ಸರ್ವ ಧರ್ಮಗಳ ಸಹಕಾರದಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಲಕ್ಷ್ಮೀನೃಸಿಂಹ ದೇವರ ವಾರ್ಷಿಕ ರಥೋತ್ಸವ ನಡೆದಿದೆ. ಗುರುವಾರ ರಾತ್ರಿ ಭಕ್ತಿ, ಸಂಪ್ರದಾಯ ಮತ್ತು ಭಾವೈಕ್ಯದ ವಾತಾವರಣದಲ್ಲಿ ನಡೆದ ಈ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಮಾಡಿದ್ದಾರೆ.
ಹಿಂದು ಸಮುದಾಯದೊಂದಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಜನರೂ ಉತ್ಸವದ ವಿವಿಧ ವ್ಯವಸ್ಥೆಗಳಲ್ಲಿ ಕೈಜೋಡಿಸಿದ್ದು, ಇಲ್ಲಿನ ವಿಶೇಷ. ಹೀಗಾಗಿ ಈ ಉತ್ಸವ ಭಾವೈಕ್ಯತೆಯ ರಥೋತ್ಸವವಾಗಿ ಮೂಡಿ ಬಂದಿತು. ಧರ್ಮಗಳ ನಡುವೆ ಸೌಹಾರ್ದ ಮತ್ತು ಪರಸ್ಪರ ಗೌರವವನ್ನು ಸಾರುವ ಅಪೂರ್ವ ಉದಾಹರಣೆಯಾಗಿ ಈ ಉತ್ಸವ ಎಲ್ಲರ ಗಮನ ಸೆಳೆಯಿತು.
ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನೃಸಿಂಹ ದೇವರ ವಾರ್ಷಿಕ ರಥೋತ್ಸವಕ್ಕೆ ಬೇರೆ ಬೇರೆ ಊರುಗಳಿಂದ ಭಕ್ತರು ಬಂದಿದ್ದರು. ರಥೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದ ಹಾಗೂ ಜಯಂತಿಯ ಮುಂಜಾನೆಯಿoದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇವರಿಗೆ ಮಹಾಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಧ್ವಜಸ್ಥಾಪನೆ, ಅನ್ನಪೂರ್ಣೇಶ್ವರಿ ಪೂಜೆ, ವೇದಘೋಷ, ಮಂಗಳಾರತಿ ಹಾಗೂ ಭಜನಾ ಕಾರ್ಯಕ್ರಮಗಳು ಭಕ್ತಿಭಾವವನ್ನು ಹೆಚ್ಚಿಸಿತು. ಮಠದ ಆವರಣವು ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರಗಳಿoದ ಕಂಗೊಳಿಸುತ್ತಿತ್ತು. ಶ್ರೀ ಶ್ರೀ ಗಂಗಾಧರೇoದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಶ್ರೀ ಶ್ರೀ ಆನಂದಬೋಧೇAದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ರಥೋತ್ಸವ ನಡೆದಿದ್ದು, ಎಲ್ಲಡೆಯಿಂದ ಭಕ್ತರ ಹರ್ಷೋದ್ಘಾರ ಕೇಳಿಸಿತು.
ರಾತ್ರಿ ವಿಶೇಷ ಆಕರ್ಷಣೆಯಾಗಿದ್ದ ಶ್ರೀ ದೇವರ ರಥೋತ್ಸವ ಭಕ್ತರ ಜಯಘೋಷಗಳ ನಡುವೆ ನಡೆಯಿತು. ರಥಾರೂಢನಾದ ಶ್ರೀ ಲಕ್ಷ್ಮೀನೃಸಿಂಹ ದೇವರ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು. ರಾತ್ರಿ 11 ಗಂಟೆಗೆ ರಥಾ ರೂಢನಾದ ದೇವರ ರಥೋತ್ಸವ 11.30ಕ್ಕೆ ಆರಂಭವಾಯಿತು. ರಾತ್ರಿ 1 ಗಂಟೆ ವೇಳೆಗೆ ರಥ ವಾಪಸ್ಸಾಯಿತು. ರಥೋತ್ಸವದಲ್ಲಿ ಸಂಭ್ರಮದ ಬಾಣಬಿರುಸುಗಳು ಆಕಾಶವನ್ನು ಬೆಳಗಿಸಿದವು. ತಾಳ, ವಾದ್ಯಗಳ ನಿನಾದ, ಭಕ್ತರ ಜಯಘೋಷದ ನಡುವೆ ರಥೋತ್ಸವವು ಮನಸೆಳೆಯಿತು. ರಥೋತ್ಸವದ ಬಳಿಕ ನಡೆದ ಯಕ್ಷಗಾನ ಕಾರ್ಯಕ್ರಮವೂ ಭಕ್ತರನ್ನು ರಂಜಿಸಿತು. ಯಕ್ಷಶಾಲಾ ಸಂಸ್ಥೆ ನೇತೃತ್ವದಲ್ಲಿ ಖ್ಯಾತ ಕಲಾವಿದರಿಂದ ಪ್ರದರ್ಶಿತವಾದ “ಸುಭದ್ರಾ ಕಲ್ಯಾಣ” ಯಕ್ಷಗಾನ ಪ್ರದರ್ಶನ ಮೆಚ್ಚುಗೆಗೆ ಕಾರಣವಾಯಿತು.