ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ ನೀಡಿದ್ದ ವ್ಯಕ್ತಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರಿಗೆ ಜಾಮೀನು ನೀಡಲು ಬಂದಿದ್ದ ಮಹೇಶ ನಾಯಕ ಅವರು ನ್ಯಾಯಾಲಯದಿಂದ ಓಡಿ ಪರಾರಿಯಾಗಿದ್ದು, ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಅವರು ಇದೀಗ ಸಿಕ್ಕಿ ಬಿದ್ದಿದ್ದಾರೆ.
2025ರ ಮೇ 28ರಂದು ಭಟ್ಕಳದ ಬಿಳಾಲಖಂಡ ಗ್ರಾಮದ ಸಾಗರ ರಸ್ತೆ ಐದು ಜನ ದರೋಡೆಗೆ ಸಂಚು ರೂಪಿಸಿದ್ದರು. ಇನೋವಾ ಕಾರಿನಲ್ಲಿದ್ದ ಆ ಐವರು ಆ ಮಾರ್ಗದಲ್ಲಿ ಸಾಗುವ ಜನರಿಗೆ ಖಾರದಪುಡಿ ಎರಚಿ ದರೋಡೆ ಮಾಡುವ ಪ್ರಯತ್ನ ಮಾಡಿದ್ದರು. ದಕ್ಷಿಣ ಕನ್ನಡದ ಜಲೀಲ್ ಮಯುದ್ದೀನ್, ಹೆಬಳೆ ಗಾಂಧೀನಗರದ ನಾಸೀರ್ ಅಹ್ಮದ್ ಖಾದರ್, ಪುರವರ್ಗ ಗಣೇಶ ನಗರದ ರಿಹಾನ್ ಶೇಖ್, ಭಟ್ಕಳ ಮುಗ್ದಂ ಕಾಲೋನಿಯ ಜಿಶಾನ್ ಹಾಗೂ ನಬೀಲ್ ಎಂಬ ಡಕಾಯಿತರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಈ ಆರೋಪಿತರಿಗೆ ಜಾಮೀನು ಕೊಡಲು ಮಂಗಳೂರಿನ ಮರೋಳ್ಳಿ ಬಳಿಯ ಮಹೇಶ ಮೋಹನ ನಾಯಕ ಅವರು ಆಗಮಿಸಿದ್ದರು. ಈ ವೇಳೆ ಮಹೇಶ ನಾಯಕ ಅವರು ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ ಹಾಗೂ ಪಹಣಿ ಪತ್ರಿಕೆ ನೀಡಿದ್ದು, ನ್ಯಾಯಾಲಯ ಸಿಬ್ಬಂದಿ ಅದನ್ನು ಪತ್ತೆ ಮಾಡಿದ್ದರು.
ನಕಲಿ ದಾಖಲೆ ನೀಡಿದ ಮಹೇಶ ನಾಯಕ ಅವರನ್ನು ಕೂಡಲೇ ಬಂಧಿಸಲು ನ್ಯಾಯಾಲಯ ಸೂಚಿಸಿದ್ದು, ಪೊಲೀಸರ ಕಣ್ತಪ್ಪಿಸಿ ಅವರು ಅಲ್ಲಿಂದ ಓಡಿದ್ದರು. ಮಹೇಶ ನಾಯಕ ಅವರ ಹುಡುಕಾಟ ನಡೆಸಿದ ಪೊಲೀಸರಿಗೆ ಅವರು ಮಂಗಳೂರಿನಲ್ಲಿಯೇ ಅಡಗಿರುವ ಅನುಮಾನ ಕಾಡಿತು. ಎಲ್ಲಾ ಕಡೆ ಹುಡುಕಾಟ ನಡೆಸಿದಾಗ ಮಂಗಳೂರಿನಲ್ಲಿಯೇ ಮಹೇಶ ನಾಯಕ ಅವರು ಸಿಕ್ಕಿಬಿದ್ದರು. ಏಪ್ರಿಲ್ 5ರಂದು ಪೊಲೀಸರು ಮಹೇಶ ನಾಯಕ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದರು.
ನಕಲಿ ದಾಖಲೆ ನೀಡಿದ್ದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಭಟ್ಕಳ ಶಹರ ಠಾಣೆ ಪಿಐ ದಿವಾಕರ್ ಪಿ ಎಂ, ಪಿಸೈ ನವೀನ ನಾಯ್ಕ ಹಾಗೂ ಸಿಬ್ಬಂದಿ ದಿನೇಶ ನಾಯಕ, ಮಹಾಂತೇಶ ಹಿರೇಮಠ್ ಅವರು ಹರಸಾಹಸದಿಂದ ಮೋಹನ ನಾಯಕ ಅವರನ್ನು ಹಿಡಿದಿದ್ದಾರೆ.