ಬೆಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿರುವ ದೀಪಾ ಅಶ್ವಥನಾರಾಯಣ ಅವರು ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದು, ಇಲ್ಲಿನ ಅಂಗಡಿಕಾರ ಸೂರಜ್ ದೇಶಭಂಡಾರಿ ಅವರಿಗೆ ಥಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೂರಜ್ ದೇಶಭಂಡಾರಿ ಅವರು ಸಹ ದೀಪಾ ಅವರ ಕಾರು ಚಾಲಕ ಗಣೇಶ ಜಿಕೆ ಅವರಿಗೆ ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ.
ದೀಪಾ ಅಶ್ವಥನಾರಾಯಣ ಅವರು ಶನಿವಾರ ತಮ್ಮ ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದರು. ಮುಖ್ಯ ಕಡಲತೀರದ ಬಳಿ ಅವರು ತಮ್ಮ ಕಾರು ನಿಲ್ಲಿಸಿದ್ದರು. ಕಾರಿನ ಚಾಲಕ ಗಣೇಶ ಜಿಕೆ ಎಂಬಾತರಿoದ ಅಲ್ಲಿದ್ದವರು ಪಾರ್ಕಿಂಗ್ ಫೀ ವಸೂಲಿ ಮಾಡಿದ್ದರು. ಆದರೆ, ಅಲ್ಲಿ ಅಂಗಡಿ ನಡೆಸುವ ಸೂರಜ ದೇಶಭಂಡಾರಿ ಅವರ ಪತ್ನಿ ಅಂಗಡಿ ಮುಂದೆ ಕಾರು ನಿಲ್ಲಿಸುವುದನ್ನು ವಿರೋಧಿಸಿದ್ದರು. `ಪಾರ್ಕಿಂಕ್ ಫೀ ಕೊಟ್ಟು ಕಾರು ನಿಲ್ಲಿಸಿದ್ದೇವೆ’ ಎಂದಾಗ ಸೂರಜ್ ದೇಶಭಂಡಾರಿ ಅವರು ಹೊರಗೆ ಬಂದು ಗಲಾಟೆ ಶುರು ಮಾಡಿದರು.
ಅತ್ಯಂತ ಕೆಟ್ಟ ಶಬ್ದಗಳಿಂದ ಸೂರಜ್ ದೇಶಭಂಡಾರಿ ಅವರು ಬೈದಿದ್ದು, ಈ ಗಲಾಟೆ ಸಹಿಸದ ದೀಪಾ ಅಶ್ವಥನಾರಾಯಣ ಅವರು ಕೈಮುಷ್ಠಿಯ ಶಕ್ತಿ ಪ್ರದರ್ಶಿಸಿದರು. ಈ ವೇಳೆ ಸೂರಜ ದೇಶಭಂಡಾರಿ ಅವರು ಸಹ ಕಾರು ಚಾಲಕ ಗಣೇಶ ಬಿಜೆ ಅವರಿಗೆ ಗಾಜಿನ ಬಾಟಲಿಯಿಂದ ಹೊಡೆದರು. ಜಗಳ ಬಿಡಿಸಲು ಹೋಗಿದ್ದ ದೀಪಾ ಅವರ ಪತಿ ಅಶ್ವಥನಾರಾಯಣ ಅವರಿಗೂ ಸೂರಜ ದೇಶಭಂಡಾರಿ ಅವರು ಹೊಡೆದರು. ಪಾರ್ಕಿಂಗ್ ಫೀ ಪಡೆದಿದ್ದವರು ಅಲ್ಲಿಯೇ ಇದ್ದು, ಸೂರಜ ದೇಶಭಂಡಾರಿ ಅವರಿಗೆ ಬೆಂಬಲಿಸಿದರು.
ಗಾಯಗೊಂಡ ಪ್ರವಾಸಿಗರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಕಡೆಯವರು ಹೊಡೆದಾಟ ನಡೆಸಿದ್ದು, ಸದ್ಯ ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪಾರ್ಕಿಂಗ್ ಸ್ಥಳದಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ.