ಹೊನ್ನಾವರದ ಬಂಗಾರಮಕ್ಕಿ ಶ್ರೀಕ್ಷೇತ್ರದ ಮಾರುತಿ ಗುರೂಜಿ ಅವರಿಗೆ ಕೋಟಿ ರೂಪಾಯಿಯ ಆಫರ್ ಬಂದಿದೆ. ಶರಾವತಿ ಪಂಪ್ ಸ್ಟೋರೆಜ್ ಯೋಜನೆ ವಿರುದ್ಧ ಹೋರಾಟ ಕೈ ಬಿಡುವಂತೆ ಅವರಿಗೆ ಒತ್ತಡಗಳು ಹೆಚ್ಚಾಗಿವೆ.
ಅವೈಜ್ಞಾನಿಕವಾದ ಶರಾವತಿ ಪಂಪ್ ಸ್ಟೋರೆಜ್ ವಿರುದ್ಧ ಎಲ್ಲಡೆ ಜನಾಂದೋಲನ ನಡೆಯುತ್ತಿದೆ. ಈ ಯೋಜನೆ ವಿರೋಧಿಸಿ ಅನೇಕ ಹೋರಾಟಗಳು ನಡೆದಿವೆ. ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರು ಹೋರಾಟದಲ್ಲಿ ಪ್ರಖರ ಭಾಷಣ ಮಾಡಿದ್ದು, ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಪರಸರ ನಾಶದ ಜೊತೆ ಮನುಕುಲಕ್ಕೆ ಈ ಯೋಜನೆ ಹಾನಿ ಮಾಡುವ ಬಗ್ಗೆ ಅವರು ವಿವರವಾಗಿ ಹೇಳಿದ್ದಾರೆ. ಈ ಎಲ್ಲಾ ಹಿನ್ನಲೆ ಮಾರುತಿ ಗುರೂಜಿ ಅವರಿಗೆ ಈ ಯೋಜನೆ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವಂತೆ ಒತ್ತಡ ಬಂದಿದೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧದ ಹೋರಾಟದಿಂದ ಹಿಂದೆ ಸರಿಯದ ಕಾರಣ ಮಾರುತಿ ಗುರೂಜಿ ಅವರನ್ನು ಹೆದರಿಸುವ ಕೆಲಸ ನಡೆದಿದೆ. ದುಷ್ಕರ್ಮಿಗಳು ಅವರ ಕಾರನ್ನು ಅಪಘಾತ ಮಾಡಿದ್ದು, ಅದಕ್ಕೆ ಸಹ ಮಾರುತಿ ಗುರೂಜಿ ಬಗ್ಗಿಲ್ಲ. ಅದಾದ ನಂತರ ಮಾರುತಿ ಗುರೂಜಿ ಅವರಿಗೆ ಬೆದರಿಕೆಯ ಫೋನ್ ಬಂದಿದೆ. ಅವರ ವಿರುದ್ಧ ಅನಗತ್ಯ ಕೇಸುಗಳನ್ನು ಹಾಕುವ ಪ್ರಯತ್ನ ನಡೆದಿದೆ. ಆದರೆ, ಇಷ್ಟೇಲ್ಲ ನಡೆದರೂ ಮಾರುತಿ ಗುರೂಜಿ `ಶರಾವತಿ ಉಳಿಸಿ’ ಎಂಬ ಆಗ್ರಹದಿಂದ ಹಿಂದೆ ಸರಿದಿಲ್ಲ.
ಈ ಎಲ್ಲಾ ಘಟನಾವಳಿಗಳ ನಂತರ ಕೆಪಿಸಿ ಅಧಿಕಾರಿಗಳೇ ಮಾರುತಿ ಗುರೂಜಿ ಅವರ ಬಳಿ ಮಾತುಕಥೆಗೆ ಬಂದಿದ್ದಾರೆ. ಹಣದ ಆಸೆ ತೋರಿಸಿ ಶರಾವತಿ ಪಂಪ್ ಸ್ಟೋರೆಜ್ ಯೋಜನೆಗೆ ಬೆಂಬಲಿಸುವoತೆ ಕೇಳಿಕೊಂಡಿದ್ದಾರೆ. ಆಮೀಷ ಒಡ್ಡಲು ಬಂದವರಿಗೆ ಮಾರುತಿ ಗುರೂಜಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. `ದುಡ್ಡಿನ ಆಮೀಷಕ್ಕೆ ನಾವು ಬಲಿ ಆಗುವವರಲ್ಲ’ ಎಂದು ಸಹ ಅವರು ಹೇಳಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಸ್ವತಃ ಮಾರುತಿ ಗುರೂಜಿ ಮಾತನಾಡಿದ್ದಾರೆ. `ನಾಳೆ ಇನ್ನೂ ಹೆಚ್ಚು ದುಡ್ಡು ಕೊಟ್ಟರೆ ಅದಕ್ಕೆ ಒಪ್ಪುವಿರಾ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ, ಪ್ರಾಣ ಬಿಟ್ಟರೂ ಆ ದುಡ್ಡು ಮುಟ್ಟಲ್ಲ’ ಎಂದು ಮಾರುತಿ ಗುರೂಜಿ ಹೇಳಿದ್ದಾರೆ. `ಪಂಪ್ ಸ್ಟೋರೆಜ್ ಯೋಜನೆ ಮಾಡಲು ಹೊರಟಿರುವವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಒಬ್ಬರು ನಿಮ್ಮ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಹೆದರಿಸಿದರು. ಮತ್ತೊಬ್ಬರು ಆಮೀಷ ಒಡ್ಡಲು ಆಗಮಿಸಿದ್ದರು’ ಎಂದವರು ವಿವರಿಸಿದ್ದಾರೆ.
`ತಮ್ಮ ಕಾರು ಅಪಘಾತಪಡಿಸಿ ಬೆದರಿಸುವ ಪ್ರಯತ್ನ ನಡೆಯಿತು. ಏನೇ ತಂತ್ರಗಾರಿಕೆ ಮಾಡಿದರೂ ಈ ಹೋರಾಟ ನಿಲ್ಲುವುದಿಲ್ಲ’ ಎಂದು ಅವರು ಮಾಧ್ಯಮದ ಮುಂದೆ ಹೇಳಿದ್ದಾರೆ. `ಎಲ್ಲರೂ ಅವರ ಪರವೇ ಇದ್ದಾಗ ಇಷ್ಟೆಲ್ಲ ನಡೆದರೂ ಯಾರಿಗೆ ದೂರು ಕೊಡುವುದು?’ ಎಂದು ಅವರು ಪ್ರಶ್ನಿಸಿದ್ದಾರೆ.