ಕಾನ್ಸರ್ ರೋಗಿಗಳ ಅಂತರಾಳ ಅರಿತ ಸ್ತುತಿ ಹೆಗಡೆ ಅವರು ತಮ್ಮ ಕೂದಲು ದಾನ ಮಾಡಿದ್ದಾರೆ. ಆ ಮೂಲಕ ಕಾನ್ಸರ್ ರೋಗಿಗಳಲ್ಲಿ ಆತ್ಮ ವಿಶ್ವಾಸ ತುಂಬುವ ಕಾಯಕಕ್ಕೆ ಕೈ ಜೋಡಿಸಿದ್ದಾರೆ.
ಶಿರಸಿಯ ಕೊಳಗಿಬೀಸ್ ಬಳಿಯ ಹೆಗ್ಗರ್ಸಿಮನೆಯ ಸ್ತುತಿ ಹೆಗಡೆ ಅವರು 7ನೇ ತರಗತಿಯ ವಿದ್ಯಾರ್ಥಿನಿ. ಅವರ ತಂದೆ ರಾಘವೇಂದ್ರ ಹೆಗಡೆ ಅವರು ಜಾನ್ಮನೆ ಸೊಸೈಟಿಯಲ್ಲಿ ವ್ಯವಸ್ಥಾಪಕರಾಗಿದ್ದು, ತಾಯಿ ಗಾಯತ್ರಿ ಹೆಗಡೆ ಅವರು ಹೆಗಡೆಕಟ್ಟಾ ಸೊಸೈಟಿ ಸಿಬ್ಬಂದಿಯಾಗಿದ್ದಾರೆ. ತಾಯಿ ತವರುಮನೆಯಾದ ಒಣಿಕೈ ಬಳಿ ಸ್ತುತಿ ಹೆಗಡೆ ಅವರು ಕುಟುಂಬದ ಜೊತೆ ವಾಸವಾಗಿದ್ದು, ಅಲ್ಲಿಯೇ ಸಮೀಪದಲ್ಲಿರುವ ಪಂಚಲಿoಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಸದ್ಯ ಸೊಂಪಾಗಿ ಬೆಳೆದಿದ್ದ ತಲೆಗೂದಲನ್ನು ಅವರು ಸ್ವಯಂ ಪ್ರೇರಣೆಯಿಂದ ಕಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಮತ್ತೆ ಮೂರು ವರ್ಷದಲ್ಲಿ ಮತ್ತೆ 14 ಇಂಚು ಉದ್ದ ಕುದಲು ಬೆಳೆಯುವ ನಿರೀಕ್ಷೆಯಿದ್ದು, 10ನೇ ತರಗತಿ ತಲುಪಿದಾಗ ಮತ್ತೊಮ್ಮೆ ಕೂದಲು ದಾನ ಮಾಡಲು ನಿರ್ಧರಿಸಿದ್ದಾರೆ.
ಸ್ತುತಿ ಹೆಗಡೆ ಅವರ ಕೂದಲು ಬಾಲ್ಯದಿಂದಲೂ ಸೊಂಪಾಗಿ ಬೆಳೆದಿತ್ತು. ಏಳನೇ ತರಗತಿಯವರೆಗೆ ಬರುವವರೆಗೆ ಅವರ ಕೂದಲು ಇನ್ನಷ್ಟು ಸಮೃದ್ಧವಾಗಿತ್ತು. ಆ ಕೂದಲನ್ನು ಕತ್ತರಿಸಲು ಪಾಲಕರು ನಿರ್ಧರಿಸಿದ್ದರು. ಕೂದಲನ್ನು ತುಂಡರಿಸಿ ಹಾಳು ಮಾಡುವ ಬದಲು ಅದನ್ನು ಬೇರೆಯವರ ಉಪಯೋಗಕ್ಕೆ ಬಳಸುವ ಬಗ್ಗೆ ರಾಘವೇಂದ್ರ ಹೆಗಡೆ ಹಾಗೂ ಗಾಯತ್ರಿ ಹೆಗಡೆ ಅವರು ಚಿಂತಿಸಿದರು. ಈ ಬಗ್ಗೆ ಶೋಧ ನಡೆಸಿದಾಗ ಕಾನ್ಸರ್ ರೋಗಿಗಳ ಬಳಕೆಗೆ ಕೂದಲು ಅಗತ್ಯವಿರುವ ಬಗ್ಗೆ ಅರಿವಾಯಿತು. ಇನ್ನಷ್ಟು ಹುಡುಕಾಟ ನಡೆಸಿದಾಗ ಶಿರಸಿಯಲ್ಲಿಯೇ ಇರುವ ಅಸ್ಮಿತೆ ಪೌಂಡೇಶನ್ ಕಾನ್ಸರ್ ರೋಗಿಗಳಿಗಾಗಿ ಶ್ರಮಿಸುತ್ತಿರುವುದು ಗಮನಕ್ಕೆ ಬಂದಿತು. ಕಾನ್ಸರ್ ರೋಗಿಗಳಿಗೆ ಕುದಲು ನೀಡುವ ಬಗ್ಗೆ ತಿಳಿಸಿದಾಗ ಸ್ತುತಿ ಹೆಗಡೆ ಅವರು ಅತ್ಯಂತ ಖುಷಿಪಟ್ಟರು. ಅಸ್ಮಿತೆ ಪೌಂಡೇಶನ್ ಅವರನ್ನು ಸಂಪರ್ಕಿಸಿದ ರಾಘವೇಂದ್ರ ಹೆಗಡೆ ಅವರು ತಮ್ಮ ಮಗಳ ಕೂದಲನ್ನು ಕಾನ್ಸರ್ ರೋಗಿಗಳ ಅನುಕೂಲಕ್ಕೆ ನೀಡುವ ವಿಷಯ ತಿಳಿಸಿದರು.
