ಕುಮಟಾ ಬಿಜೆಪಿ ಮಂಡಳ ಅಧ್ಯಕ್ಷ ಜಿ ಐ ಹೆಗಡೆ ಅವರು ಭೂ ಅಕ್ರಮ ನಡೆಸಿದ ಬಗ್ಗೆ ಹರ್ಷ ಹೆಗಡೆ ಸಹಚರರು ಆರೋಪಿಸಿದ್ದು, `ನಾನು ಯಾರಿಗೂ ಅನ್ಯಾ ಮಾಡಿಲ್ಲ‘ ಎಂದು ಇದೀಗ ಜಿ ಐ ಹೆಗಡೆ ಅವರೇ ಹೇಳಿಕೆ ನೀಡಿದ್ದಾರೆ. `ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಸಹಿಸದ ಜನ ತಮ್ಮ ವಿರುದ್ಧ ದೂರು ನೀಡಿದ್ದಾರೆ. ಆ ದೂರಿನಲ್ಲಿ ಸತ್ಯಾಂಶವಿಲ್ಲ’ ಎಂದು ಜಿ ಐ ಹೆಗಡೆ ಅವರು ಸ್ಪಷ್ಟನೆ ನೀಡಿದ್ದಾರೆ.
`ಬಿಜೆಪಿ: ಮಂಡಳ ಅಧ್ಯಕ್ಷರಿಂದಲೇ ಭೂ ಅಕ್ರಮ’ ತಲೆಬರಹದ ಅಡಿ ಮಂಗಳವಾರ ಮೊಬೈಲ್ ಮಿಡಿಯಾ ನೆಟ್ವರ್ಕ ವರದಿ ಪ್ರಸಾರ ಮಾಡಿತ್ತು. ಹರ್ಷ ಹೆಗಡೆ ಹಾಗೂ ಸಹಚರರು ಸರ್ಕಾರಕ್ಕೆ ಸಲ್ಲಿಸಿದ ದೂರಿನ ಆಧಾರದಲ್ಲಿ ಈ ವರದಿ ಪ್ರಸಾರವಾಗಿದ್ದು, ವಿವಿಧ ಮಾಧ್ಯಮಗಳಲ್ಲಿಯೂ ಈ ವಿಷಯ ಚರ್ಚೆ ನಡೆದಿತ್ತು. ಅದೇ ಭೂಮಿ ವಿಷಯವಾಗಿ ಬುಧವಾರ ಜಿ ಐ ಹೆಗಡೆ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. `ಆ ಭೂಮಿ ಅರಣ್ಯ ಇಲಾಖೆ ಆಸ್ತಿಯೇ ಅಲ್ಲ’ ಎಂದು ಅವರು ಹೇಳಿದ್ದಾರೆ.
`ಕುಮಟಾ ಮೂರೂರು ಗ್ರಾಮದ ಸರ್ವೆ ನಂಬರ್ 191/1ಅ ಕ್ಷೇತ್ರದಲ್ಲಿ ದತ್ತಾತ್ರೇಯ ಭಟ್ಟ ಅವರು 3 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಆ ಭೂಮಿಗೆ ಕಪೌಂಡ್ ಹಾಕಲು ಕೆಲವರು ತೊಂದರೆ ನೀಡುತ್ತಿದ್ದು, ಸಹಾಯ ಕೇಳಿ ಬಂದ ದತ್ತಾತ್ರೇಯ ಭಟ್ಟ ಅವರ ದಾಖಲೆಗಳನ್ನು ನೋಡಿ ತಾನು ನೆರವು ನೀಡಿದ್ದೇನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯವಾಗಿದ್ದು, ಅದನ್ನು ಸಹಿಸದೇ ಕೆಲವರು ಅನಗತ್ಯ ಆರೋಪ ಮಾಡುತ್ತಿದ್ದಾರೆ’ ಎಂದು ಜಿ ಐ ಹೆಗಡೆ ಅವರು ಹೇಳಿದ್ದಾರೆ. `3 ಎಕ್ರೆ ಸರಕಾರಿ ಅರಣ್ಯ ಭೂಮಿಯನ್ನು ರಾಜಕೀಯ ಪ್ರಭಾವ ಬಳಿಸಿ ಒತ್ತುವರಿಗೆ ಯತ್ನಿಸಿರುವುದಾಗಿ ಕೇಳಿ ಬಂದ ಆರೋಪದಲ್ಲಿ ಸ್ವಲ್ಪವೂ ಸತ್ಯವಿಲ್ಲ’ ಎಂದವರು ಪುನರುಚ್ಚರಿಸಿದ್ದಾರೆ.
