ಮುಂಡಗೋಡದಲ್ಲಿ ಅಂಚೆ ಸೇವಕರಾಗಿದ್ದ ಶಿವಪ್ಪ ಕರಗುಪ್ಪಿ ಅವರು ಅಂಚೆ ಇಲಾಖೆಗೆ ಮೋಸ ಮಾಡಿದ್ದಾರೆ. ಜೊತೆಗೆ ಜನರ ಹಣವನ್ನು ಸಹ ಅವರು ಕಬಳಿಸಿದ್ದಾರೆ.
ಬೆಳಗಾವಿಯ ಶಿವಪ್ಪ ಲಂಗಪ್ಪ ಕರಗುಪ್ಪಿ ಅವರು ಮುಂಡಗೋಡಿನ ಇಂದೂರಿನಲ್ಲಿ ಅಂಚೆ ನೌಕರರಾಗಿದ್ದರು. ಕೇಂದ್ರ ಸರ್ಕಾರದಿಂದ ಅವರಿಗೆ ಉತ್ತಮ ಸಂಬಳ ಸಿಗುತ್ತಿತ್ತು. ಅದಾಗಿಯೂ, ಶಿವಪ್ಪ ಕರಗುಪ್ಪಿ ಅವರು ಕಂಡವರ ಕಾಸಿಗೆ ಆಸೆಪಟ್ಟು ಜನರ ದುಡ್ಡು ಜೇಬಿಗಿಳಿಸಿದ್ದರು. ಇಂದೂರಿನ ರತ್ನಕ್ಕ ಬಾಲಚಂದ್ರ ಹಾರಟಿ, ಸಿಂಗಪ್ಪ ಸಿದ್ದಪ್ಪ ನಾಗಪುರ ಹಾಗೂ ಇಂದೂರು ಕೊಪ್ಪದ ಮಾಂತೇಶ ಮಂಜುನಾಥ ರಾಮಾಪುರ ಅವರು ನೀಡಿದ ಹಣವನ್ನು ಅವರು ದುರುಪಯೋಗಪಡಿಸಿಕೊಂಡಿದ್ದರು.
2024ರ ಅಕ್ಟೊಬರ್ 19ರಿಂದ 2025ರ ಅಗಸ್ಟ 14ರವರೆಗೆ ಶಿವಪ್ಪ ಕರಗುಪ್ಪಿ ಅವರು ಇಂದೂರಿನಲ್ಲಿ ಕೆಲಸ ಮಾಡಿದ್ದು, ಅನೇಕ ಬಗೆಯ ಅಕ್ರಮಗಳನ್ನು ಮಾಡಿದ್ದರು. ಅದರಲ್ಲಿ ಅಂಚೆ ಖಾತೆದಾರರ ಹಣವನ್ನು ಅವರು ಸ್ವಂತಕ್ಕೆ ಬಳಸಿಕೊಂಡಿದ್ದರು. ಈ ಹಿನ್ನಲೆ ಪ್ರಕರಣ ಬೆಳಕಿಗೆ ಬಂದ ತಕ್ಷಣ ಅವರನ್ನು ಅಮಾನತು ಮಾಡಲಾಗಿದ್ದು, ಅಂಚೆ ಇಲಾಖೆಯವರೇ ತನಿಖೆ ನಡೆಸಿದ್ದರು. ಆ ತನಿಖೆಯಲ್ಲಿ ಸಹ ಅಂಚೆಯಣ್ಣ ಜನರ ದುಡ್ಡು ದುರುಪಯೋಗಪಡಿಸಿಕೊಂಡಿದ್ದು ದೃಢವಾಗಿದೆ.
ಸದ್ಯ ಶಿವಪ್ಪ ಕರಗುಪ್ಪಿ ಅವರ ಮೇಲಧಿಕಾರಿ ಶಿವಾನಂದ ಬಸವರಾಜ ದೊಡ್ಡಮನಿ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಇಲಾಖೆಯ ವಿಚಾರಣೆಯಲ್ಲಿ ಆರೋಪ ಸಾಭೀತಾಗಿದ್ದರಿಂದ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ. 78800ರೂ ಸ್ವಂತಕ್ಕೆ ಬಳಸಿದ ಆರೋಪ ಅಂಚೆಯಣ್ಣನ ಮೇಲಿದೆ. ಅವರ ಅಮಾನತು ಆದೇಶ ಸಹ ಹಾಗೇ ಇದೆ.