ಮುಂಡಗೋಡಿನ ವೈದ್ಯರ ವಿರುದ್ಧ ವಾಟ್ಸಪ್ ಮೂಲಕ ಮೇಲಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದ್ದು, ಅನಗತ್ಯ ದೂರು ಸಲ್ಲಿಸಿದವರ ವಿರುದ್ಧ ವೈದ್ಯರು ಪೊಲೀಸ್ ದೂರು ನೀಡಿದ್ದಾರೆ.
ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಡಾ ಸ್ವರೂಪರಾಣಿ ಪಾಟೀಲ ಅವರು ಆಡಳಿತ ವೈದ್ಯಾಧಿಕಾರಿಯಾಗಿದ್ದಾರೆ. ಅವರ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ನಡೆದಿದ್ದು, ಅದೇ ಪದಗಳನ್ನು ಬಳಸಿ ನವೀನ ವರ್ಣೇಕರ್ ಹಾಗೂ ಸಚಿನ್ ನಾಯ್ಕ ಎಂಬಾತರ ಹೆಸರಿನಲ್ಲಿ ಆರೋಗ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ವೈದ್ಯರ ಜೊತೆ ಸಿಬ್ಬಂದಿ ವಿರುದ್ಧವೂ ಆರೋಗ್ಯ ಇಲಾಖೆಗೆ ಪದೇ ಪದೇ ವಾಟ್ಸಪ್ ದೂರು ಸಲ್ಲಿಕೆಯಾಗಿದ್ದು, ಇದರಿಂದ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಸಿಡಿದೆದ್ದಿದ್ದಾರೆ. `ನಾವೇನು ತಪ್ಪು ಮಾಡಿಲ್ಲ’ ಎಂದವರು ಸಮರ್ಥಿಸಿಕೊಂಡಿದ್ದಾರೆ.
`ಸಚೀನ ನಾಯ್ಕ ಅವರು ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾಗಿದ್ದು, ಅವರ ಜೊತೆ ತಮಗೆ ಯಾವುದೇ ದ್ವೇಷವಿಲ್ಲ. ನವೀನ್ ವರ್ಣೇಕರ್ ಎಂದರೆ ಯಾರೂ ಎಂದು ನನಗೆ ಗೊತ್ತಿಲ್ಲ. ಹೀಗಿದ್ದರೂ, ಅವರಿಬ್ಬರು ತಮ್ಮ ವಿರುದ್ಧ ಅನಗತ್ಯ ಆರೋಪ ಮಾಡಿ ತೊಂದರೆ ನೀಡುತ್ತಿದ್ದಾರೆ’ ಎಂದು ಡಾ ಸ್ವರೂಪರಾಣಿ ಪಾಟೀಲ ಅವರು ದೂರಿದ್ದಾರೆ. `ಕಾನೂನುಬಾಹಿರವಾಗಿ ಆಡಳಿತಾಧಿಕಾರಿ ಹುದ್ದೆಪಡೆದ ಬಗ್ಗೆ ದೂರಲಾಗಿದ್ದು, ಅದರಲ್ಲಿ ಸತ್ಯವಿಲ್ಲ. ಸೇವಾ ಹಿರಿತನ ಹಾಗೂ ದಕ್ಷತೆ ಆಧಾರದಲ್ಲಿ ತಮಗೆ ಈ ಹುದ್ದೆ ದೊರೆತಿದ್ದು, ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ ನನಗೆ ಮಾನಸಿಕ ಕಿರಿಕಿರಿಯಾಗಿದೆ’ ಎಂದವರು ಅಳಲು ತೋಡಿಕೊಂಡಿದ್ದಾರೆ.
ದೂರು ನೀಡಿದವರಿಬ್ಬರಿಗೂ ಬೇರೊಬ್ಬರು ಕುಮ್ಮಕ್ಕು ನೀಡಿದ ಅನುಮಾನವನ್ನು ಸಹ ಡಾ ಸ್ವರೂಪರಾಣಿ ಪಾಟೀಲ ಅವರುವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ಹಾಗೂ ಕುಮ್ಮಕ್ಕಿನಿಂದ ದೂರು ನೀಡಿದವರ ಬಗ್ಗೆ ವಿಚಾರಣೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮಕ್ಕಾಗಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.