ಯಲ್ಲಾಪುರದ ಕಾನೂರು-ಕಾರವಾರದ ದೇವಕಾರ ನಡುವಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಸ್ಪೋಟಕ ಬಳಸಿ ಗಣಿಗಾರಿಕೆ ನಡೆಸಲು ಸಿದ್ಧತೆ ನಡೆದಿದೆ. ಕೈಗಾ ಅಣು ವಿದ್ಯುತ್ ಘಟಕದಲ್ಲಿ 5 ಹಾಗೂ 6ನೇ ಸ್ಥಾವರ ಸ್ಥಾಪನೆಗಾಗಿ ಕಲ್ಲುಗಳ ಅಗತ್ಯವಿದ್ದು, ಆ ಕಲ್ಲುಗಳನ್ನು ಈ ಪ್ರದೇಶದಿಂದಪಡೆಯಲು ತಯಾರಿ ನಡೆದಿದೆ.
ದೇವಕಾರದಲ್ಲಿ ಸುಂದರ ಜಲಪಾತವಿದೆ. ಕಾರವಾರ ಹಾಗೂ ಸುತ್ತಲಿನ ಜನ ಇದನ್ನು `ವಜ್ರ ಜಲಪಾತ’ ಎಂದು ಕರೆಯುತ್ತಾರೆ. ಯಲ್ಲಾಪುರದ ಕಾನೂರು ಮಾರ್ಗವಾಗಿಯೂ ಈ ಜಲಪಾತದ ಮೇಲ್ಬಾಗಕ್ಕೆ ತೆರಳಬಹುದಾಗಿದ್ದು, ಯಲ್ಲಾಪುರ ಹಾಗೂ ಸುತ್ತಲಿನ ಜನ ಇದನ್ನು `ಕಾನೂರು ಜಲಪಾತ’ ಎಂದು ಕರೆಯುತ್ತಾರೆ. ಈ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಮೀಪವಿದ್ದು, ಅಲ್ಲಿ ಗಣಿಗಾರಿಕೆ ನಡೆಸಲು ತಯಾರಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.
ದಟ್ಟ ಅರಣ್ಯ, ನಡುವೆ ಕೃಷಿ ಭೂಮಿ, ಸುಂದರ ಕಲಪಾತ, ಸಮೀಪದಲ್ಲಿ ಹರಿಯುವ ನದಿಯಿಂದ ದೇವಕಾರ ಊರು ಸಮೃದ್ಧವಾಗಿತ್ತು. ಆ ಊರಿನಲ್ಲಿ 30 ಕುಟುಂಬದವರು ವಾಸಿಸುತ್ತಿದ್ದರು. ಕದ್ರಾ ಅಣೆಕಟ್ಟು ಹಾಗೂ ಕೈಗಾ ಅಣು ವಿದ್ಯು ಸ್ಥಾವರದಿಂದಾಗಿ ಊರಿಗೆ ಊರೇ ಖಾಲಿಯಾಯಿತು. ಕದ್ರಾ ಅಣೆಕಟ್ಟೆಯ ನಿರ್ಮಾಣದ ನಂತರ ಊರಿನ ಮೂರು ಭಾಗದಲ್ಲಿ ನೀರು ತುಂಬುತ್ತಿದ್ದು, ಊರಿಗೆ ಮೂಲಭೂತ ಸೌಕರ್ಯ ಸಿಗುತ್ತಿರಲಿಲ್ಲ. ಒಂದು ಕಡೆಯಿದ್ದ ರಸ್ತೆಯನ್ನು ಸಹ ಕೈಗಾ ಅಣು ವಿದ್ಯುತ್ ಸ್ಥಾವರವಾದ ನಂತರ ಬಂದ್ ಮಾಡಲಾಯಿತು. ಹೀಗಾಗಿ ದೇವಕಾರ ಊರು ದ್ವೀಪವಾಗಿದ್ದು, ಯಾವ ಸೌಕರ್ಯ ಇಲ್ಲದಿದ್ದರೂ ಜನ ಅಲ್ಲಿ ವಾಸಿಸುತ್ತಿದ್ದರು. ಆದರೆ, ಅರಣ್ಯ ಇಲಾಖೆಯವರು ಊರಿನ ಕೃಷಿ ಭೂಮಿಯಲ್ಲಿ ಅಕೇಶಿಯಾ ನೆಟ್ಟರು. ಅಲ್ಪ ಪ್ರಮಾಣದ ಪರಿಹಾರಪಡೆದ ಊರಿನವರು ಅನಿವಾರ್ಯವಾಗಿ ಅಲ್ಲಿಂದ ಬೇರೆ ಕಡೆ ತೆರಳಿದರು.
