ಯಲ್ಲಾಪುರದ ಅರಬೈಲ್ ಘಟ್ಟ ಸಮೀಪದ ತಾಳಿಕುಂಬ್ರಿ ಕಂದಕದಲ್ಲಿ ಕಾರು ಸುಟ್ಟ ಪ್ರಕರಣದ ಮತ್ತೊಂದು ತಿರುವುಪಡೆದಿದೆ. ಸ್ನೇಹಿತರೇ ಸೇರಿ ನಿತೀಶ ಧಾಪಳೆ ಅವರನ್ನು ಕೊಲೆ ಮಾಡಿ, ಕಾರಿನಲ್ಲಿ ಸುಟ್ಟಿರುವ ಅನುಮಾನ ಕಾಡುತಿದೆ.
ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿಯಲ್ಲಿ ನಿತೀಶ್ ಧಾಪಳೆ (35) ಅವರು ವಾಸವಾಗಿದ್ದರು. ನಿವೃತ್ತ ನೌಕರ ಜಗನ್ನಾಥ ಧಾಪಳೆ ಅವರ ಮಗನಾಗಿದ್ದ ನಿತೀಶ್ ಅವರು ಗೋವಾ ಪ್ರವಾಸಕ್ಕೆ ಯೋಜಿಸಿದ್ದರು. ತಮ್ಮ ಸ್ನೇಹಿತರಾದ ನಯೀಮ್ ಹಾಗೂ ಇನ್ನಿತರರ ಜೊತೆ ಅವರು ಗೋವಾಗೆ ಹೋಗಲು ನಿರ್ಧರಿಸಿದ್ದರು. ಅದರಂತೆ, ಏಪ್ರಿಲ್ 8ರಂದು ಅವರು ಕಾರಿನಲ್ಲಿ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ಮೂಲಕ ಸಂಚರಿಸಿದ್ದರು. ಆ ಕಾರು ಅರಬೈಲ್ ಘಟ್ಟ ಪ್ರದೇಶದ ತಾಳಿಕುಂಬ್ರಿ ಬಸ್ ನಿಲ್ದಾಣದ ಬಳಿ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜೊತೆಗೆ ಆ ಕಾರಿನಲ್ಲಿ ವ್ಯಕ್ತಿಯೊಬ್ಬರ ದೇಹ ಸಂಪೂರ್ಣವಾಗಿ ಕರಕಲಾಗಿತ್ತು.
ಕಾರು ಸುಟ್ಟಿದ್ದರಿಂದ ಅದರೊಳಗಿದ್ದ ವ್ಯಕ್ತಿಯ ಎಲುಬುಗಳು ಮಾತ್ರ ಕಾಣುತ್ತಿದ್ದವು. ಅಪಘಾತದಲ್ಲಿ ಕಾರಿಗೆ ಬೆಂಕಿ ತಗುಲಿ ಚಾಲಕ ಸಜೀವ ದಹನವಾಗಿರುವ ಬಗ್ಗೆ ಎಲ್ಲರೂ ಅಂದಾಜಿಸಿದ್ದರು. ಯಲ್ಲಾಪುರಕ್ಕೆ ಆಗಮಿಸಿದ್ದ ಜಗನ್ನಾಥ ಧಾಪಳೆ ಅವರು ಸಹ ಹಾಗೇ ಭಾವಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಕಾರಿನ ಹಿಂದಿನ ಆಸನದಲ್ಲಿ ಶವವಿರುವುದನ್ನು ಜಗನ್ನಾಥ ಧಾಪಳೆ ಅವರು ಗಮನಿಸಿದರು. ಕಾರು ಅಪಘಾತವಾಗಿ ಚಾಲಕ ಸಾವನಪ್ಪಿದ್ದರೆ ಆ ಶವ ಮುಂದಿನ ಆಸನದಲ್ಲಿರಬೇಕಿತ್ತು ಎಂದು ಅಂದಾಜಿಸಿದ ಅವರು ಈ ಬಗ್ಗೆ ಅನುಮಾನವ್ಯಕ್ತಪಡಿಸಿದರು. ಆಗ, ನಿತೀಶ್ ಧಾಪಳೆ ಅವರ ಪತ್ನಿ ಗಂಗಮ್ಮ ದಾವಣಗೆರೆ ಅವರು ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟರು.
`ನಯೀಮ್ ಹಾಗೂ ಇನ್ನಿತರ ಸ್ನೇಹಿತರ ಜೊತೆ ನಿತೀಶ್ ಧಾಪಳೆ ಅವರು ಗೋವಾಗೆ ಹೊರಟಿದ್ದರು. ಈ ವಿಷಯವನ್ನು ನಿತೀಶ್ ಅವರು ತನಗೆ ವಾಟ್ಸಪ್ ಕಾಲ್ ಮಾಡಿ ತಿಳಿಸಿದ್ದರು’ ಎಂದು ಗಂಗಮ್ಮ ಅವರು ಮಾಹಿತಿ ನೀಡಿದರು. ಈ ಎಲ್ಲಾ ಹಿನ್ನಲೆ ನಿತೀಶ್ ಅವರನ್ನು ಅವರ ಸ್ನೇಹಿತರೇ ಕೊಲೆ ಮಾಡಿ, ಕಂದಕದಲ್ಲಿ ಕಾರು ಅಪಘಾತಪಡಿಸಿ ಅದಕ್ಕೆ ಬೆಂಕಿ ಹಚ್ಚಿರುವ ಅನುಮಾನ ಜೋರಾಯಿತು. ಈ ಹಿನ್ನಲೆ ಏಪ್ರಿಲ್ 10ರಂದು ಮತ್ತೆ ಯಲ್ಲಾಪುರಕ್ಕೆ ಆಗಮಿಸಿದ ಜಗನ್ನಾಥ ಧಾಪಳೆ ಅವರು ತಮ್ಮ ಮಗ ನಿತೀಶ್ ಅವರ ಸಾವಿನ ಹಿಂದಿರುವ ಅನುಮಾನಗಳ ಬಗ್ಗೆ ಪೊಲೀಸರಿಗೆ ತಿಳಿಸಿದರು.
`ನಿತೀಶ್ ಅವರನ್ನು ಎಲ್ಲಿಯೂ ಕೊಲೆ ಮಾಡಿ ಕಾರುಸಹಿತ ಕಂದಕಕ್ಕೆ ದೂಡಲಾಗಿದೆ. ಅದಾದ ನಂತರ ಕಾರಿಗೆ ಬೆಂಕಿ ಹಚ್ಚಿ ಅಪಘಾತ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ’ ಎಂದವರು ದೂರಿದರು. ಈ ಬಗ್ಗೆಯೂ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದರು.