ಮುರುಡೇಶ್ವರ ದೇಗುಲಕ್ಕೆ ಬಂದಿದ್ದ ಭಕ್ತರ ಬಂಗಾರ ಕದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳ ಭಕ್ತೆಯಿಂದ ಎರಡು ಚಿನ್ನದ ಗಟ್ಟಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ.
2025ರ ಡಿಸೆಂಬರ್ 31ರಂದು ಕೇರಳ ರಾಜ್ಯದ ಕಣ್ಣೂರಿನ ಹೈಯಂತ್ ವೇಣುಗೋಪಾಲ ಅವರು ತಮ್ಮ ಪತ್ನಿ ಹಾಗೂ ತಾಯಿಯ ಜೊತೆ ಮುರುಡೇಶ್ವರಕ್ಕೆ ಬಂದಿದ್ದರು. ಅದೇ ದಿನ ಅಲ್ಲಿಗೆ ಬಂದಿದ್ದ ಗದಗ ಜಿಲ್ಲೆಯ ಬೆಟಗೇರಿ ಗಾಂಧಿನಗರ ಸೆಟ್ಲಮೆಂಟ್ ನಿವಾಸಿ ಗಂಗಮ್ಮ ಅವರು ಭಕ್ತರ ಚಿನ್ನದ ಮೇಲೆ ಕಣ್ಣು ಹಾಕಿದ್ದು, ವೇಣುಗೋಪಾಲ ಅವರ ತಾಯಿ ಧರಿಸಿದ್ದ ಬಂಗಾರದ ಸರ ಎಗರಿಸಿದ್ದರು. ರುದ್ರಾಕ್ಷಿಯನ್ನು ಹೊಂದಿದ ಸರ ಕಾಣೆಯಾದ ಬಗ್ಗೆ ಆತಂಕಗೊAಡ ವೇಣುಗೋಪಾಲ ಅವರು ಪೊಲೀಸ್ ದೂರು ನೀಡಿದ್ದರು.
36 ಗ್ರಾಂ ತೂಕದ ಬಂಗಾರದ ಸರ ಕಳ್ಳತನವಾಗಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಶೋಧ ನಡೆಸಿದ್ದರು. ಪಿಸೈ ಲೋಕನಾಥ ರಾಥೋಡ, ಹಣಮಂತ ಬೀರಾದರ್ ಹಾಗೂ ಸಿಬ್ಬಂದಿ ವನಿತಾ ನಾಯ್ಕ, ಮಂಜುನಾಥ ಲಕ್ಕಾಪುರ, ವಿಜಯ ನಾಯ್ಕ ನೇತೃತ್ವದ ತಂಡದವರಿಗೆ ಏಪ್ರಿಲ್ 24ರಂದು ಅನುಮಾನಾಸ್ಪದ ವ್ಯಕ್ತಿಯೊಬ್ಬರು ಎದುರಾದರು. ಏಪ್ರಿಲ್ 24ರಂದು ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿದ್ದ ಗದಗ ಜಿಲ್ಲೆಯ ಬೆಟಗೇರಿ ಗಾಂಧಿನಗರ ಸೆಟ್ಲಮೆಂಟ್ ನಿವಾಸಿ ಗಂಗಮ್ಮ (65) ಅವರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದರು. ಈ ವೇಳೆ ಗಂಗಮ್ಮ ಅವರೇ ಚಿನ್ನದ ಸರ ಕದ್ದಿರುವುದು ಗೊತ್ತಾಯಿತು.
ಗಂಗಮ್ಮ ಅವರ ಬಳಿಯಿದ್ದ ಬಂಗಾರದ ಗಟ್ಟಿಗಳನ್ನು ಪೊಲೀಸರು ಜಪ್ತು ಮಾಡಿದರು. 3.28 ಲಕ್ಷ ರೂ ಮೌಲ್ಯದ ಚಿನ್ನದ ಜೊತೆ ಗಂಗಮ್ಮ ಅವರು ಮತ್ತೆ ಕಳ್ಳತನಕ್ಕಾಗಿ ಮುರುಡೇಶ್ವರಕ್ಕೆ ಬಂದು ಸಿಕ್ಕಿಬಿದ್ದಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಭಟ್ಕಳ ಉಪ ವಿಭಾಗದ ಡಿವೈಎಸ್ಪಿ ಗಿರೀಶ ಬಿ ಹಾಗೂ ಮುರುಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚಿನಾಳ ಅವರು ಈ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.