`ಯಲ್ಲಾಪುರ ಪಟ್ಟಣದಲ್ಲಿ ಜಿ+2 ಮನೆಗಳ ಹಂಚಿಕೆ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. `ಜಾತ್ರೆ ಒಳಗೆ ಮನೆ ನೀಡುವುದಾಗಿ ತಿಳಿಸಿದ್ದ ಪಟ್ಟಣ ಪಂಚಾಯತದವರು ಮಾತು ತಪ್ಪಿದ್ದಾರೆ’ ಎಂದು ಬಿಜೆಪಿಗರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರ ಜೊತೆ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಸುದ್ದಿಗೋಷ್ಠಿ ನಡೆಸಿದ್ದು, ಹೆಬ್ಬಾರ್ ನಗರದಲ್ಲಿ ನಿರ್ಮಿಸಿದ ಮನೆಗಳ ಹಂಚಿಕೆ ಕಾರ್ಯದಲ್ಲಿನ ಲೋಪಗಳ ಬಗ್ಗೆ ಗಮನಸೆಳೆದಿದ್ದಾರೆ. `ಏಳು ವರ್ಷಗಳ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿಯಿAದ ಹೆಬ್ಬಾರ್ ನಗರದಲ್ಲಿ ಜಿ+2 ಮನೆಯ ಹಂಚಿಕೆಗಾಗಿ 350 ಫಲಾನುಭವಿಗಳಿಂದ ತಲಾ 50 ಸಾವಿರ ರೂ ಹಣ ವಸೂಲಿ ಮಾಡಲಾಗಿದೆ. ಆದರೆ, ಈವರೆಗೂ ಮನೆ ನಿರ್ಮಾಣ ಕೆಲಸ ಮುಗಿದಿಲ್ಲ. ಮನೆ ಹಂಚಿಕೆಗೂ ಅಧಿಕಾರಿಗಳು ಆಸಕ್ತಿವಹಿಸಿಲ್ಲ. ಎರಡು ತಿಂಗಳ ಹಿಂದೆ ಬಿಜೆಪಿ ಈ ಬಗ್ಗೆ ಪ್ರತಿಭಟಿಸಿದಾಗ ಶೀಘ್ರದಲ್ಲಿಯೇ ಮನೆ ಹಂಚಿಕೆ ಮಾಡುವ ಭರವಸೆ ನೀಡಿದ್ದು, ಆ ಭರವಸೆಯೂ ಈಡೇರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ.
`ಈ ನಡವೆ ಜಿ+2 ಮನೆಗಾಗಿ ಫಲಾನುಭವಿಗಳು ಕೊಳಚೆ ನಿರ್ಮೂಲನಾ ಮಂಡಳಿಗೆ ಮತ್ತೆ 50 ಸಾವಿರ ರೂ ಹಾಗೂ ಹೆಬ್ಬಾರ ನಗರ ನಿವಾಸಿಗಳ ಒಕ್ಕೂಟಕ್ಕೆ 25 ಸಾವಿರ ರೂ ಸೇರಿ ಒಟ್ಟು 75 ಸಾವಿರ ರೂ ತುಂಬಬೇಕು ಎಂಬ ಪ್ರಚಾರ ನಡೆಯುತ್ತಿದೆ. ಹಣ ನೀಡಿದವರಿಗೆ ಮಾತ್ರ ಮನೆ ಎಂದು ತಿಳಿಸಿ ಹೆಸರು-ವಿಳಾಸ ಇಲ್ಲದ ಅರ್ಜಿ ನಮೂನೆ ಹಂಚಲಾಗುತ್ತಿದೆ. ಆದರೆ, ಪಟ್ಟಣ ಪಂಚಾಯಿತ ಅಥವಾ ಕೊಳಚೆ ನಿರ್ಮೂಲನಾ ಮಂಡಳಿಗೆ ಈ ವಿಷಯವೇ ಗೊತ್ತಿಲ್ಲ. ಬಡ ಪಲಾನುಭವಿಗಳ ದಿಕ್ಕು ತಪ್ಪಿಸಿ ಮೋಸ ಮಾಡುವ ಜಾಲವನ್ನು ಪತ್ತೆ ಮಾಡಬೇಕು’ ಎಂದವರು ಆಗ್ರಹಿಸಿದ್ದಾರೆ. `ಶಾಸಕರು ಈ ಹಣ ವಸೂಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಬಡ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ತಕ್ಷಣ ನಿರ್ದೇಶನ ನೀಡುವ ಜೊತೆಗೆ ಮನೆ ಹಂಚಿಕೆ ಮಾಡುವ ದಿನವನ್ನೂ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
`ಶಾಸಕ ಶಿವರಾಮ ಹೆಬ್ಬಾರ್ ಅವರು ಬಿಜೆಪಿಯಿಂದ ಮಂತ್ರಿ ಆದ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ, ಯಾವ ಯೋಜನೆಯೂ ಪೂರ್ಣಗೊಳಿಸಿಲ್ಲ’ ಎಂದು ಈ ವೇಳೆ ಪ್ರಸಾದ ಹೆಗಡೆ ಅವರು ದೂರಿದ್ದಾರೆ. `ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆ, ರಸ್ತೆ ಕಾಮಗಾರಿಗಳು, ಜಿ+2 ಮನೆ ಹಂಚಿಕೆ ಎಲ್ಲವೂ ದಾರಿ ತಪ್ಪಿದೆ. ಇದನ್ನು ಪ್ರಶ್ನಿಸಿದರೆ ಅಪಹಾಸ್ಯ ಮಾಡಲಾಗುತ್ತದೆ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ. ನ್ಯಾಯವಾದಿ ಗಣೇಶ ಪಾಟಣಕರ್ ಮಾತನಾಡಿ `ಜಿ+2 ಮನೆಗಳನ್ನು ನಿರ್ಮಿಸುತ್ತಿರುವ ಹೆಬ್ಬಾರ ನಗರದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಪಟ್ಟಣದ ಬೇರೆಡೆ ನೀಡಬೇಕಾಗಿದ್ದ ಪರಿಶಿಷ್ಟ ಫಲಾನುಭವಿಗಳ ಅನುದಾನ ಬಳಕೆ ಮಾಡಲಾಗಿದೆ’ ಎಂದು ದೂರಿದ್ದಾರೆ. ಬಿಜೆಪಿ ಮಾಧ್ಯಮ ಸಂಚಾಲಕ ಕೆ ಟಿ ಹೆಗಡೆ, ಒಬಿಸಿ ಮೋರ್ಚಾದ ರವಿ ದೇವಡಿಗ, ಯುವ ಮೋರ್ಚಾದ ರಜತ ಬದ್ದಿ ಅವರು ಇದಕ್ಕೆ ಧ್ವನಿಗೂಡಿಸಿದ್ದಾರೆ.
—