ಶಿರಸಿಯ ಬೆಟ್ಟಕೊಪ್ಪದಲ್ಲಿ ನಡೆಯುವ `ನಮ್ಮನೆ ಹಬ್ಬ’ಕ್ಕೆ ಈ ಬಾರಿ ಚಿತ್ರನಟ ದೊಡ್ಡಣ್ಣ ಬರಲಿದ್ದಾರೆ. ಡಿಸೆಂಬರ್ 6ರಂದು ಅವರು ಅಲ್ಲಿ ಯಕ್ಷಗಾನ ನೋಡಲಿದ್ದಾರೆ. ಅಭಿಮಾನಿಗಳ ಸೆಲ್ಪಿಗೂ ಸಿಗಲಿದ್ದಾರೆ!
ರಾಜ್ಯದಲ್ಲೇ ಗಮನ ಸೆಳೆದ ಅತಿ ವಿಶಿಷ್ಟ ಕಲ್ಪನೆಯ `ನಮ್ಮನೆ ಹಬ್ಬ’ ಈ ಬಾರಿ ಡಿಸೆಂಬರ್ 6ರ ಶನಿವಾರ ಸಂಜೆ 5ಗಂಟೆಗೆ ನಿಗದಿಯಾಗಿದೆ. ವಿಶ್ವಶಾಂತಿ ಸೇವಾ ಟ್ರಸ್ಟ್ ಆಯೋಜಿತ ಹಬ್ಬದಲ್ಲಿ ಪ್ರಸಿದ್ದ ಕಲಾವಿದರಿಂದ ಭಜನಾಮೃತ, ಯಕ್ಷ ರೂಪಕ, ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪ್ರಸಿದ್ಧ ಚಿತ್ರ ನಟ ದೊಡ್ಡಣ್ಣ ಅವರು ಆಗಮಿಸಲಿದ್ದಾರೆ. ಆ ದಿನ ಸಂಜೆ 5ಕ್ಕೆ ಶ್ರೀಧರರ ಭಜನಾಮೃತ ಗಾಯನ ನಡೆಯಲಿದ್ದು ಪ್ರಸಿದ್ಧ ಗಾಯಕ ವಿಶ್ವೇಶ್ವರ ಖರ್ವಾ ಹಾಡಲಿದ್ದಾರೆ. ಗುರುರಾಜ ಆಡುಕಳ ತಬಲಾ ಹಾಗೂ ಅಜಯ್ ವರ್ಗಾಸರ ಹಾರ್ಮೋನಿಯಂ ಗಾಯನಕ್ಕೆ ಸಹಕಾರ ನೀಡಲಿದೆ.
ನೂತನ ರೂಪಕ ಲೋಕಾರ್ಪಣೆ:
ಸಂಜೆ 6.05ಕ್ಕೆ ಗೋವಿನ ಮಹತ್ವ ಸಾರುವ ವಿಶಿಷ್ಟ ಕಥಾಭಾಗ ಒಳಗೊಂಡ ವಿಶ್ವ ಶಾಂತಿ ಸರಣಿಯ 11ನೇ ನೂತನ ಯಕ್ಷ ನೃತ್ಯ ರೂಪಕ `ವಂದೇ ಗೋವಿಂದಮ್’ ಪ್ರಥಮ ಪ್ರದರ್ಶನದ ಮೂಲಕ ಲೋಕಾರ್ಪಣೆ ಆಗಲಿದೆ.
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಕಬ್ಬಿನಾಲೆ ವಸಂತ ಭಾರಧ್ವಾಜ ಅವರು ರಚಿಸಿದ ಈ ರೂಪಕವನ್ನು ಹಲವು ದಾಖಲೆಗೈದ ಯಕ್ಷಗಾನ ಯುವ ಕಲಾವಿದೆ ತುಳಸಿ ಹೆಗಡೆ ಅವರು ಪ್ರಸ್ತುತಗೊಳಿಸಲಿದ್ದಾರೆ. ಚಿಂತಕ ರಮೇಶ ಹೆಗಡೆ ಹಳೆಕಾನಗೋಡರ ಮೂಲ ಕಲ್ಪನೆಯ ರೂಪಕಕ್ಕೆ ನೃತ್ಯ ನಿರ್ದೇಶನವನ್ನು ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ನೀಡಿದ್ದಾರೆ. ಗದ್ಯ ಸಾಹಿತ್ಯವನ್ನು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಒದಗಿಸಿದ್ದಾರೆ. ಹಿನ್ನೆಲೆ
ಧ್ವನಿಯನ್ನು ಶ್ರೀಪಾದ ಭಟ್ ನೀಡಿದ್ದಾರೆ. ತಾಳಾಭ್ಯಾಸ ನೆರವು ಜಿ ಎಸ್ ಭಟ್, ಧ್ವನಿ ಗ್ರಹಣವನ್ನು ಉದಯ ಪೂಜಾರಿ ನೀಡಿದ್ದಾರೆ. ರಂಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಲೃತ ಕೊಳಗಿ ಕೇಶವ ಹೆಗಡೆ ಭಾಗವತರಾಗಿ ಧ್ವನಿಯಾಗಲಿದ್ದಾರೆ. ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ.
ಪ್ರಶಸ್ತಿ ಪ್ರದಾನ:
ಸಂಜೆ 7.25 ನಮ್ಮನೆ ಹಬ್ಬದ ಉದ್ಘಾಟನೆ, ಪ್ರಶಸ್ತಿ ಪ್ರದಾನ, ದಿನದರ್ಶಿಕೆ ಬಿಡುಗಡೆ ನಡೆಯಲಿದೆ. ರಂಗಭೂಮಿಯ ಹಿರಿಯ ಕಲಾವಿದೆ ಬಿ ಜಯಶ್ರೀ, ವೈದ್ಯಕೀಯ ರಾಸಾಯನಿಕ ಕ್ಷೇತ್ರದಲ್ಲಿ ಅನುಪಮ ಕೊಡುಗೆ ನೀಡಿದ ರಾಮನಂದನ ಹೆಗಡೆ ಅವರಿಗೆ `ನಮ್ಮನೆ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. ನಮ್ಮನೆ ಕಿಶೋರ ಪುರಸ್ಕಾರಕ್ಕೆ ತೇಜಸ್ವಿ ಗಾಂವಕರ ಅವರು ಭಾಜನರಾಗಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಭಾಗಿಯಾಗಲಿದ್ದಾರೆ ಎಂದು ಟ್ರಸ್ಟಿನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಅವರು ತಿಳಿಸಿದರು.