ಐದು ಅಡಿ ನೀರಿಲ್ಲದ ಕಾಳಿ ಹಿನ್ನೀರಿನಲ್ಲಿ ಸುಮಾರು 10 ಅಡಿ ಎತ್ತರದ ಆನೆಯೊಂದು ಮುಳುಗಿ ಸತ್ತಿದೆ. ಆನೆ ಮುಳುಗುವಷ್ಟು ಪ್ರಮಾಣದ ನೀರಿಲ್ಲದ ಪ್ರದೇಶದಲ್ಲಿ ಆನೆ ಮುಳುಗಿದ್ದಾದರೂ ಹೇಗೆ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಾಂಬ್ರಾಣಿ ವಲಯದ ಬೊಮ್ಮನಹಳ್ಳಿ ಹಿನ್ನೀರು ಪ್ರದೇಶದಲ್ಲಿ ಕಾಡಾನೆಯ ಶವ ಸಿಕ್ಕಿದೆ. ಸೋಮವಾರ ಈ ಆನೆ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಬಗ್ಗೆ ಅಧಿಕಾರಿಗಳು ನಂಬಿದ್ದಾರೆ. ಆನೆ ಹೊಟ್ಟೆ ಉಬ್ಬಿದ್ದರಿಂದ ಅದು ಅಪಾರವಾಗಿ ನೀರು ಕುಡಿದು ಸಾವನಪ್ಪಿರುವ ಬಗ್ಗೆಯೂ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ, ಅಷ್ಟು ದೊಡ್ಡ ಗಾತ್ರದ ಆನೆ ಇಷ್ಟು ಚಿಕ್ಕ ಪ್ರಮಾಣದ ನೀರಿನಲ್ಲಿ ಮುಳುಗಿ ಸತ್ತಿದೆ ಎಂಬುದನ್ನು ಮಾತ್ರ ಜನರಿಂದ ನಂಬಲು ಸಾಧ್ಯವಾಗುತ್ತಿಲ್ಲ. ಮೇ ಮಾಸವಾಗಿದ್ದರಿಂದ ಕಾಳಿ ಹಿನ್ನೀರಿನ ನೀರಿನ ಪ್ರಮಾಣ ಕಡಿಮೆ ಆಗಿದೆ. ನೀರು ಭರ್ತಿಯಾಗುವ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಹೀಗಿರುವಾಗ ಗರಿಷ್ಟ ಐದಾರು ಅಡಿ ಮಾತ್ರ ನೀರು ಹಿನ್ನೀರು ಪ್ರದೇಶದಲ್ಲಿದ್ದು, ಅದರೊಳಗೆ ಆನೆ ಬಿದ್ದು ಸಾವನಪ್ಪಿರುವ ಬಗ್ಗೆ ಜನ ಅನುಮಾನವ್ಯಕ್ತಪಡಿಸಿದ್ದಾರೆ.
ಆನೆ ಸತ್ತ ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಅದಾದ ನಂತರ ಬೊಮ್ಮನಳ್ಳಿ ನೀರಿನ ಸಮೀಪವೇ ಆನೆಯ ಅಂತ್ಯ ಸಂಸ್ಕಾರವನ್ನು ಮಾಡಿದ್ದಾರೆ. ಸಾವನಪ್ಪಿರುವ ಆನೆಯ ದಂತಗಳನ್ನು ಅಧಿಕಾರಿಗಳು ಮೈಸೂರು ಸಂಗ್ರಹಾಲಯಕ್ಕೆ ಕಳುಹಿಸಿದ್ದಾರೆ. ಆನೆ ನೀರು ಕುಡಿದು ಸಾವನಪ್ಪಿದ ಬಗ್ಗೆ ಅಧಿಕಾರಿಗಳು ಹೇಳಿದ್ದರೂ, ಈ ಬಗ್ಗೆ ಇನ್ನಷ್ಟು ಖಚಿತ ಮಾಹಿತಿಗಾಗಿ ಆನೆಯ ಹೃದಯ ಹಾಗೂ ಮೂತ್ರಪಿಂಡದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಎಫ್ಎಸ್ಎಲ್ ವರದಿ ಬಂದ ನಂತರ ಆನೆ ಸಾವಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ.