ಕುಮಟಾ ಬಿಜೆಪಿ ಮಂಡಳ ಅಧ್ಯಕ್ಷ ಜಿ ಐ ಹೆಗಡೆ ಅವರು ದೈವಸ್ಥಾನ ಜಾಗ ಒತ್ತುವರಿ ಪ್ರಯತ್ನ ಮಾಡಿದ ಆರೋಪಕ್ಕೆ ಒಳಗಾಗಿದ್ದಾರೆ. ಅರಣ್ಯ ಜಾಗಕ್ಕೂ ಅವರು ಬೇಲಿ ಹಾಕುವ ಪ್ರಯತ್ನ ಮಾಡಿದ್ದು, ಇದನ್ನು ನೋಡಿದ ಜನ ತಡೆ ಒಡ್ಡಿದ್ದಾರೆ.
ಕುಮಟಾ ತಾಲೂಕಿನ ಮೂರೂರು ಗ್ರಾಮ ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿದೆ. ಇಲ್ಲಿನ ಸರ್ವೆ ನಂಬರ್ 191ರಲ್ಲಿ `ಜಟಕ’ ದೇವರಿದ್ದು, ಸುತ್ತಲಿನ ಅನೇಕ ಗ್ರಾಮದವರು ದೇವರಿಗೆ ನಡೆದುಕೊಳ್ಳುತ್ತಾರೆ. `ಆ ದೇವರಿಂದಲೇ ಕಾಡು ಉಳಿದಿದೆ’ ಎಂದು ಜನ ನಂಬಿದ್ದಾರೆ. ಹೀಗಿರುವಾಗ, ಆ ದೇವರ ಜಾಗವೇ ಅತಿಕ್ರಮಣಕ್ಕೆ ಒಳಗಾಗುವ ಆತಂಕ ಶುರುವಾಗಿದೆ.
ವಿವಾದಿತ ಪ್ರದೇಶದ ಪಕ್ಕದ ಭೂಮಿಗೆ ದತ್ತಾತ್ರೇಯ ಭಟ್ಟ ಎಂಬಾತರು ಮಾಲಕರಾಗಿದ್ದು, ಅವರಿಗೆ ಸಹಾಯ ಮಾಡಲು ಹೋಗಿ ಜಿ ಐ ಹೆಗಡೆ ಅವರು ಸಿಕ್ಕಿಬಿದ್ದಿದ್ದಾರೆ. ಮೂರು ಎಕರೆ ಖಾಸಗಿ ಭೂಮಿಯ ಜೊತೆ ಪಕ್ಕದಲ್ಲಿದ್ದ ಅರಣ್ಯ ಭೂಮಿಯನ್ನು ಸೇರಿ ಕಪೌಂಡ್ ನಿರ್ಮಿಸುವ ದುಸ್ಸಾಹಸ ನಡೆದಿದ್ದು, ಈ ಕೆಲಸಕ್ಕೆ ಮುಂದಾದ ಜಿ ಐ ಹೆಗಡೆ ಅವರನ್ನು ಜನ ತರಾಠೆಗೆ ತೆಗೆದುಕೊಂಡಿದ್ದಾರೆ. ಸದ್ಯ ಕಪೌಂಡ್ ಹಾಕಲು ತಂದಿದ್ದ ಚೀರೆಕಲ್ಲುಗಳು ಅರಣ್ಯ ಭೂಮಿ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದಿದೆ.
`700ಕ್ಕೂ ಅಧಿಕ ಕುಟುಂಬಗಳು ಆರಾಧಿಸುವ ದೈವಸ್ಥಾನದ ಪ್ರದೇಶ ಯಾವುದೇ ಕಾರಣಕ್ಕೂ ಅತಿಕ್ರಮಣವಾಗಬಾರದು’ ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ. ಮೂರೂರು ಗ್ರಾಮದಲ್ಲಿ ಅರಣ್ಯ ಭೂಮಿ ಮತ್ತು ದೈವಸ್ಥಾನದ ಜಾಗವನ್ನು ಒತ್ತುವರಿ ಮಾಡಲು ಯತ್ನಿಸಿದ ಆರೋಪದ ಮೇಲೆ ಕುಮಟಾ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ ಐ ಹೆಗಡೆ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದು, ಈ ವಿಷಯದ ಬಗ್ಗೆ ಸರ್ಕಾರದ ಗಮನಸೆಳೆದಿದ್ದಾರೆ.
