ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಭಟ್ಕಳದಲ್ಲಿ ಮತ್ತೆ ಹಿಂದು-ಮುಸ್ಲಿo ಗಲಾಟೆ ನಡೆದಿದೆ. ಅದರ ಪರಿಣಾಮ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. `ದಯವಿಟ್ಟು ಶಾಂತಿ ಕಾಪಾಡಿ’ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಭಟ್ಕಳ ನಗರ ಮೂಲಕ ಹಾಯ್ದು ಹೋಗುವ ರಾ ಹೆ 66ರ ಪಕ್ಕದಲ್ಲಿ ಮಾರಿಕಾಂಬೆ ದೇವಸ್ಥಾನಕ್ಕೆ ಹೋಗುವ ಹೊರೆಯನ್ನಿಡುವ ಸ್ಥಳವಿದ್ದು ಅದನ್ನು ಸ್ಥಳೀಯವಾಗಿ ಮುರಿನಕಟ್ಟೆ ಎಂದು ಕರೆಯಲಾಗುತ್ತದೆ. ಹೆದ್ದಾರಿ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ವಾಹನ ಸಂಚಾರ ತೊಂದರೆಯಾಗದ ಹಾಗೆ ಮುರಿನಕಟ್ಟೆಯನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಕೆಂಪು ಕಲ್ಲಿನಿಂದ ಕಟ್ಟಿದ ಹೊಸಕಟ್ಟೆಯನ್ನು ಮೇ 24ರ ರಾತ್ರಿ ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಈ ವೇಳೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಜನ ಕಟ್ಟೆ ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ. ಮುರಿನಕಟ್ಟೆ ಪುನರ್ ನಿರ್ಮಾಣಕ್ಕೆ ಪೊಲೀಸರು ಸ್ಪಷ್ಟ ಭರವಸೆ ನೀಡದ ಕಾರಣ ಅಲ್ಲಿ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು ಮುರಿನಕಟ್ಟೆಗೆ ತೆರಳಿ ಕಟ್ಟೆ ನಿರ್ಮಿಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಗುಂಪು ಚದುರಿಸುವುದಕ್ಕಾಗಿ ಪೊಲೀಸರು ಲಾಠಿ ಪ್ರಹಾರವನ್ನು ಮಾಡಿದ್ದಾರೆ.
ಮಧ್ಯರಾತ್ರಿ ಮುರಿನಕಟ್ಟೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ದೇವಿಯ ಶಕ್ತಿಪೀಠದ ಕಟ್ಟೆ ಮತ್ತೆ ಪುನರ್ ನಿರ್ಮಿಸಲು ಮುಂದಾದಾಗ ಪೊಲೀಸರು 15 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ನಂತರ ಅವರನ್ನು ಮುರುಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಭಟ್ಕಳದ ಹಿಂದೂ ಸಮಾಜದ ಮುಖಂಡರು ಕಾರ್ಯಕರ್ತರನ್ನು ಬಿಡುಗಡೆಗಳಿಸಲು ಒತ್ತಾಯಿಸಿದರು. ನಂತರ ವಶದಲ್ಲಿದ್ದ ಹಿಂದೂ ಕಾರ್ಯಕರ್ತರನ್ನು ಭಟ್ಕಳ ಶಹರ ಠಾಣೆಗೆ ಕರೆತಂದು ಬಿಡಲಾಯಿತು. ಹೊಸದಾಗಿ ನಿರ್ಮಿಸಿದ್ದ ಮುರಿನಕಟ್ಟೆಯನ್ನು ಕೆಲ ಮುಸ್ಲಿಮರು ಧ್ವಂಸಗೊಳಿಸಿದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ರಾತೋರಾತ್ರಿ ಭಟ್ಕಳ ಶಹರ ಠಾಣೆಗೆ ಮುತ್ತಿಗೆ ಹಾಕಿದರು. ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮುರಿನಕಟ್ಟೆ ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದವರನ್ನು ಕೂಡ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ವಾಹನ ಸಂಚಾರಕ್ಕೆ ಅಡ್ಡಿ, ಪೊಲೀಸ್ ಕರ್ತವ್ಯಕ್ಕ ಅಡ್ಡಿ, ಹಲ್ಲೆ ಹಾಗೂ ದರೋಡೆ, ಪ್ರಚೋದನಾಕಾರಿ ವಿಡಿಯೋ ಹರಿಬಿಟ್ಟಿರುವುದು ಸೇರಿ ಪೊಲೀಸರು ನಾಲ್ಕು ಪ್ರಕರಣಗಳನ್ನು ದಾಖಲಿಸಿದರು. ಸಾಮಾಜಿಕ ಜಾಲತಾಣದಲ್ಲಿ ಭಟ್ಕಳದ ಮೂರಿನಕಟ್ಟೆ ಪ್ರಕರಣದ ಕುರಿತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಪೊಸ್ಟಗಳು, ಸುಳ್ಳು ಸುದ್ದಿಗಳು ಹರಿಬಿಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದಲ್ಲಿ ಸಂಬAಧಪಟ್ಟ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ ಪೊಲೀಸರು ಎಚ್ಚರಿಸಿದರು. ಹೊಸದಾಗಿ ಸ್ಥಳಾಂತರಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಮುರಿನಕಟ್ಟೆಯನ್ನು ನಾಶಪಡಿಸಿದವರ ಮೇಲೆ ಕಾನೂನಿನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯಾ ಅವರು ಸ್ಪಷ್ಟನೆ ನೀಡಿದರು. ಜೊತೆಗೆ ಭಟ್ಕಳದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಜಿಲ್ಲಾಧಿಕಾರಿಗಳು ನಿಷೇಧಾಜ್ಷೆ ಹೊರಡಿಸಿದ್ದು, ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಅಡ್ಡಗಟ್ಟಿದ ಹಿಂದೂ ಯುವಕರು ಕ್ರಮಕ್ಕೆ ಆಗ್ರಹಿಸಿದರು. ಸದ್ಯ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನು ತಡೆಗಟ್ಟಲು ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಉದ್ದಕ್ಕೂ ಇರುವ ವಿವಾದಿತ ಸ್ಥಳದ ಸುತ್ತಲೂ ಭಾರೀ ಭದ್ರತೆಗೆ ಒತ್ತು ನೀಡಲಾಗಿದೆ. ವಾತಾವರಣವು ಉದ್ವಿಗ್ನವಾಗಿದ್ದರೂ ಪರಿಸ್ಥಿತಿ ಜಿಲ್ಲಾಡಳಿತದ ನಿಯಂತ್ರಣದಲ್ಲಿದೆ.