ಕುಮಟಾದ ಅಘನಾಶಿನಿ ಬಳಿ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಗೆ ಆರು ಜನ ಅಡ್ಡಪಡಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆ ಬಳಿಯಿರುವ ನೀರಿನ ಟಾಕಿಗೆ ಕಲ್ಲು, ಮಣ್ಣು, ಕಟ್ಟಿಗೆ ಹಾಕಿ ಹಾಳು ಮಾಡಿದ್ದಾರೆ!
ಕುಮಟಾದ ಕಗಾಲ ಗ್ರಾಮ ಪಂಚಾಯತ ಪ್ರದೇಶ ವ್ಯಾಪ್ತಿಯ ಕೆಲವಡೆ ಕುಡಿಯುವ ನೀರಿನ ಸಮಸ್ಯೆಗಳಿವೆ. ಅಲ್ಲಿನ ಗ್ರಾಮ ಪಂಚಾಯತವು ಜನರಿಗೆ ನೀರು ಕುಡಿಸುವ ಮಹತ್ವದ ಹೊಣೆಗಾರಿಕೆ ಹೊತ್ತಿದೆ. ಇದಕ್ಕಾಗಿ ಅಲ್ಲಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಲಾಗಿದ್ದು, ಅದರ ಮೂಲಕ ಟಾಕಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಪಂಚಾಯತ ದಿನಗೂಲಿ ನೌಕರರಾದ ಹನುಮಂತ ಧಾಮೋದರ ನಾಯ್ಕ ಹಾಗೂ ಗಣಪತಿ ದೇವು ಹರಿಕಂತ್ರ ಅವರು ನೀರು ಸರಬರಾಜುವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ.
ಹೀಗಿರುವಾಗ ಏಪ್ರಿಲ್ 24ರಂದು ಹನುಮಂತ ನಾಯ್ಕ ಹಾಗೂ ಗಣಪತಿ ಹರಿಕಂತ್ರ ಅವರು ತಮ್ಮ ಕರ್ತವ್ಯಕ್ಕೆ ಹೋಗಿದ್ದರು. ಆ ದಿನ ಸಂಜೆ ಅವರು ಅಘನಾಶಿನಿ ಬಳಿಯ ಕೊಳವೆಬಾವಿ ಸಮೀಪ ಹೋದಾಗ ಅಲ್ಲಿ ಅದೇ ಊರಿನ ಗೌರೀಶ ಸುಕ್ರು ಗೌಡ, ಸತೀಶ ತುಳಸು ಗೌಡ ಹಾಗೂ ನಾಗೇಂದ್ರ ಬೀರಾ ಗೌಡ ಅವರು ಅಲ್ಲಿಗೆ ಆಗಮಿಸಿದರು. ಆ ಮೂವರು ಸೇರಿ ಕೊಳವೆ ಬಾವಿಯ ಹೂಳೆತ್ತುವ ಕೆಲಸಕ್ಕೆ ಅಡ್ಡಿಪಡಿಸಿದರು. ದಿನಗೂಲಿ ನೌಕರರಿಬ್ಬರನ್ನು ದೂಡಿ ಹಾಕಿದರು. ಆಗ, ಅಲ್ಲಿ ಗಿರೀಶ ನಾಗು ಗೌಡ, ಪ್ರಕಾಶ ಜಾನು ಗೌಡ, ಗಣೇಶ ಗಣಪು ಗೌಡ, ದಿನೇಶ ಈಶ್ವರ ಗೌಡ ಹಾಗೂ ಜೈವಂತ ತಿಮ್ಮಾ ಗೌಡ ಅವರು ಅಲ್ಲಿಗೆ ಆಗಮಿಸಿದರು. ಅವರೆಲ್ಲರೂ ಒಬ್ಬಬ್ಬರಾಗಿ ಆಗಮಿಸಿ ಕೆಲಸಕ್ಕೆ ಅಡ್ಡಿಪಡಿಸಿದರು.
ಅದಾದ ನಂತರ ಅವರೆಲ್ಲರೂ ಸೇರಿ ಆ ಕೊಳವೆ ಬಾವಿಗೆ ಇನ್ನಷ್ಟು ಕಲ್ಲು-ಮಣ್ಣು ಸುರಿದರು. ಕಟ್ಟಿಗೆಗಳನ್ನು ಹಾಕಿ ನೀರು ಬಾರದಂತೆ ತಡೆದರು. ಅದಾದ ಮೇಲೆ ಅವರೆಲ್ಲರೂ ಅಘನಾಶಿನಿ ಸರ್ಕಾರಿ ಪ್ರೌಢಶಾಲೆ ಬಳಿಯಿರುವ ನೀರು ಶೇಖರಣಾ ಟಾಕಿಗೂ ಕಲ್ಲು, ಮಣ್ಣು ಕಟ್ಟಿಗೆ ಹಾಕಿ ಹಾನಿ ಮಾಡಿದರು. ಕುಡಿಯುವ ನೀರು ಸರಬರಾಜಿಗೆ ಅಡ್ಡಿಪಡಿಸಿದ ಆ ಎಲ್ಲಾ ಕಿಡಿಗೇಡಿಗಳ ವಿರುದ್ಧ ಕಗಾಲ ಗ್ರಾ ಪಂ ಅಧಿಕಾರಿ ನವೀನ ವೆಂಕಟ್ರಮಣ ನಾಯ್ಕ ಅವರು ಮೇಲಧಿಕಾರಿಗಳಿಗೆ ದೂರಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ದೂರು ನೀಡಿದರು.