ಸಿದ್ದಾಪುರದಲ್ಲಿನ ಉರ್ದು ಶಾಲೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಕಟ್ಟಡ ಕುಸಿಯವ ಆತಂಕ ಎದುರಾಗಿದೆ. ಅಲ್ಲಿ 22 ಲಕ್ಷ ರೂ ವೆಚ್ಚ ಮಾಡಿ ತಡೆಗೋಡೆ ನಿರ್ಮಿಸಲು ಸರ್ಕಾರ ಆಸಕ್ತಿವಹಿಸಿದೆ. ಇದನ್ನು ವಿರೋಧಿಸಿ ಬಿಜೆಪಿಗರು ಪ್ರತಿಭಟನೆ ಮಾಡಿದ್ದಾರೆ.
`ಸಿದ್ದಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಉರ್ದು ಶಾಲೆ ಕಟ್ಟಡ ಅಭದ್ರವಾಗಿರುವ ಕಾರಣ ಅಲ್ಲಿ ತಡೆಗೋಡೆ ಕಟ್ಟಿ ಪ್ರಯೋಜನವಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ್ ಅವರು ರೈತಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಅವರ ಸಹಾಯಪಡೆದು ಇಲ್ಲಿ ಹೋರಾಟ ಶುರು ಮಾಡಿದ್ದಾರೆ. `ಈ ಪ್ರದೇಶವನ್ನು ಸಂತೆ ಮಾರುಕಟ್ಟೆಯನ್ನಾಗಿ ಪರಿವರ್ತನೆ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
`ಈ ಜಾಗದಲ್ಲಿ ಶಾಲೆ ನಡೆಯುತ್ತಿಲ್ಲ. ಮತ್ತೆ ಅದೇ ಜಾಗದಲ್ಲಿ ಪ್ರಾರಂಭಿಸುವ ಅವಶ್ಯಕತೆಯೂ ಇಲ್ಲ. ಹೀಗಾಗಿ ಶಾಲಾ ಮಕ್ಕಳನ್ನು ಬೇರೆಡೆಗೆ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಬೇಕು. ಒಂದು ವೇಳೆ ತಡೆಗೋಡೆ ನಿರ್ಮಿಸಿ ಶಾಲೆ ಪ್ರಾರಂಭಿಸಿ ಅನಾಹುತನಡೆದರೆ ಅದಕ್ಕೆ ಶಾಸಕರೇ ಹೊಣೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಅದರೊಂದಿಗೆ `ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಹ ಅನಾಹುತದ ಹೊಣೆಗಾರಿಕೆ ಹೋರಬೇಕಾಗುತ್ತದೆ’ ಎಂದು ಗುಡುಗಿದ್ದಾರೆ. ತೋಟಪ್ಪ ನಾಯ್ಕ್, ನಂದನ್ ಬೋಕರ್, ಮಾರುತಿ ನಾಯ್ಕ್ ಹೊಸೂರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಜೊತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿ, ನಂತರ ಶಾಂತವಾದರು.