ಪಕ್ಕದ ಜಮೀನಿನಲ್ಲಿರುವ ತೆಂಗಿನ ಮರದಿಂದ ಆಗುತ್ತಿರುವ ಹಾನಿಯ ಬಗ್ಗೆ ಗ್ರಾಮ ಪಂಚಾಯತ ಕಚೇರಿಗೆ ದೂರು ಸಲ್ಲಿಸಿದ್ದ ವ್ಯಕ್ತಿಗಳಿಬ್ಬರು ಅದೇ ತೆಂಗಿನ ಮರವನ್ನು ಪೂಜಿಸುವ ಸಂಕಲ್ಪದೊoದಿಗೆ ಮನೆಗೆ ಮರಳಿದ್ದಾರೆ. ಗ್ರಾಮ ಪಂಚಾಯತ ಅಧಿಕಾರಿಗಳು ತೆಂಗಿನ ಮರದ ಮಹತ್ವದ ಬಗ್ಗೆ ದೂರುದಾರರಿಗೆ ವಿವರಿಸಿ, ಪರಿಸರ ಸಂರಕ್ಷಣೆಯ ಪಾಠ ಮಾಡಿ ಕಳುಹಿಸಿದ್ದಾರೆ!
ಕಾರವಾರದ ಚೆಂಡಿಯಾದಲ್ಲಿ ವಾಸವಾಗಿರುವ ನರೇಂದ್ರ ಧಾಕು ದುರ್ಗೇಕರ್ ಮತ್ತು ಕಿಶೋರ ಹರಿಶ್ಚಂದ್ರ ನಾಯ್ಕ ಅವರು ತಮ್ಮ ಮನೆ ಬಳಿಯಿರುವ ತೆಂಗಿನ ಮರದ ವಿರುದ್ಧ ದೂರು ಸಲ್ಲಿಸಿದ್ದರು. ಆ ಮರದಿಂದ ಮನೆಗೆ ಹಾನಿಯಾಗುತ್ತಿರುವ ಬಗ್ಗೆ ಅವರು ಗ್ರಾಮ ಪಂಚಾಯತದ ಸಭೆಯಲ್ಲಿ ವಿಷಯ ಮಂಡಿಸಿದ್ದರು. ತೆಂಗಿನ ಮರದಿಂದ ಆಗುವ ಹಾನಿಯ ಬಗ್ಗೆ ವಿವರಿಸಿ, ಮರ ತೆರವು ಮಾಡುವಂತೆ ಒತ್ತಾಯಿಸಿದ್ದರು. ಈ ವಿಷಯವಾಗಿ ಗ್ರಾ ಪಂ ಆಡಳಿತಾಧಿಕಾರಿ ಪ್ರಶಾಂತ ಎಚ್ ಎಸ್ ಅವರು ತಕರಾರು ಅರ್ಜಿ ಪರಿಶೀಲನೆ ನಡೆಸಿದ್ದು, ಅರ್ಜಿದರರಿಬ್ಬರನ್ನು ಪಂಚಾಯತಗೆ ಕರೆಯಿಸಿದರು.
ಈ ದಿನ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಆ ಅರ್ಜಿದಾರರನ್ನು ವಿಶೇಷ ಅತಿಥಿಯಾಗಿ ಕರೆದ ಪ್ರಶಾಂತ ಎಚ್ ಎಸ್ ಅವರು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ತೆಂಗಿನ ಮರ ತೆರವಿಗಾಗಿ ಆಗಮಿಸಿದವರಿಗೆ ಮರದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. `ತೆಂಗಿನ ಮರವನ್ನು ಕಡಿಯುವ ಬದಲು ಸುರಕ್ಷತಾ ಕ್ರಮ ಅನುಸರಿಸುವುದು ಉತ್ತಮ’ ಎಂದವರು ಮನವರಿಕೆ ಮಾಡಿದರು.
ಸಭೆಯಲ್ಲಿದ್ದ ಪಿಡಿಓ ರಾಮದಾಸ್ ನಾಯ್ಕ ಹಾಗೂ ಗ್ರಾಮಸ್ಥರು ಸಹ ತೆಂಗಿನ ಮರದ ಪ್ರಯೋಜನದ ಬಗ್ಗೆ ವಿವರಿಸಿದ್ದು, ಅರ್ಜಿದಾರಿಬ್ಬರು ಅದರಿಂದ ಸಮಾಧಾನಗೊಂಡರು. ತೆಂಗಿನ ಮರ ಕಟಾವು ಮಾಡುವ ಬದಲು ಅದನ್ನು ಸಂರಕ್ಷಿಸಿ, ಆರಾಧಿಸುವ ಶಪಥ ಮಾಡಿದರು. ಮರದಿಂದ ಮನೆಗೆ ಹಾನಿ ಆಗದ ಹಾಗೇ ಮರವನ್ನು ಇನ್ನಷ್ಟು ಭದ್ರಪಡಿಸುಂತೆ ಸೂಚಿಸಿ ಅಧಿಕಾರಿಗಳು ಪ್ರಕರಣ ಮುಗಿಸಿದರು.