ಪಣಸೋಳಿ ಆನೆ ಶಿಬಿರದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಲಕ್ಕು ಪಟಗಾರೆ ಅವರು ಅಲ್ಲಿದ್ದ ಆನೆ ದಾಳಿಗೆ ಒಳಗಾಗಿದ್ದು, ಶಾಶ್ವತ ಅಂಗವೈಕಲ್ಯದಿoದ ಬಳಲುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಮಾತ್ರ ಲಕ್ಕು ಪಟಗಾರೆ ಅವರ ಕುಟುಂಬದವರಿಗಾಗಿ ಏನೂ ಮಾಡಿಲ್ಲ!
ದಾಂಡೇಲಿಯ ಪಣಸೋಲಿಯಲ್ಲಿ ಆನೆ ಶಿಬಿರವಿದ್ದು, ಅಲ್ಲಿ ಆನೆಗಳಿಗೆ ವಿವಿಧ ಬಗೆಯ ತರಬೇತಿ ನೀಡಲಾಗುತ್ತದೆ. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಹ ಇಲ್ಲಿನ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಬಡಾ ಕಾನ ಬಳಿಯ ಶಿರಡಾ ಗ್ರಾಮದ ಲಕ್ಕು ಖಂಡು ಪಟಕಾರೆ ಅವರು ಹೊರಗುತ್ತಿಗೆ ಆಧಾರದಲ್ಲಿ ಇಲ್ಲಿ ಕೆಲಸಕ್ಕೆ ಸೇರಿದ್ದು, ಅವರು ಅಲ್ಲಿ ಆನೆ ಕಾವಾಡೆಯಾಗಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. 2025ರ ಜುಲೈ 30ರಂದು ಕರ್ತವ್ಯದಲ್ಲಿದ್ದ ಅವರಿಗೆ ಅಲ್ಲಿದ್ದ ಆನೆಯೊಂದು ದಾಳಿ ಮಾಡಿತು. ಅದರಿಂದ ಲಕ್ಕು ಪಟಕಾರೆ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದರು. ಆ ವೇಳೆ ಅವರ ಯೋಗಕ್ಷೇಮ ವಿಚಾರಣೆಗೆ ಬಂದ ಕೆಲ ಅಧಿಕಾರಿಗಳು ಪುಡಿಗಾಸು ನೀಡಿ ಪ್ರಕರಣ ಮುಚ್ಚುವ ಪ್ರಯತ್ನ ಮಾಡಿದ್ದು ಬಿಟ್ಟರೆ, ಅವರ ಅಂಗವೈಕಲ್ಯಕ್ಕೆ ಶಾಶ್ವತ ಪರಿಹಾರ ಒದಗಿಸುವ ಕೆಲಸವನ್ನು ಮಾತ್ರ ಮಾಡಲಿಲ್ಲ.
ಲಕ್ಕು ಪಟಕಾರೆ ಅವರನ್ನು ಮೊದಲು ದಾಂಡೇಲಿ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಧಾರವಾಡದ SDM ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಆ ಚಿಕಿತ್ಸೆಯಿಂದ ಅವರ ಆರೋಗ್ಯ ಮೊದಲಿನ ಹಾಗೇ ಆಗಲಿಲ್ಲ. ಅದರಿಂದ ಮೊದಲಿನ ಹಾಗೇ ಚುರುಕಾಗಿ ಕೆಲಸ ಮಾಡಲು ಸಹ ಲಕ್ಕು ಪಟಕಾರೆ ಅವರಿಂದ ಸಾಧ್ಯವಾಗಲಿಲ್ಲ. ಇದನ್ನು ಅರಿತ ಅಧಿಕಾರಿಗಳು ಲಕ್ಕು ಪಟಗಾರೆ ಅವರನ್ನು ಕೆಲಸದಿಂದ ತೆಗೆದರು. ಕೆಲಸದಿಂದ ಬಿಡುಗಡೆ ಮಾಡುವಾಗ ಅವರಿಗೆ ಕಿಂಚಿತ್ತು ಆರ್ಥಿಕ ಸಹಾಯ ಮಾಡಲಿಲ್ಲ. ಕೆಲಸವಿಲ್ಲದ ಕಾರಣ ಲಕ್ಕು ಪಟಕಾರೆ ಅವರ ಕುಟುಂಬ ಬೀದಿಗೆ ಬಂದಿದ್ದು, ಅರಣ್ಯ ಅಧಿಕಾರಿಗಳು ಸಹ ಅವರಿಗೆ ಸರ್ಕಾರದಿಂದ ಯೋಗ್ಯ ಪರಿಹಾರ ಕೊಡಿಸಲಿಲ್ಲ. ಸಂಕಷ್ಟ ಕುಟುಂಬಕ್ಕೆ ಪರಿಹಾರ ಅಗತ್ಯವಿರುವ ಬಗ್ಗೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಸಹ ಮಾಡಲಿಲ್ಲ.
ಕರ್ತವ್ಯದ ವೇಳೆ ಅವಘಡ ನಡೆದಿದ್ದರಿಂದ ಲಕ್ಕು ಪಟಗಾರೆ ಅವರಿಗೆ ಸೂಕ್ತ ಪರಿಹಾರ ಬರಬೇಕಿತ್ತು. ಅವರ ಆರೋಗ್ಯಕ್ಕೆ ಅನುಗುಣವಾಗಿ ಪರ್ಯಾಯ ಉದ್ಯೋಗ ಸಿಗಬೇಕಿತ್ತು. ಅಥವಾ ಜೀವನಕ್ಕೆ ಆಧಾರವಾಗುವ ರೀತಿಯಲ್ಲಿ ಆರ್ಥಿಕ ನೆರವನ್ನಾದರೂ ಕೊಡಬೇಕಿತ್ತು. ಕರಡಿ ದಾಳಿಗೆ ಒಳಗಾದವರಿಗೆ 10 ಲಕ್ಷ ರೂವರೆಗೆ ಪರಿಹಾರ ನೀಡಿರುವ ನಿರ್ದೇಶನಗಳಿರುವಾಗ ಆನೆ ದಾಳಿಗೆ ಒಳಗಾದವರಿಗೆ ಕಿಂಚಿತ್ತು ಕಾಸು ನೀಡದಿರುವುದು ಅಸಮಧಾನಕ್ಕೆ ಕಾರಣಯಿತು. ಅದರಲ್ಲಿಯೂ, ಅರಣ್ಯ ಇಲಾಖೆಯೇ ಸಾಕಿದ ಆನೆ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರನ ಮೇಲೆ ದಾಳಿ ಮಾಡಿದರೂ ಅಧಿಕಾರಿಗಳು ಅಸಡ್ಡೆ ತೋರಿರುವುದು ಆಕ್ರೋಶ ಹೆಚ್ಚಿಸಿತು.