`ಶಾಲೆಯಿಂದ ಮನೆಗೆ ಬರುತ್ತಿದ್ದ ಮಕ್ಕಳ ಅಪಹರಣ ಪ್ರಯತ್ನ’ ಎಂದು ಯಲ್ಲಾಪುರದಲ್ಲಿ ವದಂತಿ ಹಬ್ಬಿದ್ದು, ಅನೇಕರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಅಪಹರಣ ಪ್ರಯತ್ನ ನಡೆದ ವಿಷಯವನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಯಲ್ಲಾಪುರದ ಮಾವಿನಮನೆ ಗ್ರಾಮ ಪಂಚಾಯತ ಬಳಿಯ ಬಾರೆ-ಜೋಗಾಳಕೇರಿಯಲ್ಲಿ ಮಕ್ಕಳ ಅಪಹರಣ ಪ್ರಯತ್ನ ನಡೆದ ಬಗ್ಗೆ ವದಂತಿ ಹಬ್ಬಿದೆ. ಆ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿದ್ದು, ಇನ್ನೊಂದು ಸ್ವರೂಪಪಡೆದಿದೆ. ಜೋಗಾಳಕೇರಿಯ ಐವರು ಮಕ್ಕಳು ಶಾಲೆಯಿಂದ ಮನೆಗೆ ಮರಳುವಾಗ ಅಪರಿಚಿತರು ಅವರನ್ನು ಮಾತನಾಡಿಸಿದ್ದಕ್ಕೆ ರೆಕ್ಕೆ-ಪುಕ್ಕಗಳು ಸೇರಿಕೊಂಡಿದ್ದು, ಅಪರಿಚಿತರು ಮಕ್ಕಳನ್ನು ಹಿಂಬಾಲಿಸಿಕೊoಡು ಬಂದಿರುವುದಾಗಿ ಹಾಗೂ ಬಾಲಕಿಯೊಬ್ಬರನ್ನು ಅವರು ಬಲವಂತವಾಗಿ ಕಾರಿನಲ್ಲಿ ಕೊಂಡೊoಯ್ಯುವ ಪ್ರಯತ್ನ ನಡೆಸಿದ ಬಗ್ಗೆ ಊಹಾಪೋಹಗಳು ಶುರುವಾಗಿದೆ. ಈ ವಿಷಯದ ಬಗ್ಗೆ ಈ ದಿನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಿಚಾರಣೆ ಮಾಡಿದಾಗ `ಅಂಥ ಅಪಾಯಕಾರಿ ವಿದ್ಯಮಾನಗಳು ಯಾವುದು ನಡೆದಿಲ್ಲ’ ಎಂದು ಪೊಲೀಸರು ದೃಢಪಡಿಸಿದ್ದಾರೆ. `ಮಳೆಯಲ್ಲಿ ಮಕ್ಕಳು ಶಾಲೆಯಿಂದ ಮನೆಗೆ ಮರಳುತ್ತಿದ್ದು, ಆ ವೇಳೆ ಅಲ್ಲಿನ ಪ್ರವಾಸಿ ತಾಣಕ್ಕೆ ಬಂದಿದ್ದ ಕೆಲವರು ಮಕ್ಕಳನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಮಳೆಯಲ್ಲಿ ನಡೆದು ಹೋಗುತ್ತಿದ್ದ ಮಕ್ಕಳನ್ನು ಕಾರಿನಲ್ಲಿ ಬಿಡುವುದಾಗಿ ಹೇಳಿದ್ದಾರೆ. ಅಪರಿಚಿತರು ಮಾತನಾಡಿದನ್ನು ನೋಡಿದ ಮಕ್ಕಳು ಹೆದರಿ ಓಡಿ ಹೋಗಿದ್ದಾರೆ’ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿದೆ.
ಆ ಭಾಗದ ಬೀಟ್ ಪೊಲೀಸ್ ಸಿಬ್ಬಂದಿ ಕರ್ಣಕುಮಾರ ಹಾಗೂ ಶಿಕ್ಷಣ ಇಲಾಖೆಯ ಪ್ರಭಾಕರ ಭಟ್ಟ ಅವರು ಶನಿವಾರ ಶಾಲೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ಶಿಕ್ಷಕರು ಹಾಗೂ ಪಾಲಕರ ಬಳಿ ಇದೇ ವಿಷಯವಾಗಿ ಮಾತನಾಡಿದ್ದಾರೆ. ಜೊತೆಗೆ ಮಕ್ಕಳ ಆಪ್ತ ಸಮಾಲೋಚನೆಯನ್ನು ಸಹ ನಡೆಸಿದ್ದು, 4ನೇ ತರಗತಿ ಓದುವ ಮಕ್ಕಳು ಒಬ್ಬೊಬ್ಬರು ಒಂದೋAದು ರೀತಿ ಹೇಳಿದ್ದಾರೆ. ಎಲ್ಲವನ್ನು ಕೂಲಂಕುಷವಾಗಿ ವಿಚಾರಿಸಿದಾಗ `ಆ ದಿನ ನಡೆದಿದ್ದು ಮಕ್ಕಳ ಅಪಹರಣ ಪ್ರಯತ್ನವಲ್ಲ’ ಎಂದು ಗೊತ್ತಾಗಿದೆ. `ಆ ಭಾಗದ ಪ್ರವಾಸಿ ತಾಣಗಳಿಗೆ ಅನೇಕ ಅಪರಿಚಿತರು ಬರುತ್ತಿದ್ದು, ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಸೂರ್ಯ ಕಲ್ಯಾಣಿ ಗುಡ್ಡ ಸೇರಿ ಬೇರೆ ಬೇರೆ ಸ್ಥಳಕ್ಕೆ ಬರುವವರು ಮದ್ಯದ ನಶೆಯಲ್ಲಿ ಕೀಟಲೆ ಮಾಡುವುದನ್ನು ತಡೆಯಬೇಕು’ ಎಂದು ಊರಿನವರು ಆಗ್ರಹಿಸಿದ್ದಾರೆ.
`ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕ ಸಹಕಾರವೂ ಮುಖ್ಯವಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜನ ಪೊಲೀಸರಿಗೆ ಮಾಹಿತಿಕೊಡಬೇಕು. ಮಕ್ಕಳನ್ನು ಒಂಟಿಯಾಗಿ ಶಾಲೆಗೆ ಕಳುಹಿಸುವ ಬದಲು ಒಬ್ಬ ಪಾಲಕರಾದರೂ ಅವರ ಜೊತೆ ಹೋಗುವುದು ಉತ್ತಮ’ ಎಂದು ಪೊಲೀಸರು ಹೇಳಿದ್ದಾರೆ.