ಬ್ಯಾಂಕ್ ಮ್ಯಾನೇಜರ್ ಕೊಲೆಗೆ ಪ್ರಯತ್ನಿಸಿದ ಸಿದ್ದಾಪುರದ ವೀರಭದ್ರ ನಾಯ್ಕ ಅವರಿಗೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಸಿದ್ದಾಪುರದ ಕೋರ್ಲಕೈ ಬಳಿಯ ಆಡುಕಟ್ಟಾದಲ್ಲಿ ತಿಮ್ಮಪ್ಪ ಎಚ್ ಎಂ ಹೇರಂಬ ರಾವ್ ಅವರು ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಬ್ಯಾಂಕ್ ಮ್ಯಾನೇಜರ್ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. ತಿಮ್ಮಪ್ಪ ರಾವ್ ಅವರು ಅಲ್ಲಿ ತೋಟವನ್ನು ಹೊಂದಿದ್ದು, ಅಲ್ಲಿ ಶೆಟ್ಟಳ್ಳಿ ಆಡುಕಟ್ಟಾದ ವೀರಭದ್ರ ತಿಮ್ಮ ನಾಯ್ಕ ಅವರು ಕೆಲಸಕ್ಕೆ ಬರುತ್ತಿದ್ದರು. ಕೆಲ ವರ್ಷಗಳ ಕಾಲ ನಿಯತ್ತಾಗಿ ಕೆಲಸ ಮಾಡಿದ ವೀರಭದ್ರ ನಾಯ್ಕ ಅವರು ಕ್ರಮೇಣ ತಮ್ಮ ವರಸೆ ಬದಲಿಸಿದರು. ತಿಮ್ಮಪ್ಪ ರಾವ್ ಅವರ ಜೊತೆ ಅವರ ಪತ್ನಿಗೆ ಸಹ ವೀರಭದ್ರ ನಾಯ್ಕ ಅವರು ಕೆಟ್ಟದಾಗಿ ನಿಂದಿಸಲು ಶುರು ಮಾಡಿದ್ದರು. ಇದನ್ನು ಸಹಿಸದ ತಿಮ್ಮಪ್ಪ ರಾವ್ ಅವರು ವೀರಭದ್ರ ನಾಯ್ಕ ಅವರಿಗೆ ಬುದ್ದಿ ಹೇಳಿದ್ದರು. ಸುಧಾರಿಸಿಕೊಳ್ಳಲು ಸಾಕಷ್ಟು ಸಮಯವನ್ನು ಕೊಟ್ಟಿದ್ದರು. ಆದರೆ, ವೀರಭದ್ರ ನಾಯ್ಕ ಅವರ ವರ್ತನೆ ಮಾತ್ರ ಬದಲಾಗಲಿಲ್ಲ. ವೀರಭದ್ರ ನಾಯ್ಕ ಅವರು ತಿಮ್ಮಪ್ಪ ರಾವ್ ಕುಟುಂಬವನ್ನು ಉದ್ದೇಶಿಸಿ ಇನ್ನಷ್ಟು ಕೆಟ್ಟದಾಗಿ ಬೈಯಲು ಶುರು ಮಾಡಿದ್ದರು. ಹೀಗಾಗಿ ತಿಮ್ಮಪ್ಪ ರಾವ್ ಅವರು ಅನಿವಾರ್ಯವಾಗಿ ವೀರಭದ್ರ ನಾಯ್ಕ ಅವರನ್ನು ಕೆಲಸದಿಂದ ತೆಗೆದರು. `ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ’ ಎಂದು ಸೂಚಿಸಿದರು.