ಸದ್ಯ ದೇವಕಾರ ಎಂಬ ಇಡೀ ಗ್ರಾಮ ಖಾಲಿಯಾಗಿದೆ. ಆದರೆ, ಅಲ್ಲಿನ ಪರಿಸರ ಹಾಗೇ ಇದ್ದು, ಅದೂ ಸಹ ಇದೀಗ ಕಲುಷಿತವಾಗುವ ಆತಂಕ ಎದುರಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ ದೇವಕಾರ ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸಲು ಅನುಮತಿ ನೀಡಬಹುದು ಎಂದು ಅರಣ್ಯ ಇಲಾಖೆ ಉಪ ಮಹಾ ನಿರ್ದೇಶಕರು (ಡಿಡಿಜಿಎಫ್) ಕೇಂದ್ರ ಪರಿಸರ ಮಂತ್ರಾಲಯಕ್ಕೆ ಶಿಫಾರಸು ಮಾಡಿದ್ದಾರೆ. ದೇವಕಾರ ಗ್ರಾಮದ ಸರ್ವೇ ನಂಬರ್ 87ರಲ್ಲಿ 3.70 ಹೆಕ್ಟೇರ್ ಪ್ರದೇಶವನ್ನು ಕೈಗಾದಲ್ಲಿ ಐದು ಮತ್ತು ಆರನೇ ಘಟಕ ನಿರ್ಮಾಣಕ್ಕಾಗಿ ನೀಡಬಹುದು ಎಂದು ಶಿಫಾರಸ್ಸು ಮಾಡಲಾಗಿದೆ. ದೇವಕಾರ ಗ್ರಾಮವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಅಲ್ಲಿ ಗಣಿಗಾರಿಕೆ ನಡೆಸಿದರೆ ಪರಿಸರಕ್ಕೆ ಭಾರೀ ಪ್ರಮಾಣದಲ್ಲಿ ಹಾನಿ ಆಗಲಿದೆ. ಅದಾಗಿಯೂ, ಅದೇ ಪ್ರದೇಶದಿಂದ ಕೈಗಾ ಅಣು ಘಟಕಕ್ಕೆ ಕಲ್ಲುಗಳನ್ನು ಒಯ್ಯಲು ನಿರ್ಧರಿಸಲಾಗಿದೆ.
ಪರಿಸರ ಹೋರಾಟಗಾರ ಗಿರಿಧರ ಕುಲಕರ್ಣಿ ಅವರು ಪರಿಸರ ಮಂತ್ರಾಲಯಕ್ಕೆ ಪತ್ರ ಬರೆದು ಈ ಶಿಫಾರಸ್ಸಿನ ಬಗ್ಗೆ ಆಕ್ಷೇಪಿಸಿದ್ದಾರೆ. `ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ 1994ರಲ್ಲಿ ಪಡೆದ ಕಾರವಾರ ಡಿಸಿಎಫ್ ಶಿಫಾರಸಿರುವ ಅನುಮತಿಯನ್ನೇ ಮತ್ತೆ ಸಲ್ಲಿಸಲಾಗಿದೆ. ಅರಣ್ಯ, ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯದೇ ನೇರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಾಥಮಿಕ ಅನುಮೋದನೆಗೆ ಸಲ್ಲಿಸಲಾಗಿದೆ. ಇದು ಕಾನೂನಿಗೆ ವಿರುದ್ಧ’ ಎಂದವರು ವಿವರಿಸಿದ್ದಾರೆ. `ಕೈಗಾದಲ್ಲಿ 5 ಮತ್ತು 6 ನೇ ಘಟಕ ನಿರ್ಮಾಣಕ್ಕೆ ನೀಡಿರುವ ಪರಿಸರ ಅನುಮತಿಯ ವ್ಯಾಪ್ತಿಗೆ ಕಲ್ಲು ಕ್ವಾರಿಯೂ ಒಪಪಡುತ್ತದೆ ಎಂದು ಬಿಂಬಿಸಲಾಗುತ್ತಿದೆ. ಅಣು ವಿದ್ಯುತ್ ಘಟಕ ನಿರ್ಮಾಣ ಹಾಗೂ ಗಣಿಗಾರಿಕೆ ಪ್ರತ್ಯೇಕ ಚಟುವಟಿಕೆಗಳಾಗಿವೆ. ಕಲ್ಲು ಗಣಿಗಾರಿಕೆಗೆ ಮಂತ್ರಾಲಯದಿAದ ಪ್ರತ್ಯೇಕ ಅನುಮತಿ ಪಡೆಯಬೇಕು’ ಎಂದವರು ಮಂತ್ರಾಲಯಕ್ಕೆ ಮನವಿ ಮಾಡಿದ್ದಾರೆ.