ಅರಣ್ಯ ವಿಸ್ತರಣೆ ಹಾಗೂ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಅರಣ್ಯ ಇಲಾಖೆ ಪ್ರತಿ ಮಳೆಗಾಲದಲ್ಲಿಯೂ ಕೋಟಿ ಕೋಟಿ ರೂಪಾಯಿಯ ಯೋಜನೆ ರೂಪಿಸುತ್ತಿದ್ದು, ಆ ನಡುತೋಪು ಕಾಮಗಾರಿಗಳ ಬಗ್ಗೆ ಅನುಮಾನ ಹಾಗೂ ಅಸಮಧಾನವ್ಯಕ್ತವಾಗಿದೆ. ಅರಣ್ಯ ಅತಿಕ್ರಮಣದಾರರಿಗೆ ಕಾನೂನು ಪಾಠ ಮಾಡುವ ಅರಣ್ಯಾಧಿಕಾರಿಗಳು ತಾವು ಕಾಪಾಡಿದ ಗಿಡ-ಮರಗಳು ಎಷ್ಟು? ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಪ್ರಶ್ನಿಸಿದ್ದಾರೆ.
`ಮಳೆಗಾಲ ಶುರುವಾದ ತಕ್ಷಣ ಅರಣ್ಯ ಇಲಾಖೆ ಗಿಡಗಳ ನಾಟಿ ಶುರು ಮಾಡುತ್ತದೆ. ಗಿಡಗಳನ್ನು ನಾಟಿ ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಹೊಳೆ ಅಂಚಿನಲ್ಲಿ ಎಸೆಯಲಾಗುತ್ತದೆ. ಕೋಟ್ಯಂತರ ರೂ ಖರ್ಚು ಮಾಡುವ ಅರಣ್ಯ ಇಲಾಖೆ ತಾವು ನೆಟ್ಟ ಗಿಡಗಳಲ್ಲಿ ಬದುಕಿದ್ದು ಎಷ್ಟು? ಎಂದು ಸಹ ಲೆಕ್ಕ ಮಾಡಬೇಕು’ ಎಂದು ಅರಣ್ಯವಾಸಿಗಳು ಆಗ್ರಹಿಸಿದ್ದಾರೆ. `ನಡು ತೋಪಿನಲ್ಲಿ ಬದುಕಿರುವ ಗಿಡಗಳಿಗಿಂತ ಸತ್ತಿರುವ ಸಂಖ್ಯೆ ಹೆಚ್ಚಾಗಿ ಕಾಣುತ್ತಿದೆ. ಜೀವಂತ ಗಿಡ ನೆಡುವ ಬದಲು ನೀರಿನಲ್ಲಿ ಗಿಡ ತೇಲಿ ಬಿಡುವ ಬಗ್ಗೆಯೂ ಸಾಕಷ್ಟು ನಿದರ್ಶನಗಳಿವೆ’ ಎಂದವರು ಹೇಳಿದ್ದಾರೆ.
`ಪರಿಸರ ಪ್ರಜ್ಞೆಯ ಬಗ್ಗೆ ಪಾಠ ಮಾಡುವ ಅರಣ್ಯ ಇಲಾಖೆ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಗಿಡ ಆರೈಕೆ ಮಾಡುತ್ತಿದೆ. ಅದೇ ಪ್ಲಾಸ್ಟಿಕನ್ನು ಅರಣ್ಯದಲ್ಲಿ ಬಿಸಾಡುತ್ತಿದ್ದು ಅರಣ್ಯ ಸಿಬ್ಬಂದಿ ನೆಟ್ಟ ಗಿಡ ಹುಟ್ಟಿದ್ದಕ್ಕಿಂತ ಹೆಚ್ಚಾಗಿ ಬೀಜ ಪ್ರಸರಣಾದಿಂದ ಹುಟ್ಟಿರುವ ಗಿಡಗಳೇ ಜಾಸ್ತಿಯಿವೆ’ ಎಂದು ಹೇಳಿದ್ದಾರೆ. `ಪರಿಸರ ವಿರೋಧಿ ಹಾಗೂ ಮರ ಕಡಿಯುವ ಉದ್ದೇಶದಿಂದ ಪದೇ ಪದೇ ಅಕೇಶಿಯಾ ಗಿಡ ನೆಡುವುದು ಮತ್ತು ಕಡಿಯುವ ಪರಿಸರ ವಿರೋಧಿ ಪ್ರವೃತ್ತಿಯನ್ನು ಅಧಿಕಾರಿಗಳು ಬೆಳಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ನೀತಿ ಸಮಂಜಸವಲ್ಲ’ ಎಂದವರು ಹೇಳಿದ್ದಾರೆ.