`ಶಿರಸಿ-ತಾಳಗುಪ್ಪ ಹುಬ್ಬಳ್ಳಿ ರೈಲು ಮಾರ್ಗ, ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಗೋಕರ್ಣ ಮತ್ತು ಹೊನ್ನಾವರ ರೈಲ್ವೆ ನಿಲ್ದಾಣ ಆಧುನೀಕರಣ ಹಾಗೂ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸೇರಿ ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಯೋಜನೆಗಳ ರೂಪುರೇಷೆಗಳು ಅಚ್ಚುಕಟ್ಟಾಗಿ ನಡೆಯುತ್ತಿದೆ’ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ಹೇಳಿದ್ದಾರೆ.
ಕಾರವಾರ ರೈಲು ನಿಲ್ದಾಣದಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದು, `ಮಲೆನಾಡು ಮತ್ತು ಬಯಲುಸೀಮೆಯನ್ನು ಜೋಡಿಸುವ ಉದ್ದೇಶದಿಂದ ತಾಳಗುಪ್ಪ-ಶಿರಸಿ-ಹುಬ್ಬಳಿ 158 ಕಿಮೀ ಉದ್ದದ ಹೊಸ ಮಾರ್ಗವು ರೈಲ್ವೆ ಮಂಡಳಿಯಲ್ಲಿ ಅನುಮೋದನೆಯಾಗಿದೆ’ ಎಂಬ ಮಾಹಿತಿ ನೀಡಿದರು. `ಈ ಯೋಜನೆ ಸಚಿವ ಸಂಪುಟದಲ್ಲಿ ಅನುಮೋದನೆಯಾಗಬೇಕಿದೆ. ಈ ಯೋಜನೆ ಮತ್ತು ತಾಳಗುಪ್ಪ ಹೊನ್ನಾವರ ಹೊಸ ಮಾರ್ಗಕ್ಕೆ ಒಟ್ಟು ಸುಮಾರು 21 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಗೋಕರ್ಣ ಮತ್ತು ಹೊನ್ನಾವರ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾಮಗಾರಿ ಪ್ರಾರಂಭವಾಗಿದೆ’ ಎಂದವರು ತಿಳಿಸಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಬ್ಬಳ್ಳಿ- ಅಂಕೋಲಾ ನಡುವಿನ 164 ಕಿ.ಮೀ ಉದ್ದದ ನೂತನ ಯೋಜನೆಯನ್ನು 16,500 ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆಯಿಂದ ಮಾಡಲಾಗುತ್ತಿದೆ. ಈಗಾಗಲೇ ಸರ್ವೇ, ಡಿಪಿಆರ್, ಫಾರೆಸಟ್ ಕ್ಲಿಯರೆನ್ಸ್ ಕೂಡ ಮುಕ್ತಾಯಗೊಂಡಿದ್ದು, ವನ್ಯಜೀವಿ ಕ್ಲಿಯರೆನ್ಸ್ ಬಾಕಿ ಇದೆ. ಇನ್ನು 5-6 ತಿಂಗಳಿನೊಳಗೆ ಇದಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ಯಾವುದೇ ರೀತಿಯಲ್ಲಿ ಅನಾನುಕುಲವಾಗುವುದಿಲ್ಲ’ ಎಂದು ಹೇಳಿದರು.
`1997-98 ರಲ್ಲಿ ಆರಂಭಿಸಿದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕಲಘಟಗಿವರೆಗೆ ಮಾಡಲಾಗಿದ್ದು, ಕೆಲವು ಕಾರಣಗಳಿಂದ ನಿಂತುಹೊಗಿತ್ತು. ಈ ಯೋಜನೆಗೆ 2530 ಎಕರೆ ಜಾಗ ಬೇಕಿದೆ’ ಎಂದವರು ವಿವರಿಸಿದರು. `ಕೊಂಕಣ ರೈಲ್ವೆಯ ವಿಲೀನ ಪ್ರಕ್ರಿಯೆ ಚರ್ಚೆಯ ಹಂತದಲ್ಲಿದ್ದು, ಅವುಗಳ ಆಗುಹೋಗಗಳ ಬಗ್ಗೆ ಚರ್ಚಿಸಲಾಗುತ್ತಿದೆ. ರೈಲ್ವೆಯ ಬಹುತೇಕ ರೈಲು ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದ್ದು, ಕೊಂಕಣ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ. ದಾಂಡೇಲಿಯ ಅಂಬೇವಾಡಿಗೆ ಮುಂದಿನ ತಿಂಗಳನಿAದ ರೈಲ್ವೆ ಸಂಚಾರ ಪ್ರಾರಂಭಿಸಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ರೈಲ್ವೆ ಮೆನೇಜರ್ ಆಶಾ ಶೆಟ್ಟಿ, ಮುಖ್ಯ ಇಂಜಿನಿಯರ್ ಪ್ರಕಾಶ್, ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಡಿ ಭಟ್, ಹಿರಿಯ ಇಂಜಿನಿಯರ್ ಉದಯ ಭಾಸ್ಕರ್, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಹಿರಿಯ ಪ್ರಾದೇಶಿಕ ಆರ್ಥಿಕ ಸಲಹೆಗಾರ ಪ್ರದೀಪ್ ಬಾಳಿಗ ಮತ್ತಿತರರು ಇದ್ದರು.