌಂಡ್ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ಸಹಿಸದ ತೋಡೂರು ಭಜನಕೇರಿಯ ಜಗ್ಗು ಗುನಗಿ, ಪ್ರೇಮಾನಂದ ಗುನಗಿ ಹಾಗೂ ಅಮೀನ ಸಾಬ್ ಸೇರಿ ಅಲ್ಲಿದ್ದ ತೆಂಗಿನ ಮರವನ್ನು ಕಡಿದು ನಾಶ ಮಾಡಿದ್ದಾರೆ. ತಾನು ನೆಟ್ಟು ಬೆಳೆಸಿದ ತೆಂಗಿನ ಮರ ಕಡಿದಿದನ್ನು ನೋಡಿ ಸುರೇಶ ಗೌಡ ಅವರ ತಾಯಿ ಸಣ್ಣು ಗೌಡ ಅವರು ಸಿಟ್ಟಾಗಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಸಣ್ಣು ಗೌಡ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಲ್ಲಿ ಸಮಾಧಾನವಾಗದ ಕಾರಣ ಕೋರ್ಟಿಗೆ ಹೋಗಿದ್ದಾರೆ.
ಸದ್ಯ ಕಾರವಾರ ನ್ಯಾಯಾಲಯವೂ ತೆಂಗಿನ ಮರ ಕಟಾವು ಮಾಡಿದ ಆ ಮೂವರ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದೆ. ಈ ಹಿನ್ನಲೆ ಜಗ್ಗು ಗುನಗಿ, ಪ್ರೇಮಾನಂದ ಗುನಗಿ ಹಾಗೂ ಅಮೀನ ಸಾಬ್ ಅವರ ವಿರುದ್ಧ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.