ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಯಲ್ಲಾಪುರ ಹಾಗೂ ಮುಂಡಗೋಡದಲ್ಲಿ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿದೆ. ಯುವಕರಿಗಿಂತಲೂ ಹೆಚ್ಚಿನದಾಗಿ ಹಿರಿಯ ಕಾಂಗ್ರೆಸ್ಸಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಇಂಧನ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಪ್ರತಿಭಟನಾಕಾರರು ವಿರೋಧಿಸಿದರು. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧವೂ ಪ್ರತಿಭಟನಾಕಾರರು ಮಾತನಾಡಿದರು. ಯಲ್ಲಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯರಾದ ವಿವೇಕ್ ಹೆಬ್ಬಾರ್ ಭಾಷಣ ಮಾಡಿದ್ದು, `ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೊಳಗಾಗಿದೆ’ ಎಂಬ ಆತಂಕವ್ಯಕ್ತಪಡಿಸಿದರು. `ವಿದ್ಯಾರ್ಥಿಗಳು ಹಗಲಿರುಳು ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಾಗೂ ಭ್ರಷ್ಟ ವ್ಯವಸ್ಥೆಯಿಂದ ಅವರ ಕನಸುಗಳಿಗೆ ಧಕ್ಕೆಯಾಗಿದೆ’ ಎಂದವರು ಆಕ್ರೋಶದ ಮಾತುಗಳನ್ನಾಡಿದರು. ಮುಂಡಗೋಡದಲ್ಲಿ ಪ್ರವಾಸಿ ಮಂದಿರದಿAದ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಅಲ್ಲಿಯೂ ಪ್ರತಿಭಟನಾಕಾರರು ನೀಟ್ ಪರೀಕ್ಷೆ ರದ್ದತಿಯಿಂದಾಗಿ ಯುವಕರಿಗೆ ಆದ ಅನ್ಯಾಯದ ಬಗ್ಗೆ ಅಸಮಧಾನವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುಂಡಗೋಡದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಶಾರದಾಬಾಯಿ ರಾಠೋಡ, ಪ್ರಮುಖರಾದ ಸಲ್ಮಾ ಕಿರಣ್ ಶೇರಖಾನೆ, ರಾಜು ಕುಟ್ರಿ, ರಜಾಖಾನ್ ಪಠಾಣ್, ಗೌಸಮೋದ್ದಿನ್ ಮಕಾಂದರ, ಜೈನು ಬೆಂಡಿಗೇರಿ, ಕಿರಣ್ ಶೇರಖಾನೆ ಪ್ರತಿಭಟನೆಯ ನೇತ್ರತ್ವವಹಿಸಿದ್ದರು. ಯಲ್ಲಾಪುರದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿ ಎಸ್. ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಕೆ ಭಟ್, ಪ್ರಮುಖರಾದ ರವಿ ಭಟ್ ಬರಗದ್ದೆ, ನರಸಿಂಹ ನಾಯ್ಕ, ಉಲ್ಲಾಸ್ ಶಾನಭಾಗ, ಫೈರೋಜ್ ಶೇಖ್, ಅಮೋಧ ಶಿರಸಿಕರ್, ವಿಶ್ವಾಸ್ ನಾಯ್ಕ, ಗಣೇಶ ಹೆಗಡೆ, ಮಹೇಶ್ ನಾಯ್ಕ, ಪೂಜಾ ನೇತ್ರೇಕರ, ಸರಸ್ವತಿ ಗುನಗಾ, ಮುಷರತ್ ಖಾನ್ ಇತರರು ಮುಂದಾಳತ್ವವಹಿಸಿದ್ದರು.