ಅಸ್ಮಿತೆ ಪೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಿಯಾಜ್ ಸಾಗರ್ ಅವರು ಬಾಲಕಿ ಕಾರ್ಯವನ್ನು ಮೆಚ್ಚಿ, ಅವರನ್ನು ಕರೆಯಿಸಿ ವೈಜ್ಞಾನಿಕ ಪದ್ಧತಿಯಲ್ಲಿ ಕೂದಲುಪಡೆದರು. ಕಳೆದ ನಾಲ್ಕು ವರ್ಷಗಳಿಂದ ಆರೈಕೆಯಿಂದ ಬೆಳೆಸಿದ್ದ ಕೂದಲನ್ನು ಸ್ತುತಿ ಹೆಗಡೆ ಅವರು ದಾನ ಮಾಡಿದರು. ಒಟ್ಟು 14 ಇಂಚಿನ ಕೂದಲನ್ನು ಅಚ್ಚುಕಟ್ಟಾಗಿ ತುಂಡರಿಸಿ, ಅದನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ರಬ್ಬರ್ ಬ್ಯಾಂಡ್ ಬಿಗಿದು ಬೆಂಗಳೂರಿಗೆ ಕಳುಹಿಸಿದರು. ಇಂಡಿಯನ್ ಕಾನ್ಸರ್ ಸೊಸೈಟಿಯವರು ಆ ಕೂದಲು ಸ್ವೀಕರಿಸಿದ್ದು, ಕಾನ್ಸರ್ ರೋಗಿಗಳಿಗೆ ಕಸಿ ಮಾಡುವ ಕಾಯಕ ನಡೆಸಿದ್ದಾರೆ.
ಕಾನ್ಸರ್ ರೋಗಕ್ಕೆ ತುತ್ತಾದವರನ್ನು ರಕ್ಷಿಸುವುದಕ್ಕಾಗಿ ಚಿಕಿತ್ಸೆಯ ಭಾಗವಾಗಿ ಕಿಮೋಥೆರಪಿ ನಡೆಸಲಾಗುತ್ತದೆ. ಆ ವೇಳೆ ದೇಹದಲ್ಲಿದ್ದ ಕಾನ್ಸರ್ ಕೋಶಗಳು ನಾಶವಾಗಲಿದ್ದು, ಅದರೊಂದಿಗೆ ಆರೋಗ್ಯಕರ ಜೀವ ಕೋಶಗಳು ನಶಿಸುತ್ತವೆ. ಅದರ ಪರಿಣಾಮ ರೋಗಿಗಳು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಹೀಗೆ ಕೂದಲು ಕಳೆದುಕೊಂಡ ಮಹಿಳೆ ಹಾಗೂ ಮಕ್ಕಳು ಮಾನಸಿಕವಾಗಿ ಕುಗ್ಗುವ ಸಾಧ್ಯತೆಯಿದ್ದು, ಈಗಾಗಲೇ ಕಾನ್ಸರ್ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದವರು ಕೂದಲಿನ ಸೌಂದರ್ಯಕ್ಕಾಗಿ ಇನ್ನಷ್ಟು ಹಣ ಖರ್ಚು ಮಾಡುವ ಪರಿಸ್ಥಿತಿಯಲ್ಲಿರುವುದಿಲ್ಲ. ರೋಗಿಗಳ ತಲೆಗೆ ಕೂದಲು ಕಸಿ ಮಾಡುವುದರಿಂದ ಅವರ ಮನಸ್ಸಿನ ನೋವು, ಕೀಳರಿಮೆ ದೂರವಾಗಲಿದ್ದು, ಇಂಥ ಸನ್ನಿವೇಶದಲ್ಲಿ ಸ್ತುತಿ ಹೆಗಡೆ ಅವರಂಥವರು ಮಾಡಿದ ಸಣ್ಣ ಕೊಡುಗೆಯೂ ಕಾನ್ಸರ್ ರೋಗಿಗಳ ಪಾಲಿಗೆ ದೊಡ್ಡ ಭರವಸೆ ನೀಡುತ್ತದೆ. ಆರೋಗ್ಯ ಶಿಬಿರ, ಜನಜಾಗೃತಿ ಸಂದೇಶಗಳ ಮೂಲಕ ಕಾನ್ಸರ್ ಬಗ್ಗೆ ನಿರಂತರ ಅರಿವು ಮೂಡಿಸುತ್ತಿರುವ ಅಸ್ಮಿತೆ ಪೌಂಡೇಶನ್ ಇಂಥ ಮಹತ್ವದ ಕಾರ್ಯಗಳಿಗೆ ಬೆನ್ನೆಲುಬಾಗಿದೆ.