ಯಲ್ಲಾಪುರದ ಹುಟಕಮನೆ ಬಳಿ ಗುಡ್ಡ ಕೊರೆದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸರ್ಕಾರಿ ಬೆಟ್ಟವನ್ನು ಅನಧಿಕೃತವಾಗಿ ಕೊರೆದ ಪ್ರಕರಣದ ಬಗ್ಗೆ ಗಮನಹರಿಸಿದೆ.
ಯಲ್ಲಾಪುರ ತಾಲೂಕಿನ ಹುಟಕಮನೆ ಬಳಿಯಿದ್ದ ಗುಡ್ಡವನ್ನು ಹಳವಳ್ಳಿಯ ದೀಪಕ ನಾಯ್ಕ ಖರೀದಿಸಿದ್ದು, ಅವರು ಅಲ್ಲಿನ ಸರ್ಕಾರಿ ಗುಡ್ಡವನ್ನು ನೆಲಸಮ ಮಾಡಿರುವ ಬಗ್ಗೆ ಹೋರಾಟಗಾರ ಮಂಜುನಾಥ ಹೆಗಡೆ ಅವರು ದೂರಿದ್ದರು. ಈ ಬಗ್ಗೆ ಅವರು ಸರ್ಕಾರಕ್ಕೆ ಪದೇ ಪದೇ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದು, ಹುಟಕಮನೆ ಗ್ರಾಮಕ್ಕೆ ಹಗಲು-ರಾತ್ರಿ ಎನ್ನದೇ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡುತ್ತಿದ್ದರು. ಗುಡ್ಡ ಕೊರೆತಕ್ಕೆ ಬಳಸಿದ ಯಂತ್ರವನ್ನು ವಶಕ್ಕೆಪಡೆದಿದ್ದು ಬಿಟ್ಟು ಬೇರೆ ಯಾವುದೇ ಕಾನೂನು ಕ್ರಮ ಆಗಿರಲಿಲ್ಲ. ಸರ್ಕಾರಿ ಜಾಗ ಅತಿಕ್ರಮಣವಾದ ಬಗ್ಗೆ ಸರ್ವೇ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ಈವರೆಗೂ ಆ ಭರವಸೆ ಈಡೇರದ ಕಾರಣ ಮಂಜುನಾಥ ಹೆಗಡೆ ಅವರು ಪ್ರಕರಣವನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಇಡಗುಂದಿ ವಲಯ ಅರಣ್ಯಾಧಿಕಾರಿ, ಯಲ್ಲಾಪುರ ತಹಶೀಲ್ದಾರ್ ಹಾಗೂ ಬೆಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧವೂ ಮಂಜುನಾಥ ಹೆಗಡೆ ಅವರು ಆರೋಪಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದವರು ಆಕ್ಷೇಪಿಸಿದ್ದಾರೆ. `ಗುಡ್ಡ ಕಟಾವು ವೇಳೆ ಅಲ್ಲಿದ್ದ ಮರಗಳನ್ನು ನಾಶ ಮಾಡಲಾಗಿದೆ’ ಎಂದವರು ದೂರಿದ್ದಾರೆ.