ರುಚಿಯಾಗಿ ಅಡುಗೆ ಮಾಡದ ಕಾರಣ ಕುಮಟಾ ದೇವರಗದ್ದೆಯ ಸಂದೀಪ ನಾಯ್ಕ ಅವರು ತಾಯಿಯ ಕೆನ್ನೆಗೆ ಹೊಡೆದಿದ್ದಾರೆ. ದೇವಕಿ ನಾಯ್ಕ ಅವರ ಮೇಲೆ ಆಕ್ರಮಣ ನಡೆದಿದನ್ನು ನೋಡಿ ಪ್ರಶ್ನಿಸಿದ ಅವರ ಪತಿ ಶ್ರೀಧರ ನಾಯ್ಕ ಅವರ ಮೇಲೆಯೂ ಸಂದೀಪ ನಾಯ್ಕ ಅವರು ದಾಳಿ ಮಾಡಿದ್ದಾರೆ.
ಕುಮಟಾದ ಹೆಬೈಲ್ ದೇವರಗದ್ದೆಯಲ್ಲಿ ಶ್ರೀಧರ ವೆಂಕಟ್ರಮಣ ನಾಯ್ಕ ಅವರು ವಾಸವಾಗಿದ್ದಾರೆ. 66 ವರ್ಷದ ಅವರು ಕೂಲಿ ಕೆಲಸ ಮಾಡಿ ಕುಟುಂಬ ನಡೆಸುತ್ತಿದ್ದಾರೆ. ಶ್ರೀಧರ ನಾಯ್ಕ ಅವರ ಹಿರಿಯ ಮಗ ಸಂದೀಪ ನಾಯ್ಕ ಅವರು ಕುಡಿತದ ಚಟಕ್ಕೆ ದಾಸರಾಗಿದ್ದು, ನಿತ್ಯವೂ ಅವರು ಮನೆಯಲ್ಲಿ ಒಂದಿಲ್ಲೊAದು ಗಲಾಟೆ ಮಾಡುತ್ತಿದ್ದಾರೆ. ಮೊನ್ನೆ ಊಟ ಸರಿಯಿಲ್ಲದ ಕಾರಣ ಸಂದೀಪ ನಾಯ್ಕ ಅವರು ತಾಯಿಯ ಮೇಲೆ ಕೈ ಮಾಡಿದ್ದು, ಇದನ್ನು ಖಂಡಿಸಿದ ತಂದೆಗೂ ಬೋ.. ಮಗನೆ ಎಂದು ಬೈದಿದ್ದಾರೆ.
ಏಪ್ರಿಲ್ 21ರಂದು ದೇವಕಿ ನಾಯ್ಕ ಅವರ ಜೊತೆ ಶ್ರೀಧರ ನಾಯ್ಕ ಅವರು ಮನೆಯಲ್ಲಿ ಊಟ ಮಾಡುತ್ತಿದ್ದರು. ಮಧ್ಯಾಹ್ನವೇ ಕಂಠಪೂರ್ತಿ ಕುಡಿದು ತೂರಾಡುತ್ತ ಬಂದ ಸಂದೀಪ ನಾಯ್ಕ ಅವರು ನೇರವಾಗಿ ಅಡುಗೆ ಮನೆ ಪ್ರವೇಶಿಸಿದರು. ದೇವಕಿ ನಾಯ್ಕ ಅವರು ಈ ವೇಳೆ ಮಗನಿಗೆ ಊಟ ಬಡಿಸಿದ್ದು, `ಉಪ್ಪು-ಖಾರ ಏನೂ ಸರಿಯಿಲ್ಲ’ ಎಂದು ಸಂದೀಪ ನಾಯ್ಕ ಅವರು ಕೂಗಾಡಿದರು. ಸಮಾಧಾನ ಮಾಡಲು ಯತ್ನಿಸಿದ ತಾಯಿ ದೇವಕಿ ನಾಯ್ಕ ಅವರ ಕೆನ್ನೆಗೆ ಹೊಡೆದು ಬೆನ್ನಿಗೆ ಗುದ್ದಿದರು. ಅಲ್ಲಿಯೇ ಇದ್ದ ಶ್ರೀಧರ ನಾಯ್ಕ ಅವರು ಮಗನ ವರ್ತನೆ ವಿರುದ್ಧ ಮಾತನಾಡಿದರು. ಹೀಗಾಗಿ ಸಂದೀಪ ನಾಯ್ಕ ಅವರು ತಂದೆ ಶ್ರೀಧರ ನಾಯ್ಕ ಅವರಿಗೂ ಬಡಿಗೆಯಿಂದ ಬಡಿಯಲು ಶುರು ಮಾಡಿದರು.
ಈ ವೇಳೆ ಶ್ರೀಧರ ನಾಯ್ಕ ಅವರು ತಪ್ಪಿಸಿಕೊಳ್ಳುವುದಕ್ಕಾಗಿ ಮನೆ ಅಂಗಳದ ಕಡೆ ಓಡಿದರು. ಆದರೂ, ಬೆಂಬಿಡದೇ ಬಂದ ಸಂದೀಪ ನಾಯ್ಕ ಅವರು ತಂದೆಯ ಬೆನ್ನಿಗೆ ಬಡಿಗೆಯಿಂದ ಬಡಿದರು. ಈ ಹೊಡೆದಾಟ ತಪ್ಪಿಸಲು ಆಗಮಿಸಿದ ದೇವಕಿ ನಾಯ್ಕ ಅವರಿಗೂ ಸಂದೀಪ ನಾಯ್ಕ ಅವರು ಕಟ್ಟಿಗೆಯಿಂದ ಹೊಡೆದು ಇನ್ನಷ್ಟು ನೋವು ಮಾಡಿದರು. ಮಗನ ಕಾಟ ಸಹಿಸದ ಶ್ರೀಧರ ನಾಯ್ಕ ಅವರು ಕುಮಟಾ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೋರಿದರು. ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.