ಕೃಷಿ ಭೂಮಿ ಅಭಿವೃದ್ಧಿಗಾಗಿ ಸಾಲ ಮಾಡಿಕೊಂಡಿದ್ದ ಮುಂಡಗೋಡಿನ ಫಕೀರಗೌಡ ಪಾಟೀಲ್ ಅವರು ಸಾಲ ತೀರಿಸಲಾಗದೇ ಸಾವನಪ್ಪಿದ್ದಾರೆ. ಗದ್ದೆಯಲ್ಲಿ ವಿಷ ಸೇವಿಸಿದ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದು, ಮನೆಗೆ ಬಾರದ ಪಾಟೀಲರನ್ನು ಹುಡುಕಿ ಹೊರಟ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ.
ಮುಂಡಗೋಡದ ಹುನಗುಂದ ಬಳಿ ಫಕೀರಗೌಡ ಬಸನಗೌಡ ಪಾಟೀಲ್ ಅವರು ವಾಸವಾಗಿದ್ದರು. 42 ವರ್ಷದ ಅವರು ತಮಗಿದ್ದ ಕೃಷಿ ಭೂಮಿಯಲ್ಲಿಯೇ ದುಡಿದು ಅವರು ಸಂಸಾರ ಸಾಗಿಸುತ್ತಿದ್ದರು. ಕೃಷಿ ಚಟುವಟಿಕೆಗಳಿಗಾಗಿ ಫಕೀರಗೌಡ ಅವರು ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದರು. ಆ ಸಾಲ ಸಾಲದ ಕಾರಣ ಖಾಸಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗಿದ್ದರು. ಒಟ್ಟು 10 ಲಕ್ಷ ರೂ ಸಾಲ ಮಾಡಿದ್ದು, ಅದನ್ನು ತೀರಿಸಲು ಸಾಧ್ಯವಾಗುತ್ತಿರಲಿಲ್ಲ.
ಈ ವರ್ಷ ಮಳೆ ಸರಿಯಾಗಿ ಆಗದಿರುವುದು ಹಾಗೂ ಬರಗಾಲದ ಭೀತಿ ಫಕೀರಗೌಡ ಅವರನ್ನು ಕಾಡಿತು. ದಿನವೂ ಬೆಳೆಯುತ್ತಿದ್ದ ಸಾಲದ ಹೊರೆ ಅವರನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸಿತು. ಸಾಲದ ಚಿಂತೆಯಲ್ಲಿಯೇ ಅವರು ದುಡುಕು ನಿರ್ಧಾರಕ್ಕೆ ಮುಂದಾದರು. ಹೊಲಕ್ಕೆ ಹೋಗಿದ್ದ ಫಕೀರ ಗೌಡ ಅವರು ತಡರಾತ್ರಿ ಆದರೂ ಮನೆಗೆ ಮರಳಲಿಲ್ಲ. ಆತಂಕಕ್ಕೆ ಒಳಗಾದ ಕುಟುಂಬದವರು ಅವರನ್ನು ಹುಡುಕಿ ಹೊಲದ ಕಡೆ ಹೋಗಿದ್ದು, ಫಕೀರಗೌಡ ಪಾಟೀಲ್ ಅವರು ಮಂಗಳವಾರ ಶವವಾಗಿ ಕಾಣಿಸಿಕೊಂಡರು. ಕೀಟ ನಾಶಕ ಸೇವಿಸಿ ಅವರು ಸಾವನಪ್ಪಿರುವುದಾಗಿ ಗೊತ್ತಾಗಿದೆ.