`ಕಾರವಾರ – ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮತ್ತು ಗೋಪಾಲಕೃಷ್ಣ ನಾಯಕ ನಡುವೆ ರಾಜಕೀಯ ಭಿನ್ನಾಭಿಪ್ರಾಯವಿದ್ದರೂ ವೈಯಕ್ತಿಕ ದ್ವೇಷ ಇಲ್ಲ. ಹೀಗಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಅಂಕೋಲಾದ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ನಾಯಕ ಅವರ ಕೊಲೆ ಪ್ರಯತ್ನದ ಹಿಂದೆ ಶಾಸಕ ಸತೀಶ್ ಸೈಲ್ ಪಾತ್ರ ಏನೂ ಇಲ್ಲ’ ಎಂದು ಸತೀಶ್ ಸೈಲ್ ಅವರ ಆಪ್ತ ಶಂಭು ಶೆಟ್ಟಿ ಅವರು ಹೇಳಿದ್ದಾರೆ.
`ಅನಗತ್ಯವಾಗಿ ಈ ಪ್ರಕರಣದಲ್ಲಿ ಸತೀಶ್ ಸೈಲ್ ಅವರ ಹೆಸರು ಹಾಳಾಗುತ್ತಿದೆ’ ಎಂದವರು ಆಕ್ಷೇಪವ್ಯಕ್ತಪಡಿಸಿದ್ದಾರೆ. `ಅಗತ್ಯವಿದ್ದರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಲಿ’ ಎಂದು ಸಹ ಶಂಭು ಶೆಟ್ಟಿ ಸವಾಲು ಹಾಕಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಂಕೋಲಾದ ಕೆಪಿಸಿಸಿ ಮುಖಂಡ ಗೋಪಾಲಕೃಷ್ಣ ನಾಯಕರ ಮೇಲೆ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಶಾಸಕ ಸತೀಶ ಸೈಲ್ ಅವರ ಯಾವುದೇ ಪಾತ್ರವಿಲ್ಲ. ಸುಖಾಸುಮ್ಮನೆ ಇಲ್ಲಿ ಸತೀಶ್ ಸೈಲ್ ಹೆಸರನ್ನು ಎಳೆದು ತರಲಾಗುತ್ತಿದೆ. ಅಗತ್ಯವಿದ್ದರೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮಾಡಲಿ. ಆರೋಪ ಸಾಭೀತಾದರೆ ಕಠಿಣ ಕ್ರಮ ಜರುಗಿಸಲಿ’ ಎಂದು ಹೇಳಿದರು. `ಸೈಲ್ ಅವರ ವಿರುದ್ಧ ಗೋಪಾಲಕೃಷ್ಣ ನಾಯಕ ಮಾಡಿದ ಆರೋಪಗಳು ಆಧಾರರಹಿತವಾಗಿದ್ದು, ಆರೋಪಕ್ಕೆ ದಾಖಲೆಗಳಿದ್ದರೆ ಅವರು ನೇರವಾಗಿ ಪೋಲಿಸರಿಗೆ ನೀಡಬೇಕು’ ಎಂದು ಆಗ್ರಹಿಸಿದರು.
`ಗೋಪಾಲಕೃಷ್ಣ ನಾಯಕ ಅವರು ಮಾಡಿದ ಆರೋಪಗಳಿಂದ ಕೇವಲ ಸತೀಶ ಸೈಲ್ ವರಿಗೆ ಮಾತ್ರವಲ್ಲ. ಇಡೀ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ ಗೋಪಾಲಕೃಷ್ಣ ನಾಯಕ ಅವರು ತಮ್ಮ ಮೇಲೆ ನಡೆದ ದಾಳಿಯ ಹಿಂದೆ ಇರುವವರ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ಕೆಪಿಸಿಸಿಗೆ ದೂರು ನೀಡಬೇಕು’ ಎಂದು ಒತ್ತಾಯಿಸಿದರು. `ಗೋಪಾಲಕೃಷ್ಣ ನಾಯಕ ಅವರು ಮಾಡಿದ ಆರೋಪ ಸುಳ್ಳು ಎಂದಾದರೆ ಅವರ ವಿರುದ್ಧವೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು’ ಎಂದು ಹೇಳಿದರು. ಘಟನೆ ಬಗ್ಗೆ ಈವರೆಗೂ ಮೌನವಾಗಿಯೇ ಇದ್ದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ್ ಅವರು ಈ ದಿನ ಆ ಬಗ್ಗೆ ಮಾತನಾಡಿದ್ದು, `ಜಿಲ್ಲಾ ಕಾಂಗ್ರೆಸ್ ಕೂಡ ಈ ಘಟನೆಯನ್ನು ಖಂಡಿಸಿದೆ’ ಎಂದರು. `ಪ್ರೀತಿ ಆಧಾರಿತ ರಾಜಕಾರಣಕ್ಕೆ ಕಾಂಗ್ರೆಸ್ ಬದ್ಧವಾಗಿದ್ದು, ಈ ಘಟನೆ ಹಿಂದಿರುವ ನಿಜಾಂಶಗಳು ಶೀಘ್ರದಲ್ಲೇ ಬಹಿರಂಗವಾಗಬೇಕು’ ಎಂದು ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ `ಶಿರೂರು ಗುಡ್ಡದ ದುರಂತದ ವೇಳೆ ಸಿಎಂ ಸಿದ್ದರಾಮಯ್ಯ ಅಂಕೋಲಾಕ್ಕೆ ಬಂದಾಗ ಗೋಪಾಲಕೃಷ್ಣ ನಾಯಕ ಪ್ರೋಟೋಕಾಲ್ ಉಲ್ಲಂಘಿಸಿ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು’ ಎಂದು ದೂರಿದರು. `ಆ ವೇಳೆ ಶಾಸಕ ಸತೀಶ ಸೈಲ್ ಅವರು ಸೀಎಂ ಬರುವವರೆಗೆ ಗೋಪಾಲಕೃಷ್ಣ ನಾಯಕ ಅವರ ಮನೆ ಗೇಟ್ ಬಳಿ ಕಾದಿದ್ದರು’ ಎಂಬ ವಿಷಯ ತಿಳಿಸಿದರು. ಅರವಿಂದ ಕಲಗುಟ್ಕರ್, ಕೃಷ್ಣ ಮೇಥಾ, ಸೀಮಾ ಪಾಟೀಲ್, ಜ್ಯೋತಿ, ದೀಪಕ್ ವೇರ್ಣೇಕರ್, ದಿಲ್ಯಾದ್, ಸಿದ್ದಾರ್ಥ, ನೂತನ ಜೈನ್ ಇತರರು ಶಾಸಕ ಸತೀಶ್ ಸೈಲ್ ಅವರ ಬೆಂಬಲವಾಗಿ ಮಾತನಾಡಿದರು.