ಪ್ರೀತಿ-ಪ್ರೇಮ ಎಂದು ಊರುರು ಅಲೆದಾಡುತ್ತಿದ್ದ ಕುಮಟಾ ದಿವಗಿಯ ಪ್ರವೀಣ ಅಂಬಿಗ ಹಾಗೂ ಮಿರ್ಜಾನಿನ ಚಾರಿತ್ರಾ ಮುಕ್ರಿ (ಹೆಸರು ಬದಲಿಸಿದೆ) ಸದ್ಯ ದೂರವಾಗಿದ್ದಾರೆ. ಈ ನಡುವೆ ಪ್ರವೀಣ ಅಂಬಿಗ ಅವರು ಚಾರಿತ್ರಾ ಮುಕ್ರಿ ಅವರ ಕೆನ್ನೆಗೆ ಬಾರಿಸಿದ್ದಾರೆ.
ಕುಮಟಾ ಮಿರ್ಜಾನಿನ ಕಲ್ಮಟೆ ಬಳಿ ವಾಸಿಸುವ ಚಾರಿತ್ರಾ ಮುಕ್ರಿ (20) ಅವರು ಕಂಪ್ಯುಟರ್ ತರಬೇತುದಾರರಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ದಿವಗಿಯ ಪ್ರವೀಣ ತಿಮ್ಮಪ್ಪ ಅಂಬಿಗ (32) ಅವರು ಚಾರಿತ್ರಾ ಅವರನ್ನು ಪ್ರೀತಿಸುವುದಾಗಿ ಬೆನ್ನು ಬಿದ್ದಿದ್ದು, ಆ ಪ್ರೀತಿಯನ್ನು ಚಾರಿತ್ರಾ ಅವರು ಒಪ್ಪಿದ್ದಾರೆ. ಪ್ರೀತಿ-ಪ್ರೇಮ-ಪ್ರಣಯ ಎಂದು ಅವರಿಬ್ಬರು ಎಲ್ಲಡೆ ಸುತ್ತಾಟ ಮಾಡಿದ್ದಾರೆ. ಅದಾದ ನಂತರ ಕುಟುಂಬದವರು ಸಹ ಅವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ಆದರೆ, ಮದುವೆ ನಿಗದಿ ಆದ ನಂತರ ಪ್ರವೀಣ ಅಂಬಿಗ ಅವರು ಉಲ್ಟಾ ಹೊಡೆದಿದ್ದು, ಇದರಿಂದ ಚಾರಿತ್ರಾ ಅವರು ಮಾನಸಿಕವಾಗಿ ನೊಂದಿದ್ದಾರೆ.
ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ ಪ್ರವೀಣ ಅಂಬಿಗ ಅವರು `ರಿಜಿಸ್ಟರ್ ಮದುವೆ ಆಗೋಣ’ ಎಂದಿದ್ದಾರೆ. ಆದರೆ, ಸಾಕಷ್ಟು ಬಾರಿ ಕೇಳಿಕೊಂಡರೂ ಅವರು ರಿಜಿಸ್ಟರ್ ಮದುವೆಯನ್ನು ಸಹ ಆಗಿಲ್ಲ. ಹೀಗಾಗಿ ಚಾರಿತ್ರಾ ಮುಕ್ರಿ ಅವರು ಪ್ರವೀಣ ಅಂಬಿಗ ಅವರಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಪ್ರೇಯಸಿ ಮಾತನಾಡದ ಕಾರಣ ಪ್ರವೀಣ ಅಂಬಿಗ ಅವರ ಸಿಟ್ಟು ಹೆಚ್ಚಾಗಿದೆ. ಏಪ್ರಿಲ್ 8ರಂದು ಚಾರಿತ್ರಾ ಅವರು ತಾಯಿ ಜಯಶ್ರೀ ಮುಕ್ರಿ ಅವರ ಜೊತೆ ಕುಮಟಾಗೆ ಹೋಗಿದನ್ನು ಪ್ರವೀಣ ಅಂಬಿಗ ಅವರು ನೋಡಿದ್ದಾರೆ. ಆ ದಿನ ಸಂಜೆ ಅವರು ಬಸ್ಸಿನಲ್ಲಿ ಊರಿಗೆ ಮರಳುತ್ತಿರುವುದನ್ನು ಗಮನಿಸಿ ಸ್ಕೂಟರಿನಲ್ಲಿ ಹಿಂಬಾಲಿಸಿದ್ದಾರೆ.
ಮಿರ್ಜಾನ್ ಬಿಜಿಎಸ್ ಶಾಲೆ ಬಳಿ ನಡೆದು ಹೋಗುತ್ತಿದ್ದ ಜಯಶ್ರೀ ಮುಕ್ರಿ ಹಾಗೂ ಅವರ ಮಗಳನ್ನು ಪ್ರವೀಣ ಅಂಬಿಗ ಅವರು ಅಡ್ಡ ಹಾಕಿದ್ದಾರೆ. `ನಿನ್ನ ಮಗಳು ನನ್ನನ್ನು ಪ್ರೀತಿಸುತ್ತಿಲ್ಲ’ ಎಂದು ಪ್ರವೀಣ ಅಂಬಿಗ ಅವರು ದೂರಿದ್ದಾರೆ. ಮದುವೆ ಆಗುವ ಭರವಸೆ ನೀಡಿ ಮೋಸ ಮಾಡಿದ ಬಗ್ಗೆ ಜಯಶ್ರೀ ಅವರು ಪ್ರಶ್ನಿಸಿದ್ದಾರೆ. ಆಗ, ಪ್ರವೀಣ ಅಂಬಿಗ ಅವರು ಅಲ್ಲಿದ್ದ ಚಾರಿತ್ರಾ ಮುಕ್ರಿ ಅವರ ಕೆನ್ನೆಗೆ ಬಾರಿಸಿದ್ದಾರೆ. ತಪ್ಪಿಸಲು ಹೋದ ಜಯಶ್ರೀ ಮುಕ್ರಿ ಅವರಿಗೂ ಹೊಡೆದಿದ್ದಾರೆ. ಕೈಯಲ್ಲಿದ್ದ ಬಳೆ ಒಡೆದು ಗಾಯ ಮಾಡಿದ್ದಾರೆ.
ಅಲ್ಲಿನ ನಾರಾಯಣ ವೆಂಕಟ್ರಮಣ ಅಂಬಿಗ ಅವರ ಅಂಗಡಿ ಬಳಿ ಮತ್ತೆ ಪ್ರವೀಣ ಅಂಬಿಗ ಅವರು ಗಲಾಟೆ ಮಾಡಿದ್ದು, ಅಲ್ಲಿಯೂ ಚಾರಿತ್ರಾ ಮುಕ್ರಿ ಅವರ ಮೇಲೆ ಕೈ ಮಾಡಿದ್ದಾರೆ. ಅಲ್ಲಿದ್ದ ಕಲ್ಲಿನಿಂದಲೂ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲಾ ವಿಷಯವನ್ನು ಜಯಶ್ರೀ ಮುಕ್ರಿ ಅವರು ಕುಟುಂಬದವರಲ್ಲಿ ಹೇಳಿಕೊಂಡಿದ್ದು, ಅವರ ಸಲಹೆ ಮೇರೆಗೆ ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರವೀಣ ಅಂಬಿಗ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.