ಕುಡಿಯುವ ನೀರಿನ ಬಾಟಲಿ ಖರೀದಿಗೆ ಮುಂಡಗೋಡಿನ ಪಾತ್ರೆ ಅಂಗಡಿಗೆ ಬಂದಿದ್ದ ಶಿರಸಿ ಮೂಲದ ಸವಿತಾ ಲಮಾಣಿ ಅವರಿಗೆ ಮುಂಡಗೋಡಿನ 10 ಜನ ಸೇರಿ ನಿಂದಿಸಿದ್ದಾರೆ. ಅತ್ಯಂತ ಕೆಟ್ಟ ಶಬ್ದಗಳಿಂದ ಬೈದವರ ವಿರುದ್ಧ ಸವಿತಾ ಲಮಾಣಿ ಅವರು ಪೊಲೀಸ್ ದೂರು ನೀಡಿದ್ದಾರೆ.
ಶಿರಸಿ ದಾಸನಕೊಪ್ಪ ಬಳಿಯ ಬಂಕನಾಳದ ಸವಿತಾ ದೇವರಾಜ ಲಮಾಣಿ ಅವರು ಸದ್ಯ ಮುಂಡಗೋಡಿನ ಹಳ್ಳೂರು ಓಣಿಯಲ್ಲಿ ವಾಸವಾಗಿದ್ದಾರೆ. ಏಪ್ರಿಲ್ 29ರಂದು ತಮ್ಮ ಮಗ ವಿರಾಜ ಜೊತೆ ಮುಂಡಗೋಡದ ಬಸವ ಬೀದಿಗೆ ಹೋಗಿದ್ದರು. ಅಲ್ಲಿನ ಪಾತ್ರೆ ಅಂಗಡಿ ಪ್ರವೇಶಿಸಿದ ಸವಿತಾ ಅವರು ಮಗನಿಗಾಗಿ ಸ್ಟೀಲ್ ಬಾಟಲಿ ಖರೀದಿಗೆ ಮುಂದಾಗಿದ್ದರು. ಆಗ ಅಲ್ಲಿಗೆ ಬಂದಿದ್ದ ಮುಂಡಗೋಡಿನ ಯಶವಂತ ಶೇಖರ್ ಲಮಾಣಿ ಅವರು ಸವಿತಾ ಲಮಾಣಿ ಅವರನ್ನು ಅವಮಾನಿಸಿದರು.
ಜೊತೆಗಿದ್ದ ಲಲಿತಾ ಶೇಖರ್ ಲಮಾಣಿ, ಶೇಖರ್ ಲಮಾಣಿ, ಅನುಸೂಯಾ ಮಂಜು ಲಮಾಣಿ, ಮಂಜು ಲಮಾಣಿ, ಹೇಮಂತ ಲಮಾಣಿ, ಸುರೇಶ ಲಮಾಣಿ ಹಾಗೂ ನಾಗರಾಜ ಲಮಾಣಿ ಅವರು ತಮ್ಮ ಬೈಗುಳ ಶುರು ಮಾಡಿದರು. ಅತ್ಯಂತ ಕೆಟ್ಟ ಶಬ್ದಗಳಿಂದ ಅವರೆಲ್ಲರೂ ಸವಿತಾ ಲಮಾಣಿ ಅವರನ್ನು ನಿಂದಿಸಿದ್ದು, ಮಗನ ಮುಂದೆ ಅಂತ ಶಬ್ದ ಪ್ರಯೋಗ ನಡೆದಿದನ್ನು ಸವಿತಾ ಲಮಾಣಿ ಅವರು ಸಹಿಸಿಕೊಳ್ಳಲಿಲ್ಲ. ಈ ನಡುವೆ ಅವರೆಲ್ಲರೂ `ದೇವರಾಜನ ಜೀವನ ಹಾಳು ಮಾಡಿದವಳು’ ಎಂದು ಸಹ ಹೇಳಿ ಅವಮಾನ ಮಾಡಿದರು.
ಅವರೆಲ್ಲರೂ ಸೇರಿ ಸವಿತಾ ಲಮಾಣಿ ಅವರನ್ನು ದೂಡಿ ಹಾಕಿದರು. `ನಿನ್ನ ಜೊತೆ ಮಗನನ್ನು ಮುಗಿಸುತ್ತೇವೆ’ ಎಂದು ಬೆದರಿಸಿದರು. ಈ ಹಿನ್ನಲೆ ಸವಿತಾ ಲಮಾಣಿ ಅವರು ಪೊಲೀಸ್ ದೂರು ನೀಡಿದರು.