ಸೋಮವಾರ ಬೆಳಗ್ಗೆ ಹಸಮಣೆ ಏರಬೇಕಿದ್ದ ಶಿರಸಿಯ ವೈದ್ಯ ಡಾ ರಮೇಶ ಕಲಗೂಟ್ಕರ್ ಅವರು ಮದುವೆಗೂ ಮುನ್ನವೇ ಮಸಣ ಸೇರಿದ್ದಾರೆ. ಡಾ ರಮೇಶ ಕಲಗೂಟ್ಕರ್ ಅವರ ಬಳಿಯಿದ್ದ ಬಂಗಾರದ ಆಸೆಗಾಗಿ ದುಷ್ಕರ್ಮಿಗಳು ವೈದ್ಯರನ್ನು ಕೊಲೆ ಮಾಡಿದ್ದಾರೆ.
ಡಾ ರಮೇಶ ಕಲಗೂಟ್ಕರ್ ಅವರು ಕಳೆದ ಕೆಲ ವರ್ಷಗಳಿಂದ ಶಿರಸಿಯಲ್ಲಿ ವಾಸವಾಗಿದ್ದರು. ಅವರು ಇಲ್ಲಿಯೇ ಆಯುರ್ವೇದ ವೈದ್ಯರಾಗಿ ಗುರುತಿಸಿಕೊಂಡಿದ್ದು, ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ್ದರು. 55 ವರ್ಷದ ಡಾ ರಮೇಶ ಕಲಗೂಟ್ಕರ್ ಅವರಿಗೆ ಇಬ್ಬರು ಮಕ್ಕಳು ಇದ್ದು ಅವರು ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದರು. ಐದು ತಿಂಗಳ ಹಿಂದೆ ಡಾ ರಮೇಶ ಕಲಗೂಟ್ಕರ್ ಅವರ ಪತ್ನಿ ನಿಧನರಾಗಿದ್ದು, ಸೋಮವಾರ ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದರು. ಮಂಜಗುಣಿಯಲ್ಲಿ ಡಾ ರಮೇಶ ಕಲಗೂಟ್ಕರ್ ಮದುವೆ ಸಿದ್ಧತೆ ನಡೆದಿತ್ತು. ಮದುವೆ ದಿನ ಧರಿಸುವುದಕ್ಕಾಗಿ ಅವರು ಮನೆಯಲ್ಲಿ ಆಭರಣಗಳನ್ನು ತಂದಿರಿಸಿದ್ದರು. ಆ ಆಭರಣದ ಆಸೆಗೆ ಡಾ ರಮೇಶ ಕಲಗೂಟ್ಕರ್ ಅವರ ಕೊಲೆಯಾಗಿರುವುದು ಖಚಿತವಾಗಿದೆ.
ಈ ಮದುವೆಗೆ ಬೇರೆ ಬೇರೆ ಊರುಗಳಿಂದ ಸಂಬoಧಿಕರು ಆಗಮಿಸುತ್ತಿದ್ದು, ಭಾನುವಾರ ಸಂಜೆ ಡಾ ರಮೇಶ ಕಲಗೂಟ್ಕರ್ ಅವರ ಅಕ್ಕ ಸಹ ಶಿರಸಿಗೆ ಬಂದಿದ್ದರು. ಡಾ ರಮೇಶ ಕಲಗೂಟ್ಕರ್ ಅವರು ಎಷ್ಟು ಬಾರಿ ಫೋನ್ ಮಾಡಿದರೂ ರಿಸಿವ್ ಮಾಡದ ಕಾರಣ ಅವರ ಅಕ್ಕ ಮನೆ ಬಳಿ ಹೋಗಿದ್ದರು. ಮನೆ ಬಾಗಿಲು ಹಾಕಿದ್ದರಿಂದ ಅನುಮಾನಗೊಂಡು ಆ ಬಾಗಿಲು ಒಡೆದಿದ್ದು, ಆಗ ಅಲ್ಲಿ ಡಾ ರಮೇಶ ಕಲಗೂಟ್ಕರ್ ಅವರು ಶವವಾಗಿರುವುದು ಕಾಣಿಸಿದೆ. ಮದುವೆಗೆ ಬರಬೇಕಿದ್ದ ಸಂಬoಧಿಕರೆಲ್ಲರೂ ರಾತ್ರಿಯೊಳಗೆ ಶಿರಸಿ ತಲುಪಿದ್ದು, ಡಾ ರಮೇಶ ಕಲಗೂಟ್ಕರ್ ಅವರು ಶವವಾಗಿರುವುದನ್ನು ನೋಡಿ ಮರುಕವ್ಯಕ್ತಪಡಿಸಿದರು.
ಬಲೆಗೆ ಬಿದ್ದ ಕೊಲೆ ಆರೋಪಿ
ಅದಾದ ನಂತರ ಈ ಸಾವಿನ ಬಗ್ಗೆ ಡಾ ರಮೇಶ ಕಲಗೂಟ್ಕರ್ ಅವರ ಸಹೋದರ ಈರಪ್ಪ ಕಲಗೂಟ್ಕರ್ ಅವರು ಪೊಲೀಸ್ ದೂರು ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಬೆರಳಚ್ಚು ತಂಡದ ತಜ್ಞರು ಹಾಗೂ ಶ್ವಾನದಳದವರು ಸಹ ಅಲ್ಲಿಗೆ ಆಗಮಿಸಿ ತನಿಖೆಗೆ ನೆರವು ನೀಡಿದರು. ಅದರ ಪರಿಣಾಮವಾಗಿ ಕೊಲೆ ಆರೋಪಿ ಸಿಕ್ಕಿ ಬಿದ್ದಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. `ಆಯುಧದಿಂದ ಹೊಡೆದು ಡಾ ರಮೇಶ ಕಲಗೂಟ್ಕರ್ ಅವರ ಕೊಲೆ ಮಾಡಿರುವುದು ಖಚಿತವಾಗಿದೆ. ಮದುವೆಗೆ ತಂದಿದ್ದ ಚಿನ್ನಾಭರಣ ಕಾಣೆಯಾದ ಪರಿಣಾಮ ತನಿಖೆ ನಡೆಸಿದಾಗ ಆರೋಪಿ ಪತ್ತೆಯಾಗಿದ್ದು, ವಿಚಾರಣೆ ಮುಂದುವರೆದಿದೆ. ಆರೋಪಿ ಹಾಗೂ ಡಾ ರಮೇಶ ಕಲಗೂಟ್ಕರ್ ಅವರು ಅನ್ಯೋನ್ಯವಾಗಿದ್ದು, ಪರಿಚಿತನಿಂದಲೇ ಈ ಕೃತ್ಯ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಮಾಧ್ಯಮಕ್ಕೆ ತಿಳಿಸಿದರು. ಆರೋಪಿ ಹೆಸರು ಹಾಗೂ ವಿಳಾಸವನ್ನು ಅವರು ಬಹಿರಂಗಪಡಿಸಿಲ್ಲ.