ಶಿರಸಿಯ ಹೊಸಪೇಟೆ ರಸ್ತೆಯಲ್ಲಿ ಪಾನ್ ಅಂಗಡಿ ನಡೆಸುವ ರವಿ ಹೆಗಡೆ ಅವರು ನಿತ್ಯವೂ ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿ ಅವರ ದಾಹ ತೀರಿಸುತ್ತಿದ್ದಾರೆ. ಹೀಗಾಗಿ ನಿತ್ಯವೂ ಅವರ ಅಂಗಡಿಗೆ ಗ್ರಾಹಕರ ಜೊತೆ ಬಣ್ಣ ಬಣ್ಣದ ಚಿಟ್ಟೆ, ಗುಬ್ಬಿ, ಪಾರಿವಾಳಗಳ ಜೊತೆ ಬಗೆ ಬಗೆಯ ಜೀವಗಳ ಆಗಮನವಾಗುತ್ತಿದೆ.
ರವಿ ಹೆಗಡೆ ಅವರ ತಂದೆ ಮಂಜುನಾಥ ಹೆಗಡೆ ಅವರು ಶಿರಸಿಯಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದರು. 20 ವರ್ಷದ ಹಿಂದೆ ಆ ಪಾನ್ ಅಂಗಡಿಯ ಜವಾಬ್ದಾರಿಯನ್ನು ರವಿ ಹೆಗಡೆ ಅವರುವಹಿಸಿಕೊಂಡರು. ಪಾನ್ ಅಂಗಡಿಯಲ್ಲಿ ಕುಳಿತು ವ್ಯಾಪಾರ ನಡೆಸುವಾಗ ಪ್ರಾಣಿ-ಪಕ್ಷಿಗಳ ಬಾಯರಿಕೆ ಬಗ್ಗೆ ಯೋಜಿಸಿದ ಅವರು ಅಂದಿನಿAದಲೇ ಮೂಕ ಜೀವಿಗಳ ಸೇವೆ ಶುರು ಮಾಡಿದರು. ಕಳೆದ ಎಂಟು ವರ್ಷಗಳಿಂದ ಒಂದು ದಿನವೂ ಬಿಡದೇ ರವಿ ಹೆಗಡೆ ಅವರು ತಮ್ಮ ಅಂಗಡಿ ಮುಂದೆ ಪ್ರಾಣಿ-ಪಕ್ಷಿಗಳಿಗೆ ನೀರಿಡುತ್ತಿದ್ದಾರೆ. ಅನೇಕ ಜೀವಿಗಳಿಗೆ ಇಲ್ಲಿ ನೀರು ಸಿಗುವ ವಿಷಯ ಗೊತ್ತಾಗಿದ್ದು, ಅವು ಆಗಮಿಸಿ ದಾಹ ತೀರಿಸಿಕೊಳ್ಳುತ್ತಿವೆ.
ನೀರು ಕುಡಿಯಲು ಬರುವ ಕಾಗೆಗಳು ಅಲ್ಲಿ ಪಿಟ್ಟಿ ಮಾಡುತ್ತವೆ. ದನ-ಕರುಗಳು ಆಗಮಿಸಿ ರಂಪಾಟ ನಡೆಸುತ್ತವೆ. ಇನ್ನೂ ಕೆಲ ಜೀವಿಗಳು ಆಗಮಿಸಿ ಅಲ್ಲಿಯೇ ಸ್ನಾನ ಮಾಡುತ್ತವೆ. ಆದರೆ, ಅಂಗಡಿ ಮುಂದೆ ಗಲೀಜು ಆದರೂ ಅದಕ್ಕೆ ರವಿ ಹೆಗಡೆ ಅವರು ಬೇಸರಿಸಿಕೊಳ್ಳುತ್ತಿಲ್ಲ. ಪ್ರತಿ ದಿನ ಅಲ್ಲಿನ ಗಲೀಜು ಸ್ವಚ್ಚ ಮಾಡುವ ರವಿ ಹೆಗಡೆ ಅವರು ಮತ್ತೆ ಅದೇ ಪ್ರದೇಶದಲ್ಲಿ ನೀರಿಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳು ಅಲ್ಲಿಗೆ ಆಗಮಿಸಿ ದಣಿವು ಆರಿಸಿಕೊಳ್ಳುವುದನ್ನು ನೋಡಿ ಅದರಲ್ಲಿಯೇ ಅವರು ಸಂತ್ರಪ್ತಿ ಕಾಣುತ್ತಿದ್ದಾರೆ. ಸಣ್ಣ ಸಣ್ಣ ಗುಬ್ಬಿಗಳಿಗೆ ದೊಡ್ಡ ತೊಟ್ಟಿಯಿಂದ ನೀರು ಕುಡಿಯಲು ಸಾಧ್ಯವಾಗದಿರುವುದನ್ನು ಗಮನಿಸಿ, ಚಾಕಲೇಟು ಡಬ್ಬಿಗಳಲ್ಲಿ ಅವರು ನೀರುಣಿಸುತ್ತ ಬಂದಿದ್ದಾರೆ.
ಬೆಳಗ್ಗಿನ ಅವಧಿಯಲ್ಲಿ ಚಿಟ್ಟೆ, ಕಾಗೆ, ಪಾರಿವಾಳಗಳು ಅಂಗಡಿ ಮುಂದೆ ಕಾಣಿಸುತ್ತವೆ. ಮಧ್ಯಾಹ್ನ ನಾಯಿ, ಬೆಕ್ಕು, ದನಗಳು ಆಗಮಿಸಿ ದಣಿವು ಆರಿಸಿಕೊಳ್ಳುತ್ತವೆ. `ಪ್ರತಿಯೊಬ್ಬರು ಒಂದು ಚಿಕ್ಕ ಬಟ್ಟಲು, ಬೊಗಸೆ ನೀರಿನಿಂದ ಮೂಕ ಜೀವಿಗಳ ದಾಹ ತೀರಿಸುವ ಕೆಲಸ ಮಾಡಲು ಸಾಧ್ಯ’ ಎಂದು ರವಿ ಹೆಗಡೆ ಅವರು ಹೇಳುತ್ತಾರೆ. `ನಮ್ಮ ಮನೆ, ಬೀದಿ, ಸುತ್ತಲಿನ ಪರಿಸರದಲ್ಲಿಯೂ ಹೀಗೆ ನೀರಿಡುವ ಮೂಲಕ ಪ್ರಾಣಿ-ಪಕ್ಷಿಗಳ ಆಯಾಸ ದೂರ ಮಾಡಲು ಸಾಧ್ಯವಿದೆ. ರವಿ ಹೆಗಡೆ ಅವರ ಕಾಯಕ ಎಲ್ಲರಿಗೂ ಪ್ರೇರಣೆಯಾಗಲಿ’ ಎಂದು ಶಿರಸಿಯ ವೈದ್ಯ ಡಾ ರವಿಕಿರಣ ಪಟವರ್ಧನ ಅವರು ಅಭಿಪ್ರಾಯಪಟ್ಟಿದ್ದಾರೆ.