ಕಾರವಾರದಲ್ಲಿ ಎಲ್ ಐ ಸಿ ಎಜೆಂಟ್ ಆಗಿರುವ ದಾಮೋದರ್ ಭಟ್ಟ ಅವರಿಗೆ ಕ್ರಿಪ್ಟೋ ಕರೆನ್ಸಿ ವಿಷಯದಲ್ಲಿ ಮೋಸವಾಗಿದೆ. ಫೇಸ್ಬುಕ್’ಲಿ ಬರುವ ಜಾಹೀರಾತು ನೋಡಿ ಅವರು ಹಣ ಹೂಡಿಕೆ ಮಾಡಿದ್ದು, 20.44 ಲಕ್ಷ ರೂಪಾಯಿಯನ್ನು ಅವರು ಕಳೆದುಕೊಂಡಿದ್ದಾರೆ.
ದಾಮೋದರ ಪಾಂಡುರOಗ ಭಟ್ಟ ಅವರು ಕಾರವಾರದ ಸುಂಕೇರಿ ಬಳಿಯ ವೆಂಕಟೇಶ ದೇವಸ್ಥಾನದ ಹತ್ತಿರ ವಾಸವಾಗಿದ್ದಾರೆ. 71 ವರ್ಷದ ಅವರು ಫೇಸ್ಬುಕ್ ಬಳಸುತ್ತಿದ್ದು, ಅಲ್ಲಿ ಬಂದ ಜಾಹೀರಾತುಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಅದರಂತೆ, `ಅಂತರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ’ ಎಂಬ ನಕಲಿ ಜಾಹೀರಾತನ್ನು ಅವರು ನೋಡಿದ್ದಾರೆ. ಹಣದ ಆಸೆಗೆ ಬಿದ್ದ ಅವರು ವಂಚಕರ ಮಾತು ಕೇಳಿ ಹೂಡಿಕೆ ಮಾಡಿದ್ದಾರೆ.
2022ರ ಫೆಬ್ರವರಿ ತಿಂಗಳಲ್ಲಿ ದಾಮೋದರ ಭಟ್ಟ ಅವರು ಹೂಡಿಕೆ ಶುರು ಮಾಡಿದ್ದು, ಆರೋಪಿತರು ಯುಪಿಐ ಐಡಿ ಕಳುಹಿಸಿ ಅದರ ಮೂಲಕ ಹಣಪಡೆದಿದ್ದಾರೆ. ನಂತರ 2025ರ ಅಕ್ಟೋಬರ್ ತಿಂಗಳಲ್ಲಿ ವಾಟ್ಸಪ್ ಕರೆ ಮೂಲಕ ವ್ಯಕ್ತಿಯೊಬ್ಬರು `2022ರಲ್ಲಿ ಹೂಡಿಕೆ ಮಾಡಿದ್ದ ದಕ್ಷಿಣ ಆಫ್ರಿಕಾದ ಕಂಪನಿಯ ವಿರುದ್ಧ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ಕಂಪನಿ ಸ್ಥಗಿತಗೊಂಡಿದೆ’ ಎಂದು ತಿಳಿಸಿದ್ದಾರೆ. `ಆದರೆ, ಹೂಡಿಕೆ ಮಾಡಿದ ಹಣಕ್ಕೆ ಲಾಭಾಂಶ ಸೇರಿ ಒಟ್ಟು 51 ಲಕ್ಷ ಹಣ ನಿಮ್ಮ ಖಾತೆಯಲ್ಲಿ ಜಮಾ ಆಗಿದೆ. ಆ ಹಣವನ್ನು ಭಾರತಕ್ಕೆ ಮರಳಿ ಪಡೆಯಲು ಕ್ರಿಪ್ಟೋ ಕರೆನ್ಸಿಗೆ ಪರಿವರ್ತನೆ, ಪೆನಾಲ್ಟಿ, ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕಾಗಿದೆ’ ಎಂದು ಹೇಳಿದ್ದಾರೆ. 2025ರ ನವೆಂಬರ್ 21ರಿಂದ 2026ರ ಫೆಬ್ರವರಿ 3ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 20,44,000ರೂ ಹಣವನ್ನು ಭಟ್ಟರು ಜಮಾ ಮಾಡಿ ಮೋಸ ಹೋಗಿದ್ದಾರೆ.