ಪರ ಪುರುಷರ ಜೊತೆ ರೀಲ್ಸ್ ಮಾಡಿ ಪತಿಯನ್ನು ಪೀಡಿಸುತ್ತಿದ್ದ ಮೇಘಾ ವಾಡಕರ್ ಅವರ ಕಾಟಕ್ಕೆ ಅವರ ಪತಿ ರಾಘವೇಂದ್ರ ವಾಡಕರ್ ಸಾವನಪ್ಪಿದ್ದಾರೆ. ಕತ್ತಿಯಿಂದ ಕೈ ಕೊಯ್ದುಕೊಂಡ ರಾಘವೇಂದ್ರ ವಾಡಕರ್ ಅವರು ಅದಾದ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ರಾಘವೇಂದ್ರ ವಾಡಕರ್ (32) ಅವರು ವಾಸವಾಗಿದ್ದರು. ಏಳು ವರ್ಷಗಳ ಹಿಂದೆ ರಾಘವೇಂದ್ರ ವಾಡಕರ್ ಅವರು ಮೇಘಾ ವಾಡಕರ್ (28) ಅವರನ್ನು ಮದುವೆ ಆಗಿದ್ದರು. ರಾಘವೇಂದ್ರ ವಾಡಕರ್ ಅವರು ತಮ್ಮ ಕುಟುಂಬದ ಜೊತೆ ವಾಸವಾಗಿದ್ದು, ಇದನ್ನು ಸಹಿಸದ ಮೇಘಾ ವಾಡಕರ್ ಅವರು ಮದುವೆ ಆದ ದಿನದಿಂದಲೂ ಬೇರೆ ಮನೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಪತ್ನಿಯ ಒತ್ತಡಕ್ಕೆ ಮಣಿದ ರಾಘವೇಂದ್ರ ಅವರು ಜಾಂಬೆಚಾಳದಲ್ಲಿ ಬೇರೆ ಮನೆ ಮಾಡಿದ್ದರು. ಅದಾಗಿಯೂ, ಮೇಘಾ ವಾಡಕರ್ ಅವರ ಮನಸ್ಸು ಸಮಾಧಾನವಾಗಿರಲಿಲ್ಲ. ಪತಿ ಜೊತೆ ಆಗಾಗ ಜಗಳ ಮಾಡುತ್ತಿದ್ದ ಮೇಘಾ ಅವರು ನಾಲ್ಕು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದರು.
ರಾಘವೇಂದ್ರ ವಾಡಕರ್ ಅವರು ಅನಾರೋಗ್ಯದ ಕಾರಣ ಬೇರೆ ಊರಿಗೆ ಹೋಗಿ ಮನೆಗೆ ಮರಳುವಷ್ಟರಲ್ಲಿ ಮೇಘಾ ವಾಡಕರ್ ಅವರು ತವರು ಮನೆ ಸೇರಿದ್ದರು. ಧಾರವಾಡದಲ್ಲಿದ್ದ ಮೇಘಾ ಅವರ ಮನವೊಲೈಸಲು ರಾಘವೇಂದ್ರ ಅವರ ಜೊತೆ ಅವರ ತಂದೆ-ತಾಯಿ ಸಹ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಆ ವೇಳೆ ಪ್ರಯೋಜನವಾಗಿರಲಿಲ್ಲ. ಮತ್ತೊಮ್ಮೆ ಪತ್ನಿಯನ್ನು ಮನೆ ತುಂಬಿಸಿಕೊಳ್ಳಲು ರಾಘವೇಂದ್ರ ವಾಡಕರ್ ಅವರು ಧಾರವಾಡಕ್ಕೆ ಹೋದಾಗ `ಹುಬ್ಬಳ್ಳಿಯ ಹುಡುಗರಿಂದ ನಿನ್ನ ಕೊಲೆ ಮಾಡಿಸುವೆ’ ಎಂದು ಮೇಘಾ ವಾಡಕರ್ ಅವರು ಬೆದರಿಸಿದ್ದರು. ಅದಾದ ನಂತರವೂ ಸಾಕಷ್ಟು ಬಾರಿ ಮೇಘಾ ವಾಡಕರ್ ಅವರು ಪತಿ ರಾಘವೇಂದ್ರ ವಾಡಕರ್ ಅವರಿಗೆ ಫೋನ್ ಮಾಡಿ ಹೆದರಿಸುತ್ತಿದ್ದರು.
