ಅಡಿಕೆ ಬೆಳೆಗೆ ವಿವಿಧ ರೋಗದ ಹಿನ್ನಲೆ ಕೃಷಿಕರಿಗೆ ಪರ್ಯಾಯ ಬೆಳೆಯ ಬಗ್ಗೆ ಆಸಕ್ತಿ ಮೂಡಿಸಲು ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚಿಂತನೆ ನಡೆಸಿದೆ. ಇದರ ಅಂಗವಾಗಿ ಮೊದಲ ಹಂತದಲ್ಲಿ ಕಾಫಿ ಬೆಳೆಗೆ ಉತ್ತೇಜನ ನೀಡಲು ನಿರ್ಧರಿಸಿದ್ದು, ಸಂಘದ ಸದಸ್ಯರಿಗೆ 8ರೂ ಬೆಲೆಯಲ್ಲಿ ಕಾಫಿ ಗಿಡಗಳನ್ನು ಪೂರೈಕೆ ಮಾಡುವುದಾಗಿ ಘೋಷಿಸಿದೆ.
ಎಲೆಚುಕ್ಕಿ ರೋಗ, ಕೊಳೆ ರೋಗ ಸೇರಿ ಅಡಿಕೆ ಬೆಳೆಗಾರರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಡಿಕೆಯನ್ನು ಮಾತ್ರ ನಂಬಿ ಬದುಕು ನಡೆಸುವುದು ಕಷ್ಟವಾಗುತ್ತಿದ್ದು, ಪರ್ಯಾಯ ಬೆಳೆ ಅನಿವಾರ್ಯ ಎನ್ನುವ ಹಾಗಾಗಿದೆ. ಈ ಹಿನ್ನಲೆ ಅಡಿಕೆ ಜೊತೆ ಕಾಫಿಯನ್ನು ಬೆಳೆಯುವಂತೆ LSMP ಅಧ್ಯಕ್ಷ ನಾಗರಾಜ ಕೌವಡಿಕೆರೆ ಅವರು ಕರೆ ನೀಡಿದ್ದಾರೆ. `ಪರ್ಯಾಯ ಬೆಳೆಗೆ ಪ್ರಾಮುಖ್ಯತೆ ಕೊಡಲು ಕಾಫಿ ಕೃಷಿಗೆ ಉತ್ತೇಜನ ಕೊಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ 15ರೂ ಮೇಲ್ಪಟ್ಟು ಕಾಫಿ ಗಿಡ ಮಾರಾಟವಾಗುತ್ತಿದ್ದು, ಅದನ್ನು ನಾವು 8ರೂಪಾಯಿಗೆ ಕೊಡುತ್ತೇವೆ. ಉಳಿದ ಮೊತ್ತವನ್ನು ಸಂಘದಿoದ ಭರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸಾಗರದ ನರ್ಸರಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಸದಸ್ಯರಿಗೂ ಸುಮಾರು 50 ಗಿಡ ಕೊಡಲು ನಿರ್ಣಯಿಸಲಾಗಿದೆ’ ಎಂದವರು ತಿಳಿಸಿದರು. `ಕಾಪಿ ಬೆಳೆಗೆ ತಂಪು ವಾತಾವರಣ ಅಗತ್ಯವಿದ್ದು, ಅಡಿಕೆ ಗಿಡದ ನಡುವೆ ಅದನ್ನು ಸುಲಭವಾಗಿ ಬೆಳೆಯವ ಅವಕಾಶವಿದೆ. ಕಾಫಿ ಬೆಳೆದು ರೈತರು ಆರ್ಥಿಕ ಪ್ರಯೋಜನಪಡೆಯಬೇಕು’ ಎಂದವರು ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದರು.
`ಸೊಸೈಟಿ ವತಿಯಿಂದ ಪೆಟ್ರೋಲ್ ಬಂಕ್ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಸರಿಯಾದ ಜಾಗ ಸಿಗದ ಕಾರಣ ಆ ಯೋಜನೆ ಸಾಧ್ಯವಾಗಲಿಲ್ಲ. ಆದರೆ, ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಗ್ಯಾಸ್ ಎಜನ್ಸಿ ಸ್ಥಾಪಿಸಲಿದ್ದೇವೆ’ ಎಂದವರು ಘೋಷಿಸಿದರು. `ಗ್ಯಾಸ್ ಎಜನ್ಸಿ ಸ್ಥಾಪನೆಗಾಗಿ ಈಗಾಗಲೇ ಬಿಸಗೋಡು ರಸ್ತೆಯಲ್ಲಿ 1 ಎಕರೆ ಜಾಗ ಖರೀದಿ ನಡೆದಿದೆ. ಈ ಬಾರಿ ಸ್ವಂತ ಕಟ್ಟಡದಲ್ಲಿ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದೆ. ಸದಸ್ಯರ ಸಹಕಾರದಿಂದ ಸಂಘ ಲಾಭದಲ್ಲಿದೆ’ ಎಂದವರು ವಿವರಿಸಿದರು. `ಸಂಘದ ನಂದೊಳ್ಳಿ, ಉಪಳೇಶ್ವರ ಶಾಖೆಗಳು ಉತ್ತಮವಾಗಿ ಮುಂದುವರೆಯುತ್ತಿವೆ’ ಎಂದರು. `ಇತ್ತೀಚೆಗೆ ಹೃದಯ ಸಂಬAಧಿ ಕಾಯಿಲೆಗಳು ಹೆಚ್ಚುತ್ತಿವೆ. ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯ ಸಹಕಾರದೊಂದಿಗೆ ಸದಸ್ಯರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಪರೀಕ್ಷೆ ಪ್ಯಾಕೇಜ್ ವ್ಯವಸ್ಥೆ ಮಾಡುತ್ತಿದ್ದೇವೆ. ಸಂಘದ ಸದಸ್ಯರೆಲ್ಲರೂ ಈ ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯಬೇಕು’ ಎಂದರು.
`ಪ್ರಸಕ್ತ ಆರ್ಥಿಕ ವರ್ಷದಲ್ಲಿ 53 ಲಕ್ಷ 57 ಸಾವಿರ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 7ರಷ್ಟು ಡಿವಿಡೆಂಡ್ ನೀಡುತ್ತಿದ್ದೇವೆ. ಮಾಧ್ಯಮಿಕ ಸಾಲಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ ಆರ್ ಹೆಗಡೆ ತೊಂಡೆಕೆರೆ, ನಿರ್ದೇಶಕರಾದ ರಾಮಕೃಷ್ಣ ಸುಬ್ರಾಯ ಭಟ್ಟ ಮುಂಡಗೆಜಡ್ಡಿ, ಆರ್ ಎಸ್ ಭಟ್ಟ, ತಿಮ್ಮಣ್ಣ ಭಟ್ಟ ಘಟ್ಟಿ, ಅಪ್ಪು ಆಚಾರಿ, ಗಾಬ್ರಿಯಲ್ ಫರ್ನಾಂಡೀಸ್, ಮಹಾಬಲೇಶ್ವರ ಭಟ್ಟ ಮಾಲದಮನೆ, ಸುಬ್ರಾಯ ಭಟ್ಟ ಧಾನ್ಯಾನಕೊಪ್ಪ, ರಾಘವೇಂದ್ರ ಭಟ್ ಕಬ್ಬಿನಗದ್ದೆ, ಹನುಮಂತ ಶಿವಪ್ಪ ಕೊರವರ, ವ್ಯವಸ್ಥಾಪಕ ಎಂ ಎಸ್ ಹೆಗಡೆ ಇದ್ದರು.