ಎರಡು ಕಣ್ಣು ಕಾಣದಿದ್ದರೂ ಧೈರ್ಯದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿದ ಶಿರಸಿಯ ವಿದ್ಯಾರ್ಥಿನಿಗೆ ಸರ್ಕಾರ ಅನ್ಯಾಯ ಮಾಡಿದೆ. ಶ್ರೀಮೈಲ್ ಖಾನ್ ಅವರು ಎಲ್ಲಾ ಪರೀಕ್ಷೆಗೆ ಹಾಜರಾಗಿದ್ದರೂ ಅವರು ಗೈರಾದ ಬಗ್ಗೆ ಫಲಿತಾಂಶ ಪ್ರಕಟಿಸಿದೆ!
`ಆ ವಿದ್ಯಾರ್ಥಿನಿಗೆ ಹುಟ್ಟಿದಾಗಲಿನಿಂದಲೂ ಕಣ್ಣಿಲ್ಲ. ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯವರಿಗೂ ಕಣ್ಣಿಲ್ಲವೇ?’ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗೆ ಹಾಜರಾದರೂ ಗೈರು ಎಂದು ಫಲಿತಾಂಶ ನೀಡಿದ ಕಾರಣ ಪಾಲಕರು ಆಕ್ರೋಶವ್ಯಕ್ತಪಡಿಸಿದ್ದಾರೆ. ಬಾಲ್ಯದಿಂದಲೂ ಕಷ್ಟದಿಂದಲೇ ಬೆಳೆದು ಬಂದ ಶ್ರೀಮೈಲ್ ಖಾನ್ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ತಮ್ಮ ಫಲಿತಾಂಶ ನೋಡಿ ಅವರೇ ಆಘಾತಕ್ಕೆ ಒಳಗಾಗಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ನೋವು ತೋಡಿಕೊಂಡಿದ್ದಾರೆ.
ಶಿರಸಿಯ ಯೂನಿಯನ್ ಪ್ರೌಢಶಾಲೆಯಲ್ಲಿ ಶ್ರೀಮೈಲ್ ಖಾನ್ ಅವರು ಪ್ರವೇಶಪಡೆದಿದ್ದು, ಅಲ್ಲಿಂದಲೇ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸಿದ್ದಾರೆ. ಹುಟ್ಟಿದಾಗಲಿನಿಂದಲೂ ಎರಡೂ ಕಣ್ಣು ಕಾಣದಿರುವ ಶ್ರೀಮೈಲ್ ಖಾನ್ ಅವರು ಆರು ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದಾರೆ. ಶ್ರೀಮೈಲ್ ಖಾನ್ ಅವರು ಪ್ರಥಮ ಭಾಷೆ ಉರ್ದುವಿನಲ್ಲಿ 124, ಕನ್ನಡದಲ್ಲಿ 100 ಅಂಕಪಡೆದಿದ್ದು, ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗದ ಬಗ್ಗೆ ಅಂಕಪಟ್ಟಿಯಲ್ಲಿ ನಮೂದಿಸಲಾಗಿದೆ. ಸಹಾಯಕರ ಸಹಾಯಪಡೆದು ಅವರು ಎಲ್ಲಾ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದರೂ ಸಮಾಜ ವಿಜ್ಞಾನ ಪರೀಕ್ಷೆ ಬರೆದಿದನ್ನು ಪರೀಕ್ಷಾ ಮಂಡಳಿ ಪರಿಗಣಿಸಿಲ್ಲ.
ಶಿಕ್ಷಣ ಇಲಾಖೆ ಮಾಡಿದ ಎಡವಟ್ಟಿನಿಂದ ಶ್ರೀಮೈಲ್ ಖಾನ್ ಅವರಿಗೆ ಅನ್ಯಾಯವಾಗಿದೆ. ಮಂಡಳಿಯ ತಪ್ಪು ನಿರ್ಧಾರದಿಂದ ಶ್ರೀಮೈಲ್ ಖಾನ್ ಅವರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. `ಅಧಿಕಾರಿಗಳು ಪರೀಕ್ಷಾ ಕೇಂದ್ರದ ಹಾಜರಾತಿ ವರದಿಯನ್ನು ಪರಿಶೀಲಿಸಬೇಕು. ತಕ್ಷಣವೇ ಈ ಅಚಾತುರ್ಯವನ್ನು ಸರಿಪಡಿಸಿ, ವಿದ್ಯಾರ್ಥಿನಿಗೆ ನ್ಯಾಯಕೊಡಿಸಬೇಕು’ ಎಂದು ಪಾಲಕರು ಆಗ್ರಹಿಸಿದ್ದಾರೆ.