ಕಾರು ಖರೀದಿಗಾಗಿ ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿದ ಶಿವಮೊಗ್ಗದ ಲೋಕೇಶ ಅವರು ಸಾಲ ತೀರಿಸಲಾಗದ ಕಾರಣ ಶಿರಸಿಗೆ ಬಂದು ಸಾವನಪ್ಪಿದ್ದಾರೆ. 34ನೇ ವಯಸ್ಸಿನಲ್ಲಿಯೇ ಮಗನನ್ನು ಕಳೆದುಕೊಂಡ 74 ವರ್ಷದ ವಿರೂಪಾಕ್ಷ ಅವರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಶಿವಮೊಗ್ಗದ ಶಿಕಾರಿಪುರ ಕೊಳಗಿ ಬಳಿ ಲೋಕೇಶ ವಿರೂಪಾಕ್ಷ ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಕಾರು ಖರೀದಿಸುವ ಮನಸ್ಸಾಯಿತು. ಕೈಯಲ್ಲಿ ಕಾಸಿಲ್ಲದ ಕಾರಣ ಅವರು ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಲು ನಿರ್ಧರಿಸಿದರು. ಎರಡು ವರ್ಷದ ಹಿಂದೆ ಪತ್ನಿ ಹೆಸರಿನಲ್ಲಿ 10 ಲಕ್ಷ ರೂ ಬೆಳೆ ಸಾಲ ಮಾಡಿದರು. ಅದಾದ ನಂತರ ಶಿರಾಳಿಕೊಪ್ಪದ ಕೆನರಾ ಬ್ಯಾಂಕಿಗೆ ಹೋಗಿ ಮತ್ತೆ 8 ಲಕ್ಷ ರೂ ಸಾಲ ಮಾಡಿದರು. ಕಾರನ್ನು ಸಹ ಖರೀದಿಸಿದರು.
ಈ ನಡುವೆ ಲೋಕೇಶ ಅವರಿಗೆ ಆರ್ಥಿಕ ಸಂಕಷ್ಟ ಶುರುವಾಯಿತು. ಜೂನ್ 29ರಂದು ಅವರು ಬೆಳೆಗೆ ಬೇಕಾಗುವ ಗೊಬ್ಬರ ಖರೀದಿಗೆ ಶಿರಸಿಗೆ ಬಂದಿದ್ದರು. ಹಣವಿಲ್ಲದ ಕಾರಣ ಪತ್ನಿಯ ಚಿನ್ನದ ಸರ ಅಡವಿಟ್ಟು ಮತ್ತೆ ಸಾಲ ಮಾಡಲು ನಿರ್ಧರಿಸಿದ್ದರು. ತೋಗರ್ಸಿ ಬ್ಯಾಂಕ್ ಆಫ್ ಬರೋಡಾದಲ್ಲಿ 3 ತೊಲೆ ಚಿನ್ನ ಅಡವಿಟ್ಟ ಲೋಕೇಶ್ ಅವರು ಮತ್ತೆ ಸಾಲ ಮಾಡಿದರು. ಮಳೆ-ಬೆಳೆ ಸಮಯಕ್ಕೆ ಸರಿಯಾಗಿ ಆಗದ ಕಾರಣ ಲೋಕೇಶ್ ಅವರಿಗೆ ಸಾಲದ ಕಂತು ಪಾವತಿ ಕಷ್ಟವಾಯಿತು. ಅದೇ ಚಿಂತೆಯಲ್ಲಿದ್ದ ಅವರು ಆತ್ಮಹತ್ಯೆಗೆ ನಿರ್ಧರಿಸಿದರು.
ಜೂನ್ 1ರಂದು ಶಿರಸಿಯ ಇಳಸೂರಿಗೆ ಬಂದಿದ್ದ ಲೋಕೇಶ್ ಅವರು ಅಲ್ಲಿ ವಿಷ ಸೇವಿಸಿದರು. ಹುಲಿದೇವರ ರಸ್ತೆ ಬದಿ ಲೋಕೇಶ್ ಅವರು ನರಳಾಡಿ ಸಾವನಪ್ಪಿದರು. ಅಲ್ಲಿದ್ದ ಶವ ನೋಡಿದ ಪೊಲೀಸರು ಕುಟುಂಬದವರನ್ನು ಹುಡುಕಿ ವಿಷಯ ಮುಟ್ಟಿಸಿದರು. ದುಡಿದು ಸಂಸಾರ ನಡೆಸಬೇಕಿದ್ದ ಯುವಕ ಬೀದಿಯಲ್ಲಿ ಬಿದ್ದು ಹೆಣವಾಗಿದನ್ನು ನೋಡಿ ಊರಿನವರು ಶೋಕವ್ಯಕ್ತಪಡಿಸಿದರು.