ಶಿರಸಿಯ ಶ್ರೀಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 2ರಂದು ನಡೆಯಲಿರುವ ಈ ಭವ್ಯ ರಥೋತ್ಸವದ ದಿನ ಭಕ್ತರಿಗೆ ವಿತರಿಸಲು ವಿಶೇಷ ಪ್ರಸಾದ ಸಿದ್ಧವಾಗುತ್ತಿದೆ.
ಯುಗಾದಿ ಹಬ್ಬದ ದಿನದಿಂದಲೇ ದೇವಸ್ಥಾನದ ಪ್ರಸಾದ ಗೃಹದಲ್ಲಿ ಅತ್ರಾಸ ಹಾಗೂ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ದೇವಸ್ಥಾನದ ಸಂಪ್ರದಾಯದAತೆ ಅತ್ಯಂತ ಶುದ್ಧವಾದ ಅಕ್ಕಿ, ಬೆಲ್ಲ, ಬೋಳಕಾಳು ಮತ್ತು ಏಲಕ್ಕಿ ಬಳಸಿ ಅತ್ರಾಸ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಈ ಅತ್ರಾಸಕ್ಕೆ ಎಣ್ಣೆ ಬಳಸದೇ ತುಪ್ಪವನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ತುಪ್ಪದಲ್ಲಿ ಮಿಂದ ಅತ್ರಾಸವನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗುತ್ತಿದೆ. ಸುಮಾರು 15 ಸಾವಿರ ಅತ್ರಾಸ ಸಿದ್ಧಪಡಿಸಲಾಗುತ್ತಿದ್ದು, ಬರುವ ವ್ಯವಸ್ಥಿತವಾಗಿ ಭಕ್ತರಿಗೆ ಅದನ್ನು ಹಂಚುವ ತಯಾರಿ ನಡೆದಿದೆ.
ಕಳೆದ ಎಂಟು ದಿನಗಳಿಂದ ಇಲ್ಲಿ ಪ್ರಸಾದ ಸಿದ್ಧಪಡಿಸುವ ಕಾರ್ಯದಲ್ಲಿ ಸ್ವಯಂ ಸೇವಕರು ತೊಡಗಿದ್ದಾರೆ. ಪ್ರಸಾದದ ಗುಣಮಟ್ಟ ಮತ್ತು ಸಾಂಪ್ರದಾಯಿಕ ರುಚಿಯನ್ನು ಕಾಪಾಡಿಕೊಳ್ಳಲು ವಿಶೇಷ ಗಮನ ಹರಿಸಲಾಗಿದ್ದು, ಯಾವುದೇ ರಾಸಾಯನಿಕ ಬಳಕೆ ಮಾಡುತ್ತಿಲ್ಲ. ನೈಸರ್ಗಿಕ ಪದಾರ್ಥಗಳಿಂದಲೇ ಈ ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಪ್ರಸಾದ ತಯಾರಿಯ ಈ ಮಹತ್ಕಾರ್ಯದಲ್ಲಿ ಪ್ರಸಾದ ತಯಾರಿಕಾ ತಜ್ಞರು ಮತ್ತು ಸ್ವಯಂ ಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಮೂವರು ಪ್ರಸಾದ ತಯಾರಿಕಾ ಪರಿಣತರು ಅತ್ರಾಸ ತಯಾರಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಕಳೆದ ಎಂಟು ದಿನಗಳಿಂದ ಇಬ್ಬರು ಲಾಡು ತಯಾರಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಪೂರ್ಣ ಸಿದ್ಧತೆಯ ಉಸ್ತುವಾರಿಯನ್ನು ಗಣಪತಿ ಭಟ್ ಸೂರನಜಡ್ಡಿ ಅವರುವಹಿಸಿಕೊಂಡಿದ್ದಾರೆ. ಅವರಿಗೆ ಪೂರಕವಾಗಿ ಅನೇಕರು ಸಕ್ರಿಯವಾಗಿ ಕೈಜೋಡಿಸಿ ಪ್ರಸಾದ ವಿತರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಏಪ್ರಿಲ್ 2ರಂದು ನಡೆಯುವ ರಥೋತ್ಸವಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುವ ನಿರೀಕ್ಷೆಯಿದೆ. ಬರುವ ಎಲ್ಲಾ ಭಕ್ತರಿಗೂ ಈ ಪ್ರಸಾದ ತಲುಪಬೇಕು ಎನ್ನುವುದು ದೇಗುಲ ಆಡಳಿತ ಮಂಡಳಿಯ ಕಳಕಳಿ. ಈ ಹಿನ್ನಲೆ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ.