ಕುಮಟಾ ಹಿರೇಗುತ್ತಿಯಲ್ಲಿ ಮನೆ ಮಾಡಿಕೊಂಡಿರುವ ಪೊಲೀಸ್ ಸಿಬ್ಬಂದಿ ಚಂದ್ರಕಾoತ ಮಸಾಕಲ್ ಅವರ ಮನೆಗೆ ನುಗ್ಗಿದ್ದ ಕಳ್ಳರು ಪತ್ತೆಯಾಗಿದ್ದಾರೆ. ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಅವರು ನಡೆಸಿದ ಕಾರ್ಯಾಚರಣೆಯಲ್ಲಿ ಅಂತರಾಜ್ಯ ದರೋಡೆಕೋರರು ಸಿಕ್ಕಿಬಿದ್ದಿದ್ದು, ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಜನವರಿ 9ರಂದು ಪೊಲೀಸ್ ಸಿಬ್ಬಂದಿ ಚಂದ್ರಕಾAತ್ ಮಸಾಕಲ್ರವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ದೋಚಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಭಟ್ಕಳ ವಿಭಾಗದ ಉಪಾಧೀಕ್ಷಕ ಗಿರೀಶ್ ಬಿ ವೈ, ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ್ ಕೆ ಎಮ್ ಸೇರಿ ಕಳ್ಳರ ಶೋಧ ಶುರು ಮಾಡಿದ್ದರು.
Àಗೋಕರ್ಣ ಪಿಐ ಶ್ರೀಧರ ಎಸ್ ಆರ್ ಅವರು ಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಪಿಸೈ ಅನಿಲ ಬಿ ಎಂ, ಅಪರಾಧ ವಿಭಾಗದ ರಾಜೇಶ್ ಹೆಚ್ ನಾಯ್ಕ, ಶ್ರೀಕಾಂತ್ ಕಟಬರ್, ಪರಮೇಶ್ವರ ಬೆಂಡ್ಲಗಟ್ಟಿ, ಕಿರಣ್ ಬಾಳೂರ್ ಅವರ ಜೊತೆ ಯಲ್ಲಾಪುರ ಪೊಲೀಸ್ ಠಾಣೆ ಮಹಮ್ಮದ್ ಶಫಿ, ಯೋಗೇಶ್ ಕುಮಾರ್ ಅವರು ಕೈ ಜೋಡಿಸಿದರು. ಪೊಲೀಸ್ ಸಿಬ್ಬಂದಿ ಉದಯ ಗುನಗಾ, ಬಬನ್ ಕದಂ ಅವರು ನೀಡಿದ ತಾಂತ್ರಿಕ ಸಹಾಯ ಕಳ್ಳರ ಪತ್ತೆಗೆ ಸಹಾಯ ಮಾಡಿತು.
ಕೇರಳ, ತಮಿಳುನಾಡು ಸೇರಿ 40ಕ್ಕೂ ಅಧಿಕ ಕಡೆ ಕಳ್ಳತನ, ದರೋಡೆ ಮಾಡಿದ್ದ ಕೇರಳದ ತ್ರಿಶೂರ ಸತ್ಯೇಶಪುರುಶೋತ್ತಮ (40) ಹಾಗೂ ಶಿಜು ರಾಮಕೃಷ್ಣನ್ (47) ಅವರು ಈ ದಿನ ಪೊಲೀಸರ ಬಳಿ ಸಿಕ್ಕಿಬಿದ್ದರು. ಅವರ ಬಳಿಯಿದ್ದ 66 ಗ್ರಾಂ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ 08 ಲಕ್ಷ ಮೌಲ್ಯದ ಕಾರನ್ನು ಪೊಲೀಸರು ಜಪ್ತು ಮಾಡಿದರು. ಸದ್ಯ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವೂ 15 ದಿನಗಳ ನ್ಯಾಯಾಂಗ ಬಂಧನವಿಧಿಸಿದೆ.