ಶಿರಸಿಯ ಸಿವಿಲ್ ಇಂಜಿನಿಯರ್ ಅನಿಲ ನಾಯಕ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅನಿಲ ನಾಯಕ ಅವರು ಯಾರ ಸಂಪರ್ಕಕ್ಕೂ ಸಿಗದೇ ಕಣ್ಮರೆಯಾಗಿದ್ದಾರೆ.
ಶಿರಸಿ ಬನವಾಸಿ ರಸ್ತೆಯ ನೇತ್ರಾವತಿ ಹೊಟೇಲ್ ಬಳಿ ಅನಿಲ ಆನಂದ ನಾಯಕ ಅವರು ವಾಸವಾಗಿದ್ದರು. ಸಿವಿಲ್ ಇಂಜಿನಿಯರ್ ಆಗಿದ್ದ ಅವರು ಮಾರ್ಚ 24ರ ಬೆಳಗ್ಗೆ 10.30ಕ್ಕೆ ಮನೆಯಿಂದ ಹೊರಟರು. ತಮ್ಮ ಬಳಿ ಕೆಲಸ ಮಾಡುವ ವೆಲ್ಡರ್ ಯಾಸಿನ್ ಅಬ್ದುಲ್ ಅಜಿಮಸಾಬ್ ಅವರ ಜೊತೆ ಸ್ಕೂಟಿ ಏರಿದ ಅವರು ಮಧ್ಯಾಹ್ನ ಮನೆಗೆ ಬರಲಿಲ್ಲ. ಹೀಗಾಗಿ, ಅನಿಲ ನಾಯಕ ಅವರ ಪತ್ನಿ ಅನುಶ್ರೀ ನಾಯಕ ಅವರು ತಮ್ಮ ಪತಿಗೆ ಫೋನ್ ಮಾಡಿದರು. 1.30ಕ್ಕೆ ಫೋನ್ ಮಾಡಿದಾಗ ಆ ಫೋನ್ ಸ್ವಿಚ್ ಆಫ್ ಆಗಿತ್ತು.
ಕೂಡಲೇ ಅನುಶ್ರೀ ನಾಯಕ ಅವರು ವೆಲ್ಡರ್ ಯಾಸಿನ್ ಅಬ್ದುಲ್ ಅಜಿಮಸಾಬ್ ಅವರಿಗೆ ಫೋನ್ ಮಾಡಿದರು.`ತನ್ನ ಪತಿ ಎಲ್ಲಿ?’ ಎಂದು ಅವರು ಪ್ರಶ್ನಿಸಿದರು. `ಅವರು ಇಂದು ಕೆಲಸಕ್ಕೆ ಬರಲಿಲ್ಲ’ ಎಂದು ವೆಲ್ಡರ್ ಯಾಸಿನ್ ಅಬ್ದುಲ್ ಅಜಿಮಸಾಬ್ ಅವರು ಉತ್ತರಿಸಿದರು. `ಬೆಳಗ್ಗೆ ಒಟ್ಟಿಗೆ ಹೊರಟರಲ್ಲ?’ ಎಂದು ಕೇಳಿದಾಗ `ಕೇಂದ್ರೀಯ ಬಸ್ ನಿಲ್ದಾಣದ ಬಳಿ ಕೆಲಸವಿದೆ’ ಎಂದು ಅನಿಲ ನಾಯಕ ಅವರು ಬಸ್ ನಿಲ್ದಾಣದ ಬಳಿ ತೆರಳಿದ ವಿಷಯ ತಿಳಿಸಿದರು. ಅದಾದ ನಂತರ ಅನುಶ್ರೀ ನಾಯಕ ಅವರು ಮೂರು ಬಾರಿ ಅನಿಲ ನಾಯಕ ಅವರಿಗೆ ಫೋನ್ ಮಾಡಿದರು. ಆದರೆ, ಆ ಫೋನ್ ರಿಂಗಣಿಸಲಿಲ್ಲ.
ಇದರಿoದ ಆತಂಕಕ್ಕೆ ಒಳಗಾದ ಅನುಶ್ರೀ ನಾಯಕ ಅವರು ಮೈದುನ ರಾಜೇಶ ನಾಯಕ ಅವರ ಜೊತೆಗೂಡಿ ಹುಡುಕಾಟ ನಡೆಸಿದರು. ಬಸ್ ನಿಲ್ದಾಣ, ಐದು ರಸ್ತೆ, ಬಿಡ್ಕಿ, ಸಿಪಿ ಬಜಾರ್ ಸೇರಿ ಎಲ್ಲಾ ಕಡೆ ಹುಡುಕಿದರೂ ಅನಿಲ ನಾಯಕ ಅವರು ಕಾಣಲಿಲ್ಲ. ಸಂಬoಧಿಕರ ಮನೆಗೆ ಫೋನ್ ಮಾಡಿದರೂ ಅಲ್ಲಿ ಅನಿಲ ನಾಯಕ ಅವರು ಆಗಮಿಸಿರಲಿಲ್ಲ. ಮನಸ್ಸಿಗೆ ಆದ ಬೇಸರದಿಂದ ಅನಿಲ ನಾಯಕ ಅವರು ಮನೆ ಬಿಟ್ಟು ಹೋಗಿರುವ ಬಗ್ಗೆ ಅನುಶ್ರೀ ನಾಯಕ ಅವರು ಅಂದಾಜಿಸಿದರು. `ಪತಿಯನ್ನು ಹುಡುಕಿಕೊಡಿ’ ಎಂದವರು ಪೊಲೀಸರ ಮೊರೆ ಹೋದರು. ಶಿರಸಿ ಶಹರ ಠಾಣೆ ಪೊಲೀಸರು ಇದೀಗ ಅನಿಲ ನಾಯಕ ಅವರ ಹುಡುಕಾಟ ನಡೆಸಿದ್ದಾರೆ.