`500ಕ್ಕೂ ಅಧಿಕ ಜನ ಒಟ್ಟಾಗಿ ಭೂ ಅತಿಕ್ರಮಣ ತಡೆದಿದ್ದೇವೆ. ರಾಜಕೀಯ ಪ್ರಭಾವಕ್ಕೆ ಮಣಿದು ಮತ್ತೆ ಅತಿಕ್ರಮಣಕ್ಕೆ ಅವಕಾಶ ಕೊಡುವ ಹಾಗಿಲ್ಲ’ ಎಂದು ಮೂರೂರಿನ ಹರ್ಷ ಹೆಗಡೆ ಅವರು ತಾಕೀತು ಮಾಡಿದ್ದಾರೆ. ದತ್ತಾತ್ರೇಯ ಭಟ್ಟ ಅವರಿಗೆ ಅವರು ಹೊಂದಿರುವ 3 ಎಕರೆ ಇಳಿಜಾರು ಪ್ರದೇಶದ ಬದಲಾಗಿ ಅರಣ್ಯ ಇಲಾಖೆಯ ಸಮದಟ್ಟು ಜಾಗವನ್ನು ಅಕ್ರಮವಾಗಿ ಕೊಡಿಸುವ ಹುನ್ನಾರ ಇಲ್ಲಿ ನಡೆದಿದೆ. ಇದಕ್ಕೆ ಬಿಜೆಪಿ ಮಂಡಳ ಅಧ್ಯಕ್ಷ ಜಿ ಐ ಹೆಗಡೆ ಅವರು ಮುಂದಾಳತ್ವವಹಿಸಿದ್ದು, ಇದು ಕಾನೂನುಬಾಹಿರ’ ಎಂದು ಆ ಭಾಗದ ಮಾದೇವ ನಾಯ್ಕ್, ಭಾರತಿ ನಾಯ್ಕ್, ನಾಗೇಶ ನಾಯ್ಕ ಹಾಗೂ ಗಣೇಶ ಮುಕ್ರಿ ಅವರು ಹೇಳಿದ್ದಾರೆ.
`
2021ರಲ್ಲಿ ಅರಣ್ಯ ಇಲಾಖೆ ಮತ್ತು ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿದ್ದರು. ಸದರಿ ಜಾಗವು ಕಂದಾಯ ಇಲಾಖೆಗೆ ಸೇರಿದ್ದಲ್ಲ ಎಂಬುದು ಸ್ಪಷ್ಠವಾಗಿದೆ. ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ ದಾಖಲೆಗಳಿವೆ. ಹೀಗಿದ್ದರೂ, ರಾಜಕೀಯ ಒತ್ತಡ ಬಳಸಿ ಸರ್ವೆ ಕಾರ್ಯ ಮತ್ತು ಗಡಿ ಗುರುತಿಸುವಿಕೆ ಮಾಡುವ ಮೂಲಕ ಭೂಮಿಯನ್ನು ಕಬಳಿಸಲು ನಿರಂತರ ಸಂಚು ನಡೆಯುತ್ತಿದೆ’ ಎಂದು ಈಶ್ವರ ಮುಕ್ರಿ, ವಿಷ್ಣು ಗೌಡ ಕೇರ್ಗಜನಿ, ಭಾಸ್ಕರ್ ಮಡಿವಾಳ ಮೂರೂರ್, ಈಶ್ವರ ನಾಯ್ಕ್ ಮೂರೂರು, ಕುಪ್ಪು ಗೌಡ, ವೆಂಕಟಿ ಮುಕ್ರಿ ಮೂರೂರು ಅವರು ದೂರಿದ್ದಾರೆ.
ಕೆಲವು ದಿನಗಳ ಹಿಂದೆ ಅತಿಕ್ರಮಣ ಚಟುವಟಿಕೆಗಳು ನಡೆಯುತ್ತಿದ್ದ ವಿಷಯ ತಿಳಿದ ತಕ್ಷಣ ಅಲ್ಲಿ ಜನ ಜಮಾಯಿಸಿದ್ದು, ಅಲ್ಲಿದ್ದ ಜಿ ಐ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. `ಗ್ರಾಮದ ಆಸ್ತಿ ಮತ್ತು ದೈವದ ಜಾಗವನ್ನು ಬಿಟ್ಟುಕೊಡುವುದಿಲ್ಲ’ ಎಂದು ಜನ ಪಟ್ಟು ಹಿಡಿದು ಒತ್ತುವರಿಯನ್ನು ತಡೆದಿದ್ದಾರೆ. ಅದಾಗಿಯೂ, ರಾಜಕೀಯ ಒತ್ತಡದಿಂದ ಅರಣ್ಯ ಭೂಮಿ ಹಾಗೂ ಧಾರ್ಮಿಕ ಸ್ಥಳ ಅನ್ಯರ ಪಾಲಾಗುವ ಸಾಧ್ಯತೆ ಹಿನ್ನಲೆ ಊರಿನವರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಒತ್ತುವರಿ ಪ್ರಯತ್ನ ಮುಂದುವರೆದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಊರಿನವರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಅವರು ಮನವಿ ಪತ್ರ ಸ್ವೀಕರಿಸಿದ್ದಾರೆ.