ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆ ಪತ್ತೆಗೆ ಪೊಲೀಸರು ಶ್ವಾನ ದಳ ಬಳಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿಶೇಷ ತರಬೇತಿಪಡೆದ ಶ್ವಾನವೊಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ, ಮಾದಕ ವಸ್ತುಗಳ ಹುಡುಕಾಟ ನಡೆಸಿದೆ!
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ವಿವಿಧ ಕಡೆ ಪೊಲೀಸರು ಶ್ವಾನ ದಳದ ಸಹಾಯದಿಂದ ಮಾದಕ ವಸ್ತುಗಳ ಕಾರ್ಯಾಚರಣೆ ಮಾಡಿದ್ದಾರೆ. ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಅವರು ವಿವಿಧ ಕಡೆ ದಾಳಿ ಮಾಡಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಅಡಗು ತಾಣಗಳನ್ನು ಶೋಧಿಸಿದ್ದಾರೆ. ಈ ಹಿಂದೆ ಗಾಂಜಾ ಸೇವನೆ ಹಾಗೂ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದವರ ಮನೆಯನ್ನು ತರಬೇತಿಪಡೆದ ನಾಯಿ ತಪಾಸಣೆ ಮಾಡಿದೆ. ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಮೂರು ಕಡೆ ಗಾಂಜಾ ಸೇವಿಸಿದವರು ಸಿಕ್ಕಿ ಬಿದ್ದಿದ್ದಾರೆ.
ವಿವಿಧ ಮನೆ, ಹೊಟೇಲುಗಳ ಮೇಲೆ ಪೊಲೀಸರು ಕಣ್ಣಿರಿಸಿದ್ದಾರೆ. ಸಂದೇಹವುಳ್ಳ ಕಡೆ ದಿಢೀರ್ ಆಗಿ ದಾಳಿ ಮಾಡುತ್ತಿದ್ದಾರೆ. ರೆಸಾರ್ಟ, ಹೋಂ ಸ್ಟೇ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದು ಮಾದಕ ವ್ಯಸನ ಮಾರಾಟ-ಸಾಗಾಟ-ಸೇವನೆ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಗೋಕರ್ಣದ ಕುಡ್ಲೆ ಮತ್ತು ಮುಖ್ಯ ಕಡಲತೀರ, ದುಬ್ಬನಶಸಿ ಕಡಲತೀರದಲ್ಲಿ ಈ ದಿನ ವಿಶೇಷ ಗಸ್ತು ಕಾರ್ಯ ನಡೆದಿದೆ. ಪಿಸೈ ಅನಿಲ್ ಅವರ ಜೊತೆ ಅಪರಾಧ ವಿಭಾಗದ ಪಿಸೈ ಸುನಿಲ್, ಮಾದಕ ವಸ್ತು ಪತ್ತೆ ಶ್ವಾನದಳದ ಪ್ರವೀಣ ಗೌಡ, ಶುಭಂ, ಜಗನ್ನಾಥ ಅವರು ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.