ಜಪಾನ್’ನ ಝಕೋ ಅವರು ಭಿಕ್ಷೆ ಬೇಡುವುದಕ್ಕಾಗಿಯೇ ಭಾರತಕ್ಕೆ ಬಂದಿದ್ದಾರೆ. ಗೋಕರ್ಣದ ಬೀದಿ ಬೀದಿಯಲ್ಲಿ ಕೊಳಲು ಊದಿ ಭಿಕ್ಷೆ ಬೇಡುವ ಅವರಿಗೆ ಜನ ಚಿಲ್ಲರೆ ಕಾಸು ಹಾಕುತ್ತಿದ್ದಾರೆ!
ಕರ್ನಾಟಕದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇಲ್ಲಿ ಭಿಕ್ಷೆ ಬೇಡುವುದು ಅಪರಾಧವಾಗಿದ್ದು, ಅದರ ಬಗ್ಗೆ ಅರಿವಿದ್ದರೂ ಈ ನೆಲದ ಕಾನೂನು ಗಾಳಿಗೆ ತೂರಿ ಝಕೋ ಅವರು ಭಿಕ್ಷೆ ಬೇಡುತ್ತಿದ್ದಾರೆ. ಪ್ರವಾಸಿ ವೀಸಾ ಆಧಾರದಲ್ಲಿ ಝಕೋ ಅವರು ಭಾರತಕ್ಕೆ ಬಂದಿದ್ದಾರೆ. ಈ ಮಹಿಳೆ ಸದ್ಯ ಗೋಕರ್ಣದ ಮಹಾಗಣಪತಿ ಮಂದಿರದ ಮಂಭಾಗ ಕಾಣಿಸಿಕೊಳ್ಳುತ್ತಿದ್ದಾರೆ.
ಇಲ್ಲಿನ ಇಂದ್ರೇಶ್ವರ ದೇವಾಲಯದ ಬಳಿ ಕುಳಿತ ಝಕೋ ಅವರು ತಾಟಿನಲ್ಲಿ ಕೃಷ್ಣನ ಮೂರ್ತಿಯಿರಿಸಿಕೊಂಡು ಕೊಳಲು ಊದುತ್ತಾರೆ. ಆಗಾಗ ವಿವಿಧ ಹಾಡುಗಳನ್ನು ಹೇಳಿ ಜನರ ಮುಂದೆ ಕೈ ಒಡ್ಡುತ್ತಾರೆ. ಬಸ್ ನಿಲ್ದಾಣ, ರಥಬೀದಿ ಸೇರಿ ವಿವಿಧ ಭಾಗಗಳಿಗೂ ಸಂಚರಿಸಿ ಝಕೋ ಅವರು ಭಿಕ್ಷಾಟನೆ ಮಾಡುತ್ತಿದ್ದಾರೆ.