ಶಿರಸಿ ರಾಜೀವನಗರದ ಸುದೀಪ ಬಗವೆ ಅವರು ಅಡ್ಡಾದಿಡ್ಡಿ ರಿಕ್ಷಾ ಓಡಿಸಿದ್ದು, ಆ ರಿಕ್ಷಾ ಉಮ್ಮಚ್ಗಿ ಸಂಕದಗುoಡಿಯ ಗಂಗಾಧರ ಬಾಂದೆ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಗಂಗಾಧರ ಬಾಂದೆ ಹಾಗೂ ಪ್ರೇಮಾ ಬಾಂದೆ ಅವರು ಬೈಕಿನಿಂದ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ.
ಯಲ್ಲಾಪುರದ ಉಮ್ಮಚ್ಗಿ ಬಳಿಯ ಸಂಕದಗುoಡಿಯಲ್ಲಿ ಗಂಗಾಧರ ನಾರಾಯಣ ಬಾಂದೆ ಅವರು ವಾಸವಾಗಿದ್ದಾರೆ. ಜುಲೈ 20ರಂದು ಅವರು ಹೆಮ್ಮಾಡಿಯಿಂದ ಮಾವಿನಕಟ್ಟಾ ಕಡೆಗೆ ಬೈಕಿನಲ್ಲಿ ಹೋಗುವಾಗ ಶಿರಸಿ ರಾಜೀವನಗರದ ಸುದೀಪ ಉಡಚಪ್ಪ ಬಗವೆ ಅವರ ರಿಕ್ಷಾ ಡಿಕ್ಕಿಯಾಗಿದೆ. ಸುದೀಪ ಬಗವೆ ಅವರು ಜೋರಾಗಿ ತಮ್ಮ ರಿಕ್ಷಾ ಓಡಿಸಿಕೊಂಡು ಬಂದಿದ್ದು, ಬೈಕು ನೋಡಿಯೂ ರಿಕ್ಷಾ ವೇಗವನ್ನು ತಗ್ಗಿಸಿಲ್ಲ. ಪರಿಣಾಮ ಕನ್ನೂರು ಬಸ್ ನಿಲ್ದಾಣದ ಬಳಿ ರಿಕ್ಷಾ ಹಾಗೂ ಬೈಕಿನ ನಡುವೆ ಅಪಘಾತ ನಡೆದಿದೆ.
ಈ ಅಪಘಾತದ ಪರಿಣಾಮ ಗಂಗಾಧರ ಬಾಂದೆ ಅವರ ಕೈ ಬೆರಳು ಹಾಗೂ ಎದೆ ಭಾಗದ ಎಲುಬು ಮುರಿದಿದೆ. ಬೈಕಿನಲ್ಲಿ ಹಿಂದೆ ಕೂತಿದ್ದ ಪ್ರೇಮಾ ಬಾಂದೆ ಅವರ ತೊಡೆ, ಕಾಲು, ಬೆರಳಿನ ಎಲುಬು ಮುರಿತಕ್ಕೊಳಗಾಗಿದೆ. ಗಾಯಗೊಂಡ ಅವರಿಬ್ಬರು ಶಿರಸಿ ಪಂಡಿತ್ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ಹೋಗಿದ್ದಾರೆ. ಈ ಅಪಘಾತದ ಬಗ್ಗೆ ವಿರೇಂದ್ರ ಬಾಂದೆ ಅವರು ಮಾಹಿತಿ ನೀಡಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.