`ದತ್ತಾತ್ರೇಯ ಭಟ್ಟ ಅವರು ಅಧಿಕೃತವಾಗಿ ಖರೀದಿಸಿದ ಭೂಮಿಗೆ ಕಪೌಂಟ್ ನಿರ್ಮಿಸಲು ಅರಣ್ಯ ಇಲಾಖೆ ಸಮಸ್ಯೆ ಮಾಡಿತ್ತು. ಆ ಬಗ್ಗೆ ಅವರು ನನ್ನಲ್ಲಿ ಹೇಳಿಕೊಂಡಿದ್ದು, ದಾಖಲೆಗಳನ್ನು ಗಮನಿಸಿಯೇ ನಾನು ಮುಂದಿನ ಹೆಜ್ಜೆಯಿಟ್ಟಿದ್ದೇನೆ. ದತ್ತಾತ್ರೇಯ ಭಟ್ಟ ಅವರು ಖರೀದಿಸಿದ ಭೂಮಿಯಲ್ಲಿ ಜಟಕ ದೇವರಿಲ್ಲ. ಜಟಕ ದೇವರಿರುವ ಕ್ಷೇತ್ರದ ಮೇಲೆ ಅವರು ಕಣ್ಣು ಹಾಕಿಲ್ಲ. ತಾನೂ ಸಹ ಅನ್ಯರಿಗೆ ತೊಂದರೆ ಕೊಡುವ ಉದ್ದೇಶ ಹೊಂದಿಲ್ಲ’ ಎಂದು ಜಿ ಐ ಹೆಗಡೆ ಅವರು ಹೇಳಿದ್ದಾರೆ. ದತ್ತಾತ್ರೇಯ ಭಟ್ಟ ಅವರು ಮಾತನಾಡಿ `ಮೂರೂರು ಗ್ರಾಮದ 191 ಸರ್ವೇ ನಂಬರಿಗೆ ಸಂಬoಧಿಸಿ ಇದ್ದ 175 ಎಕರೆ ಅರಣ್ಯ ಪ್ರದೇಶದಲ್ಲಿನ 3 ಎಕರೆ ಪ್ರದೇಶವನ್ನು ಶ್ರೀಧರ ಮಹಾಭಲೇಶ್ವರ ಹೆಗಡೆ ಅವರಿಗೆ 1995-96ರಲ್ಲಿ ಜಿಲ್ಲಾಧಿಕಾರಿಗಳು ಮಂಜೂರಿ ಮಾಡಿದ್ದರು. ಈ 3 ಎಕರೆ 189 ಸರ್ವೇ ನಂಬರ ಚಕ್ ಬಂಧಿಯ ಲಗ್ತ ಇರುವ 191/ಅ1 ಪ್ರದೇಶ ಎಂದು ಸೂಚಿಸಿದ್ದರು. ಈ ರೀತಿ ಮಂಜೂರಾದ ಹಾಗೂ ಸೂಚಿತ 3 ಎಕರೆ ಜಾಗವನ್ನು ನಾನು ಹಾಗೂ ಮಂಜುನಾಥ ವೆಂಕಟ್ರಮಣ ಹೆಗಡೆ ಜಂಟಿಯಾಗಿ 2014ರಲ್ಲಿ ಖರೀದಿಸಿದ್ದು, ಈ ಸ್ಥಳದ ಕುರಿತು ಅರಣ್ಯ ಹಾಗೂ ಸರ್ವೇ ಇಲಾಖೆಯಿಂದ ಜಂಟಿ ಸರ್ವೆ ನಡೆದಿದೆ. ಗಡಿ ಗುರುತು ಹಾಕಲಾಗಿದೆ’ ಎಂದವರು ವಿವರಿಸಿದರು.
`ನಾವು ಖರೀದಿಸಿದ ಈ ಜಾಗದಲ್ಲಿ ಜಟಕ ದೇವರಿಲ್ಲ. ಜಟಕ ದೇವರು ನಮ್ಮ ಜಾಗದಿಂದ ತುಂಬಾ ದೂರದಲ್ಲಿದ್ದು, ಖರೀದಿ ಜಾಗಕ್ಕೆ ಕಪೌಂಡ್ ಹಾಕಲು ಮುಂದಾದಗಲೆಲ್ಲ ವಿರೋಧವಾಗುತ್ತಿರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಈ ಸಮಸ್ಯೆ ನಿವಾರಣೆಗಾಗಿ ನಾವು ಜಿ ಐ ಹೆಗಡೆ ಅವರನ್ನು ಕೋರಿಕೊಂಡಿದ್ದು, ಕಿಡಿಗೇಡಿಗಳು ಇದೀಗ ಅವರ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ’ ಎಂದು ದೂರಿದರು. ಶ್ರೀಧರ ಮಹಾಬಲೇಶ್ವರ ಹೆಗಡೆ, ಕೃಷ್ಣಮೂರ್ತಿ ಹೆಗಡೆ ಹಾಗೂ ಮಂಜುನಾಥ ವೆಂಕಟ್ರಮಣ ಹೆಗಡೆ ಅವರು ಹಾಜರಿದ್ದು, `ಜಿ ಐ ಹೆಗಡೆ ಅವರದ್ದು ಯಾವುದೇ ತಪ್ಪಿಲ್ಲ’ ಎಂದರು.