ಶಿರಸಿಯ ನ್ಯಾಯವಾದಿ ಸವಿತಾ ಐತಾಳ್ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಕಿಡಿಗೇಡಿಗಳು ಅವರ ಕಾರಿನ ಮೇಲೆ ಕೆಟ್ಟದಾಗಿ ಗೀಜಿ ಸೇಡು ತೀರಿಸಿಕೊಂಡಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ ಕಾರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಗಲೀಜು ಮಾಡಿದ್ದಾರೆ.
ಶಿರಸಿಯ ಹುಲೆಕಲ್ ರಸ್ತೆಯ ಸಮೀಕ್ಷಾ ಆಯುರ್ವೇದ ಬಳಿಯ ಮಾರಿಕಾಂಬಾ ಕೃಫಾದಲ್ಲಿ ಸವಿತಾ ದೀಪಕ್ ಐತಾಳ್ ಅವರು ವಾಸವಾಗಿದ್ದಾರೆ. ವಕೀಲೆಯಾಗಿರುವ ಅವರು ಕಕ್ಷಿದಾರರ ಪರ ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದು, ಇದನ್ನು ಅವರ ಎದುರಾಳಿಗಳು ಸಹಿಸುತ್ತಿಲ್ಲ. ಸವಿತಾ ಐತಾಳ್ ಅವರು ಮಹೇಂದ್ರ ಕಂಪನಿಯ ಥಾರ್ ಕಾರನ್ನು ಹೊಂದಿದ್ದು, ದುಷ್ಕರ್ಮಿಗಳು ಸದ್ಯ ಕಾರಿನ ಮೇಲೆ ದಾಳಿ ಮಾಡಿದ್ದಾರೆ.
ಮಾರ್ಚ 25ರಂದು ಕಿಡಿಗೇಡಿಗಳು ಸವಿತಾ ಐತಾಳ್ ಅವರ ಕಾರು ಮುಟ್ಟಿದ್ದಾರೆ. ಅವರು ನ್ಯಾಯಾಲಯದ ಆವರಣದಲ್ಲಿ ಕಾರು ನಿಲ್ಲಿಸಿ ಕೋರ್ಟಿಗೆ ಹೋದಾಗ ಕಾರಿನ ಮೇಲೆ ಕೆಟ್ಟದಾಗಿ ಗೀಚಿದ್ದಾರೆ. ಆ ದಿನ ಮಧ್ಯಾಹ್ನ ನ್ಯಾಯಾಲಯದ ಕಾರ್ಯ ಕಲಾಪ ಮುಗಿಸಿ ಮನೆಗೆ ಹೋಗಲು ಕಾರಿನ ಬಳಿ ಬಂದಾಗ ಕಾರಿನ ಬಾಗಿಲ ಮೇಲೆ ಗೀಚಿರುವುದನ್ನು ನೋಡಿ ಸವಿತಾ ಐತಾಳ್ ಅವರಿಗೆ ಸಿಟ್ಟು ಬಂದಿದೆ. ವಕೀಲರನ್ನು ಹೆದರಿಸುವುದಕ್ಕಾಗಿ ಈ ರೀತಿ ಮಾಡಿರುವ ಬಗ್ಗೆ ಅವರು ಅಂದಾಜಿಸಿದ್ದಾರೆ.
`ಸದ್ಯ ಕಾರಿನ ಮೇಲೆ ದಾಳಿ ಮಾಡಿರುವ ಆಗಂತುಕರು ಭವಿಷ್ಯದಲ್ಲಿ ತಮ್ಮ ಮೇಲೆಯೂ ಆಕ್ರಮಣ ನಡೆಸಬಹುದು’ ಎಂದು ಯೋಚಿಸಿದ ಸವೀತಾ ಐತಾಳ್ ಅವರು ಕಾನೂನಿನ ಮೊರೆ ಹೋಗಿದ್ದಾರೆ. ದುಷ್ಕರ್ಮಿಗಳು ವೃತ್ತಿ ಜೀವನದ ಜೊತೆ ತಮ್ಮ ಜೀವಕ್ಕೂ ಹಾನಿ ಮಾಡುವ ಸಾಧ್ಯತೆ ಹಿನ್ನಲೆ ಈ ವಿಷಯವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಕೀಲರ ಕಾರು ಮುಟ್ಟಿದ ಕಿಡಿಗೇಡಿಗಳ ಶೋಧ ನಡೆಸಿದ್ದಾರೆ.