ಮಳೆಗಾಲದ ಮೋಜಿಗಾಗಿ ಹೊಳೆಗೆ ಹೋಗಿದ್ದ ಅವಳಿ-ಜವಳಿ ಮಕ್ಕಳು ನೀರಿನಾಳಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಶಿರಸಿಯ ಉಂಚಳ್ಳಿ ಬಳಿಯ ಮಾಸ್ತಿಜಡ್ಡಿ ಹೊಳೆಯಲ್ಲಿ ಎರಡು ಶವ ಸಿಕ್ಕಿದೆ.
ಮಾಸ್ತಿಜಡ್ಡಿಯಲ್ಲಿ ಹರ್ಷ ನಾಯ್ಕ ಹಾಗೂ ಮದನ್ ನಾಯ್ಕ ಎಂಬಾತರು ಅವಳಿ-ಜವಳಿ ಮಕ್ಕಳಾಗಿದ್ದು, ಭಾನುವಾರ ಮಧ್ಯಾಹ್ನ ಅವರಿಬ್ಬರು ನೀರಿನಲ್ಲಿ ಆಟವಾಡಲು ನಿರ್ಧರಿಸಿದ್ದರು. ಅದಕ್ಕಾಗಿ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಹೊಳೆಗೆ ಹೋಗಿದ್ದರು. ಈಜುವುದಕ್ಕಾಗಿ ನೀರಿಗೆ ಹಾರಿದ ಅವರು ಕೆಲ ಕಾಲ ಅಲ್ಲಿ ವಿಹರಿಸಿದರು. ಒಮ್ಮೆ ನೀರಿನ ಆಳಕ್ಕೆ ಹೋದ ಅವರಿಗೆ ಮತ್ತೆ ಮೇಲೆ ಬರಲು ಸಾಧ್ಯವಾಗಿಲ್ಲ. ಉಸಿರುಗಟ್ಟಿ ಅವರಿಬ್ಬರು ಸಾವನಪ್ಪಿದರು.
ಮಕ್ಕಳಿಬ್ಬರು ನೀರುಪಾಲಾದ ವಿಷಯ ಕೇಳಿ ಶಿರಸಿಯ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ ಸಿಬ್ಬಂದಿ ಅಲ್ಲಗೆ ಧಾವಿಸಿದರು. ಸಾಕಷ್ಟು ಶೋಧದ ನಂತರ ಅವರಿಬ್ಬರ ಶವ ಸಿಕ್ಕಿತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಆ ಶವಗಳನ್ನು ನೀರಿನಿಂದ ಮೇಲೆತ್ತಿದರು. ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ನ ಪ್ರಮುಖರಾದ ಗೋಪಾಲ ಗೌಡಾ, ರಾಜು ಮಡಿವಾಳ, ಪ್ರದೀಪ ಎಸಳೆ, ದೀಪಕ ಕಾನಡೆ, ದರ್ಶನ ಕಬ್ಬೆ ಅವರು ರಕ್ಷಣಾ ಕಾರ್ಯ ನಡೆಸಿದರು.