ಪೊಲೀಸ್ ಹುದ್ದೆ ಕೊಡಿಸುವುದಾಗಿ ಹಣಪಡೆದು ಮೋಸ ಮಾಡಿದ್ದ ಹಳಿಯಾಳದ ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಹಾಗೂ ಅವರ ಮಕ್ಕಳಿಬ್ಬರು ಪಿಸೈ ಬಸವರಾಜ ಮಬನೂರು ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಅವರ ಜೊತೆ ಕಿರಣ ಶೆಟ್ಟಣ್ಣನವರ್ ಹಾಗೂ ಮಂಜುನಾಥ ಶೆಟ್ಟಣ್ಣನವರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಿದ್ದಾರೆ.
ಹಳಿಯಾಳದ ದುರ್ಗಾನಗರದಲ್ಲಿ ವಿಷ್ಣು ಮಹಾಬಲೇಶ್ವರ ಶಿರೋಡ್ಕರ್ (40) ಅವರು ವಾಸವಾಗಿದ್ದಾರೆ. ಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಷ್ಣು ಶಿರೋಡ್ಕರ್ ಅವರಿಗೆ ಹಳಿಯಾಳ ಕೆ ಎಚ್ ಬಿ ಕಾಲೋನಿಯ ಸಣ್ಣನಿಂಗಪ್ಪ ಅರ್ಜುನ್ ಶೆಟ್ಟಣ್ಣನವರ್ (58) ಅವರು ಪರಿಚಯರಾಗಿದ್ದಾರೆ. 2023ರಲ್ಲಿ ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಅವರು `ಪಿಸೈ ಹುದ್ದೆ ಮಾರಾಟಕ್ಕಿದೆ’ ಎಂಬ ವಿಷಯ ಹೇಳಿದ್ದಾರೆ. ಸೈನಿಕರಾಗಿ ಸೇವೆ ಸಲ್ಲಿಸಿದ್ದ ವಿಷ್ಣು ಶಿರೋಡ್ಕರ್ ಅವರು `ಹೇಗಾದರೂ ಮಾಡಿ ಪಿಸೈ ಆಗಬೇಕು’ ಎಂದು ಕನಸು ಕಂಡಿದ್ದಾರೆ. ಆಗ, `ಕಾಸು ಕೊಟ್ಟರೆ ಕೆಲಸ ಆಗುತ್ತದೆ’ ಎಂದು ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಅವರು ನಂಬಿಸಿದ್ದಾರೆ.
ಸಣ್ಣನಿoಗಪ್ಪ ಅರ್ಜುನ್ ಶೆಟ್ಟಣ್ಣನವರ್ ಅವರ ಜೊತೆ ಅವರ ಮಕ್ಕಳಾದ ಕಿರಣ ಸಣ್ಣನಿಂಗಪ್ಪ ಶೆಟ್ಟಣ್ಣನವರ್ (36) ಹಾಗೂ ಮಂಜುನಾಥ ಸಣ್ಣನಿಂಗಪ್ಪ ಶೆಟ್ಟಣ್ಣನವರ್ (34) ಸೇರಿ ಕಾಸು ಕೀಳುವ ಕೆಲಸ ಶುರು ಮಾಡಿದ್ದಾರೆ. 2023ರ ಫೆಬ್ರವರಿ 6ರಿಂದ 2026ರ ಏಪ್ರಿಲ್ 24ರ ಅವಧಿಯಲ್ಲಿ ಈ ಅಪ್ಪ-ಮಕ್ಕಳು ಸೇರಿ ವಿಷ್ಣು ಶಿರೋಡ್ಕರ್ ಅವರಿಂದ 18 ಲಕ್ಷ ರೂ ಹಣಪಡೆದಿದ್ದಾರೆ. ಅದಾದ ನಂತರ ನಂತರ 90 ಸಾವಿರ ರೂ ಫೋನ್ ಫೇ ಮಾಡಿಸಿಕೊಂಡಿದ್ದಾರೆ. ಆದರೆ, ವರ್ಷ ಕಳೆದರೂ ಪಿಸೈ ಹುದ್ದೆ ಮಾತ್ರ ಕೊಡಿಸಿಲ್ಲ.
ಈ ಬಗ್ಗೆ ವಿಷ್ಣು ಶಿರೋಡ್ಕರ್ ಅವರು ಪ್ರಶ್ನಿಸಿದಾಗ 708500ರೂ ಮರಳಿ ನೀಡಿದ್ದಾರೆ. ಮತ್ತೊಮ್ಮೆ ಹಣ ಕೇಳಿದಾಗ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಮತ್ತೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಪಿಸೈ ಹುದ್ದೆಯೂ ಸಿಗದೇ ಹಣ ಕಳೆದುಕೊಂಡ ವಿಷ್ಣು ಶಿರೋಡ್ಕರ್ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರ ಮೊರೆ ಹೋಗಿದ್ದಾರೆ. `ಪಿಸೈ ಹುದ್ದೆ ಎಂದಿಗೂ ಮಾರಾಟಕ್ಕೀಲ್ಲ’ ಎಂದು ಹಳಿಯಾಳ ಪಿಸೈ ಬಸವರಾಜ ಮಬನೂರು ಅವರು ಬುದ್ದಿ ಹೇಳಿದ್ದಾರೆ. ಮೋಸ ಮಾಡಿದ ಮೂವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.