ಕೆಲಸ ಕಳೆದುಕೊಂಡ ವೀರಭದ್ರ ನಾಯ್ಕ ಅವರು ತಿಮ್ಮಪ್ಪ ರಾವ್ ಅವರ ವಿರುದ್ಧ ಸಿಟ್ಟಾದರು. ಎದುರು ಸಿಕ್ಕಾಗಲೆಲ್ಲ ಅವರನ್ನು ಕೆಟ್ಟದಾಗಿ ಬೈಯುವುದನ್ನು ರೂಢಿಸಿಕೊಂಡರು. ದಾರಿಯಲ್ಲಿ ಸಿಕ್ಕಾಗ ಸಹ ಎಲ್ಲರ ಎದುರು ನಿಂದಿಸಿ ಅವಮಾನ ಮಾಡುತ್ತಿದ್ದರು. `ನಿನಗೆ ಒಂದು ಗತಿ ಕಾಣಿಸುವೆ’ ಎಂದು ವೀರಭದ್ರ ನಾಯ್ಕ ಅವರು ಪದೇ ಪದೇ ಹೇಳುತ್ತಿದ್ದು, ಅದಕ್ಕೆ ತಿಮ್ಮಪ್ಪ ರಾವ್ ಅವರು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. 2025ರ ಬೆಳಗ್ಗೆ ಏಪ್ರಿಲ್ 30ರಂದು ತಿಮ್ಮಪ್ಪ ರಾವ್ ಅವರು ಬೈಕಿನ ಮೇಲೆ ಆಡುಕಟ್ಟಾದ ಕಡೆ ಹೊರಟಿದ್ದರು. ಪಶು ಸಂಗೋಪನಾ ಇಲಾಖೆ ಎದುರು ತಿಮ್ಮಪ್ಪ ರಾವ್ ಅವರನ್ನು ವೀರಭದ್ರ ನಾಯ್ಕ ಅವರು ಅಡ್ಡಗಟ್ಟಿದರು. ಕೈಯಲ್ಲಿ ಕತ್ತಿ ಹಿಡಿದು ಬಂದಿದ್ದ ವೀರಭದ್ರ ನಾಯ್ಕ ಅವರು `ನನ್ನನ್ನು ಕೆಲಸಕ್ಕೆ ಬರಬೇಡ ಎನ್ನಲು ನೀ ಯಾರು?’ ಎಂದು ಪ್ರಶ್ನಿಸಿ ಆ ಕತ್ತಿ ಬೀಸಿದರು. ಕತ್ತಿ ಏಟಿನಿಂದ ತಪ್ಪಿಸಿಕೊಂಡ ತಿಮ್ಮಪ್ಪ ರಾವ್ ಅವರಿಗೆ ಬಡಿಗೆಯಿಂದ ಬಡಿದರು. ತಿಮ್ಮಪ್ಪ ರಾವ್ ಅವರ ಕೈಯಿಂದ ರಕ್ತ ಸುರಿಯುವುದನ್ನು ನೋಡಿದ ವೀರಭದ್ರ ನಾಯ್ಕ ಅವರು ಮತ್ತೊಮ್ಮೆ ಬೆದರಿಸಿ ಅಲ್ಲಿಂದ ಪರಾರಿಯಾದರು.
ತಮ್ಮ ಮೇಲೆ ನಡೆದ ಆಕ್ರಮಣದ ಬಗ್ಗೆ ತಿಮ್ಮಪ್ಪ ರಾವ್ ಅವರು ಪೊಲೀಸ್ ದೂರು ನೀಡಿದರು. ಸಿದ್ದಾಪುರ ಪೊಲೀಸ್ ಠಾಣೆಯ ಎಸೈ ಸುಭಾಷ್ ಬಿಳಿಯ ನಾಯಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಎಸೈ ಗಣಪತಿ ಬಂಟ್ ಅವರು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸಮಗ್ರ ದಾಖಲೆಗಳ ಜೊತೆ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು. ಈ ಎಲ್ಲಾ ಹಿನ್ನಲೆ ನ್ಯಾಯಾಧೀಶ ಕಿರಣ ಕಿಣಿ ಅವರು ಬುಧವಾರ ತಮ್ಮ ಆದೇಶ ಪ್ರಕಟಿಸಿದ್ದು, ಬ್ಯಾಂಕ್ ಮ್ಯಾನೇಜರ್ ತಿಮ್ಮಪ್ಪ ರಾವ್ ಅವರ ಕೊಲೆಗೆ ಪ್ರಯತ್ನಿಸಿ ಹಲ್ಲೆ ನಡೆಸಿದ್ದ ವೀರಭದ್ರ ನಾಯ್ಕ ಅವರು ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ತೀರ್ಪು ಪ್ರಕಟಿಸಿದರು.