ಶಿರಸಿ ಕಸ್ತೂರಿಬಾ ನಗರದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕೆಲಸ ನಡೆಯುತ್ತಿದ್ದು, ಗುತ್ತಿಗೆದಾರ ಯಶ್ವಂತ ಬೈಂದೂರು ಅವರು ಇಲ್ಲಿ ಮಣ್ಣಿನ ರಸ್ತೆ ಮೇಲೆ ಜಲ್ಲಿ-ಕಡಿ ಹಾಕದೇ ಡಾಂಬರ್ ಸುರಿದಿದ್ದಾರೆ. ಶುರುವಿನಲ್ಲಿ 5.5ಮೀಟರ್ ಅಗಲವಿದ್ದ ರಸ್ತೆ ಮುಂದೆ ಹೋದಂತೆ ಕಿರಿದಾಗುತ್ತ ಬಂದಿದ್ದು, ಕೊನೆಗೆ 3.5ಮೀಟರಿಗೆ ಸೀಮಿತವಾಗಿದೆ!
ಕಳಪೆ ಕಾಮಗಾರಿಯ ವಿರುದ್ಧ ಕಸ್ತೂರಿಬಾ ನಗರದ ಜನ ಸಿಡಿದೆದ್ದಿದ್ದಾರೆ. ಶುಕ್ರವಾರ ನಗರಸಭೆ ಅಧಿಕಾರಿ ಪ್ರಶಾಂತ ರೇವಣಕರ್ ಅವರನ್ನು ಸ್ಥಳಕ್ಕೆ ಕರೆಯಿಸಿದ ಜನ ರಸ್ತೆಯ ಅಳತೆ ಮಾಡಿಸಿದ್ದು, ಮಣ್ಣಿನ ಮೇಲೆ ಡಾಂಬರ್ ಹಾಕಿದನ್ನು ಕಾಣಿಸಿದ್ದಾರೆ. ಇಲ್ಲಿನ ಅಲ್ಪೇಟ್ ವಾದ್ ಅಂಗಡಿಯಿAದ ಅಲ್ಸಿಬಾ ಎಸ್ಟಿಡಿವರೆಗೆ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿ ನಡೆದ ಕಾರಣ ನಗರಸಭೆ ಅಧಿಕಾರಿ ಜೊತೆ ಗುತ್ತಿಗೆದಾರರನ್ನು ಸ್ಥಳೀಯರು ತರಾಠೆಗೆ ತೆಗೆದುಕೊಂಡಿದ್ದಾರೆ. `ಕಳೆದ 18 ವರ್ಷಗಳಿಂದ ಕಸ್ತೂರಿಬಾ ನಗರದ ರಸ್ತೆಗೆ ಡಾಂಬರೀಕರಣ ನಡೆದಿಲ್ಲ. ಜನ ಸಾಕಷ್ಟು ಹೋರಾಟ ನಡೆಸಿದ ನಂತರ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ಮರು ಡಾಂಬರೀಕರಣ ಹೆಸರಿನಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. 50 ಲಕ್ಷ ರೂಪಾಯಿ ವೆಚ್ಚದ ಈ ಕಾಮಗಾರಿಯ ಹಣದಲ್ಲಿ ರಸ್ತೆ ಕೆಲಸ ನಡೆದಿದ್ದು, ಆರ್ ಟಿ ಓ ಕಚೇರಿ ಬಳಿ ರಸ್ತೆ 5.5ಮೀ ಅಗಲವಿದೆ. ಕಸ್ತೂರಿಬಾ ನಗರ ತಲುಪಿದಾಗ ರಸ್ತೆ 3.5ಮೀ ಅಗಲಕ್ಕೆ ಸೀಮಿತವಾಗಿದೆ’ ಎಂದು ಅಲ್ಲಿನ ಇಮ್ರಾನ್ ಶೇಖ್ ಅವರು ಟೇಪುಹಿಡಿದು ಅಳತೆ ಮಾಡಿ ತೋರಿಸಿದ್ದಾರೆ. ಅಲ್ಲಿ ಸೇರಿದ್ದ ಜನರೇ ಸುರಿದ ಡಾಂಬರ್ ಅಗೆದು ಕಳಪೆ ಕಾಮಗಾರಿಯನ್ನು ಅಧಿಕಾರಿಗಳಿಗೆ ಪ್ರದರ್ಶಿಸಿದ್ದಾರೆ.
ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣಕ್ಕೆ ಯಶ್ವಂತ ಬೈಂದೂರು ಎಂಬಾತರು ಗುತ್ತಿಗೆಪಡೆದಿದ್ದಾರೆ. ನಂತರ ಅವರು ಆ ಗುತ್ತಿಗೆಯನ್ನು ರಿಯಾಜ್ ಎಂಬಾತರಿಗೆವಹಿಸಿದ್ದಾರೆ. ಗುತ್ತಿಗೆವಹಿಸಿದ ಕೆಲಸವನ್ನು ಸ್ವತಃ ಮುತುವರ್ಜಿಯಿಂದ ಮಾಡುವ ಬದಲು ಉಪಗುತ್ತಿಗೆ ನೀಡಿರುವುದು ಸಹ ಕಳಪೆ ಕಾಮಗಾರಿಗೆ ಕಾರಣ ಎಂಬ ಆರೋಪವ್ಯಕ್ತವಾಗಿದೆ. `ರಸ್ತೆಗೆ ಬಳಸಿದ ಡಾಂಬರ್ ಸಹ ಅತ್ಯಂತ ಕಳಪೆಯಾಗಿದೆ’ ಎಂದು ಜನ ದೂರಿದ್ದಾರೆ. ರಸ್ತೆ ಅಗಲೀಕರಣ ಕೆಲಸದಲ್ಲಿನ ಅವ್ಯವಹಾರದ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ಸರಿಯಾಗಿ ಉತ್ತರಿಸಲು ತಡಬಡಾಯಿಸಿದ್ದಾರೆ. ಈ ವೇಳೆ ರಸ್ತೆ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ನಂತರ ನಡೆದ ರಾಜಿ-ಸಂಧಾನದ ವೇಳೆ `ಸದ್ಯ ರಸ್ತೆ ಕೆಲಸ ನಿಲ್ಲಿಸುವುದು ಬೇಡ. ಗುಣಮಟ್ಟದ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಹಿರಿಯರು ಹೇಳಿದ್ದಾರೆ. ಈ ವೇಳೆ ನಗರಸಭೆಯ ಮಾಜಿ ಸದಸ್ಯರೊಬ್ಬರು ಉಡಾಫೆಯಿಂದ ವರ್ತಿಸಿದ ಆರೋಪವ್ಯಕ್ತವಾಗಿದೆ. ನಗರಸಭೆ ಮಾಜಿ ಸದಸ್ಯ ಅಬ್ದುಲ್ ಖಾದರ್ ಅನವಟ್ಟಿ ಅವರು `ಈ ಭಾಗಕ್ಕೆ ರಸ್ತೆ ಮಂಜೂರಿ ಮಾಡಿಸಿದ್ದೇ ದೊಡ್ಡ ಮಾತು’ ಎಂದು ಆಕ್ರೋಶಭರಿತವಾಗಿ ಮಾತನಾಡಿದ ಬಗ್ಗೆ ಅಲ್ಲಿನವರು ದೂರಿದ್ದಾರೆ.
`ರಸ್ತೆ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕೆ ಒತ್ತು ನೀಡಲಾಗುತ್ತದೆ. ಡಾಂಬರ್ ಪರೀಕ್ಷೆ ಮಾಡಿದ ವರದಿಯನ್ನು ನೀಡುತ್ತೇವೆ’ ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಜನ ಪ್ರತಿಭಟನೆ ಹಿಂಪಡೆದಿದ್ದಾರೆ. ಸ್ಥಳೋಐರಾದ ಇಮ್ರಾನ್ ಶೇಖ್ ಅವರ ಜೊತೆ ಮಹಮದ್ ಆಸೀಂ, ರಿಯಾಜ್ ಶೇಖ್, ಸತ್ತಾರ್ ಶೇಖ್, ಗುರು ಚಂದ್ರು, ತೌಷೀಫ್ ಶೇಖ್, ತಾರೀಕ್ ಮಿಜಗರ್, ಸುವೇಲ್ ಶೇಖ್, ಬಸು ಅವು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದು ಕಳಪೆ ಕಾಮಗಾರಿ ಮುಂದುವರೆದಲ್ಲಿ ಎಲ್ಲರೂ ಸೇರಿ ಶಾಸಕರ ಮುಂದೆ ಹೋಗಲು ನಿರ್ಧರಿಸಿದ್ದಾರೆ.