ಮುಂಡಗೋಡಿನ ಕುಸೂರಿನ ಕೊಟ್ಟಿಗೆಗೆ ಕಾಡು ಕೋಣ ನುಗ್ಗಿದೆ. ಇಲ್ಲಿನ ದತ್ತಾತ್ರೇಯ ಜನ್ನು ಅವರ ಮನೆ ಹಿತ್ತಲಿನಲ್ಲಿ ಕಾಣಿಸಿಕೊಂಡ ಕಾಡುಕೋಣ ಕೊನೆಗೆ ಕೊಟ್ಟಿಗೆ ಸುತ್ತುವರೆದು ಕಾಡು ಸೇರಿದೆ!
ಮುಂಡಗೋಡಿನ ಕುಸೂರಿನ ದತ್ತಾತ್ರೇಯ ಜನ್ನು ಅವರ ಕುಟುಂಬ ಅನಾಧಿಕಾಲದಿಂದಲೂ ಹೈನುಕಾರಿಕೆ ಮಾಡುತ್ತಿದ್ದಾರೆ. ಜಾನುವಾರುಗಳನ್ನು ಅವರು ಅತ್ಯಂತ ಪ್ರೀತಿಯಿಂದ ಸಾಕಿ-ಸಲಹುತ್ತಿದ್ದಾರೆ. ನಿತ್ಯ ಜಾನುವಾರುಗಳನ್ನು ಅವರು ಮೇವಿಗೆ ಬಿಡುತ್ತಿದ್ದು, ಸಂಜೆ ವೇಳೆ ಅವರು ಮನೆಯ ಹಿತ್ತಿಲ ಬಳಿ ಬಂದು ನಿಲ್ಲುತ್ತವೆ. ಶುಕ್ರವಾರ ಸಂಜೆ ಮನೆ ಹಿತ್ತಿಲ ಬಳಿ ಹಸುಗಳ ಜೊತೆ ಕೋಣವೊಂದು ಕಾಣಿಸಿದ್ದು, ಸಮೀಪ ಹೋಗಿ ನೋಡಿದಾಗ ಅದು ಕಾಡುಕೋಣ ಎಂದು ಗೊತ್ತಾಗಿದೆ!
ಕೋಣದ ಕಾಲು ಹಾಗೂ ದೇಹದ ಚಹರೆ ಗಮನಿಸಿದ ನಂತರ ಅದು `ಸಾಕು ಪ್ರಾಣಿ ಅಲ್ಲ’ ಎಂಬುದು ಅರಿವಾಗಿದೆ. ಕಾಡಿನಿಂದ ತಪ್ಪಿಸಿಕೊಂಡು ಬಂದ ಕಾಡುಕೋಣ ಕೊಟ್ಟಿಗೆ ಸಮೀಪ ಬಂದಿದ್ದನ್ನು ನೋಡಿ ದತ್ತಾತ್ರೇಯ ಜನ್ನು ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡುಕೋಣ ಊರಿಗೆ ಬಂದ ಸುದ್ದಿ ಕೇಳಿ ಇನ್ನಷ್ಟು ಜನ ಜಮಾಯಿಸಿದ್ದಾರೆ. ಆದರೆ, ಕಾಡು ಕೋಣ ಯಾರಿಗೂ ಹೆದರಿಲ್ಲ. ಜನರಿಗೆ ತೊಂದರೆಯನ್ನು ಸಹ ಮಾಡಿಲ್ಲ.
ದನಗಳ ಜೊತೆ ಕೆಲ ಕಾಲ ಬೆರೆತ ಆ ಕಾಡು ಕೋಣ ನಂತರ ಕೊಟ್ಟಿಗೆಯ ಸುತ್ತ ಓಡಾಡಿದೆ. ಜನ ಗಾಬರಿಗೊಂಡು ಬೊಬ್ಬೆ ಹೊಡೆದಿದ್ದು, ಆ ಸದ್ದಿಗೆ ಹೆದರಿದ ಕಾಡುಕೋಣ ಕಾಡಿನ ಕಡೆ ಓಡಿದೆ. ಊರಿಗೆ ಬಂದ ಕಾಡು ಕೋಣ ಕಾಡಿಗೆ ಹೋದ ನಂತರ ಜನರು ಸಮಾಧಾನಗೊಂಡಿದ್ದಾರೆ.