ಈ ಎಲ್ಲದರ ನಡುವೆ ಮೂರು ವರ್ಷದ ಹಿಂದೆ ರಾಘವೇಂದ್ರ ವಾಡಕರ್ ಅವರು ಊರು ಬಿಟ್ಟರು. ಉದ್ಯೋಗಕ್ಕಾಗಿ ಅವರು ಮಲೇಷಿಯಾಗೆ ಹೋದರು. ಈ ವೇಳೆ ಮೇಘಾ ವಾಡಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ದರು. ಬೇರೆ ಬೇರೆ ಹುಡುಗರ ಜೊತೆ ನೃತ್ಯ ಮಾಡುತ್ತ ರೀಲ್ಸ್ ಮಾಡುವುದನ್ನು ಅವರು ನೋಡಿದವರು ಆ ವಿಡಿಯೋಗಳನ್ನು ರಾಘವೇಂದ್ರ ವಾಡಕರ್ ಅವರಿಗೆ ಕಳುಹಿಸುತ್ತಿದ್ದರು. ಅದನ್ನು ನೋಡಿಯೂ, ನೋಡದ ಹಾಗೇ ರಾಘವೇಂದ್ರ ವಾಡಕರ್ ಅವರು ಸುಮ್ಮನಿರುತ್ತಿದ್ದರು. ಏಪ್ರಿಲ್ 27ರಂದು ರಾಘವೇಂದ್ರ ವಾಡಕರ್ ಅವರು ದಾಂಡೇಲಿಗೆ ಮರಳಿದ್ದು, ಆಗಲೂ ಮೇಘಾ ವಾಡಕರ್ ಅವರು ಫೋನ್ ಮಾಡಿ ಬೆದರಿಸಿದ್ದರು. `ನಿನ್ನನ್ನು ಸಾಯಿಸುವೆ’ ಎಂದು ಪತಿಯನ್ನು ಹೆದರಿಸಿದ್ದರು. `ನೀ ಹೇಗೆ ಜೀವನ ಮಾಡುವೆ ಎಂದು ನೋಡುವೆ. ಎಲ್ಲಾದರೂ ಹೋಗಿ ಸಾಯಿ’ ಎಂದು ಮೇಘಾ ವಾಡಕರ್ ಅವರು ಫೋನ್ ಮಾಡಿ ಹೇಳಿದ್ದರು.
ಈ ಎಲ್ಲದರ ನಡುವೆ ಮೇಘಾ ವಾಡಕರ್ ಅವರು ಪರ ಪುರುಷನ ಜೊತೆಗಿರುವ ಫೋಟೋವನ್ನು ಜಾಲತಾಣದಲ್ಲಿ ಹಾಕಿದ್ದರು. ವಿದೇಶದಿಂದ ಬಂದಿದ್ದ ರಾಘವೇಂದ್ರ ವಾಡಕರ್ ಅವರು ಪತ್ನಿ ನಡವಳಿಕೆಗೆ ಬೇಸತ್ತು ಕೈ ಕೊಯ್ದುಕೊಂಡರು. ಕೈ ಕೊಯ್ದುಕೊಂಡ ಫೋಟೋವನ್ನು ಅವರು ಪತ್ನಿಗೆ ಕಳುಹಿಸಿದಾಗ `ನೀ ಸತ್ತರೂ ನನಗೆ ಬೇಸರವಿಲ್ಲ’ ಎಂದು ಮೇಘಾ ವಾಡಕರ್ ಅವರು ಪ್ರತಿಕ್ರಿಯಿಸಿದ್ದರು. ಇದರಿಂದ ಬೇಸತ್ತ ರಾಘವೇಂದ್ರ ವಾಡಕರ್ ಅವರು ಮೇ 1ರಂದು ನೇಣಿಗೆ ಶರಣಾದರು. ಸಾವಿಗೂ ಮುನ್ನ ರಾಘವೇಂದ್ರ ವಾಡಕರ್ ಅವರು ತಮ್ಮ ಜೀವನದ ಕಥೆಯನ್ನು ಬರೆದಿದ್ದು, ಮರಣ ಪತ್ರದಲ್ಲಿ ಪತ್ನಿಯ ಕಾಟದ ಬಗ್ಗೆ ವಿವರಿಸಿದ್ದಾರೆ. ಮೇಘಾ ಅವರ ಜೊತೆ ಅವರ ತಾಯಿ ನೀಡಿದ ಹಿಂಸೆಯ ಬಗ್ಗೆಯೂ ಬರೆದಿದ್ದಾರೆ. ರಾಘವೇಂದ್ರ ವಾಡಕರ್ ಅವರ ಸಹೋದರಿ ನರ್ಮದಾ ವಾಡಕರ್ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ಆರೋಪಿತರನ್ನು ಬಂಧಿಸಿದ್ದಾರೆ.